ದೇವರ ಆಶೀರ್ವಾದ ಕೇವಲ ಸೆಲೆಬ್ರೆಟಿಗಳಿಗೆ ಮಾತ್ರವೇ? ಸಾಮಾನ್ಯ ಭಕ್ತರಿಗೆ ಆ ಭಗವಂತ ಆಶೀರ್ವಾದ ನೀಡುವುದಿಲ್ಲವೇ ? ಭಗವಂತನೂ ಭಕ್ತರ ಮಧ್ಯೆ ತಾರತಮ್ಯ ಮಾಡುತ್ತಾನೆಯೇ? ದೇವರಾಜ ಚಾರ್ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ …
ಹೌದು, ಸಾಮಾನ್ಯ ವರ್ಗದವರಿಗೆ ದೇವರು ಸುಲಭವಾಗಿ ದರ್ಶನದ ಭಾಗ್ಯವಾಗುವುದಿಲ್ಲ. ತಪ್ಪು ಮಾಡಿದವನಿಗೆ, ಶ್ರೀಮಂತನಿಗೆ, ಸೆಲೆಬ್ರಿಟಿ ಅನ್ನಿಸಿಕೊಂಡವನಿಗೆ, ರಾಜಕೀಯ ವ್ಯಕ್ತಿಗೆ, ಅಧಿಕಾರಿ ವರ್ಗದವರಿಗೆ ಸುಲಭವಾಗಿ, ಯಾವುದೇ ತೊಂದರೆ ಇಲ್ಲದೆ ದರ್ಶನ ಭಾಗ್ಯ ಸಿಗುತ್ತದೆ. ಒಂದು ವಾರ ಟಿ ವಿ ನಲ್ಲಿ ಕಾಣಿಸಿಕೊಂಡರೆ ಸಾಕು ಅವರು ಸೆಲಿಬ್ರೆಟಿಗಳಾಗುತ್ತಾರೆ. ಇಂತಹವರಿಗೆ ಮುಖ್ಯ ಅರ್ಚಕರೆ ದೇವರ ಪೂಜೆ ಮಾಡಿ ಮಂಗಳಾರತಿ ಕೊಡುತ್ತಾರೆ. ಹೂವಿನ ಹಾರ ಹಾಕುತ್ತಾರೆ. ದೇವಸ್ಥಾನಕ್ಕೆ ಸೇರಿದ ಶಾಲು ಸಹ ಹೊದಿಸಿ ದೇವರ ಸನ್ನಿಧಿಯಲ್ಲಿ ಸನ್ಮಾನ ಮಾಡುತ್ತಾರೆ.
ಸಾಮಾನ್ಯ ಸರದಿಯಲ್ಲಿ ಬಂದವರಿಗೆ ತಡೆಹಿಡಿಯುತ್ತಾರೆ. ಕಾರಣ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಮಂಗಳಾರತಿ, ನೈವೇದ್ಯ ಅರ್ಪಣೆ ಈ ರೀತಿ ಇತ್ಯಾದಿ ಕಾರಣಗಳು. ಇದರಿಂದ ನೂಕು ನುಗ್ಗಲು ಉಂಟಾಗಿ ಸಾಕಪ್ಪ ಅನ್ನಿಸಿ ಬಿಡುತ್ತದೆ. ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಎಲ್ಲಾ ಅನುಭವಗಳು ಆಗುತ್ತವೆ. ಹಣ ಇರಬೇಕು ಅಥವಾ ವಸೂಲಿ ಇರಬೇಕು. ಇಂಥವರಿಗೆ ದೇವರ ದರ್ಶನ ಸುಲಭವಾಗಿ ಸಿಗುತ್ತದೆ.
ಒಂದು ಸಾಮಾನ್ಯ ಗುಂಪು ದೇವರ ದರ್ಶನ ಮಾಡುವುದು ಒಳ್ಳೆಯದಾಗಲಿ ಅನ್ನುವ ನಂಬಿಕೆಯಿಂದ. ಇನ್ನೊಂದು ವರ್ಗ ತಮ್ಮ ತಪ್ಪು ಎದ್ದು ಕಾಣದಿರಲಿ, ಶ್ರೀಮಂತಿಕೆ ಬರಲಿ, ಅಧಿಕಾರ ಸಿಗಲಿ ಎನ್ನುವ ಕಾರಣದಿಂದ. ಮಾಜಿ ಮಂತ್ರಿಗೆ, ತಪ್ಪು ಮಾಡಿ ಸಿಕ್ಕಿಹಾಕಿಕೊಂಡವನಿಗೆ, ಜೈಲಿನಿಂದ ಬಂದವನಿಗೆ ವಿಶೇಷ ಬಸ್, ವಿಶೇಷ ಕಾರ್ ವ್ಯವಸ್ಥೆ, ವಿಶೇಷ ಸ್ಥಳೀಯ ಸಾರಿಗೆ ಸಂಪರ್ಕ ಸಿಗುತ್ತೆ. ಇದಕ್ಕೆ ಏನನ್ನುವುದು?
- ದೇವರಾಜ ಚಾರ್ – ಮೈಸೂರು
