‘ಸಾಸಿವೆ ತಂದವಳು’ ಕೃತಿ ಕುತೂಹಲ ಹುಟ್ಟಿಸುವ, ಹಾಗೇ ನಮ್ಮ ಜೀವ ಜಗತ್ತಿಗೆ ಉಪಯುಕ್ತವಾಗಬಲ್ಲ ಪುಸ್ತಕ. ಹೆಸರು “ಸಾಸಿವೆ ತಂದವಳು”…ನನಗೆ ಈ ಹೆಸರು ಓದುತ್ತಿದ್ದಂತೆ ನೆನಪಾದದ್ದು ಬುದ್ದನ ಎದುರು ತನ್ನ ಕಂದನ ಶವವನ್ನಿಟ್ಟು, ಪ್ರಾಣ ಕೊಡುವಂತೆ ಬುದ್ಧನನ್ನು ಬೇಡುತ್ತಿರುವ ಹೆಣ್ಣು ಮಗಳ ಚಿತ್ರ.
ಆದರೆ ಸಾವಿಲ್ಲದ ಮನೆಯ ಸಾಸಿವೆ ತರಲಾಗದೆ ಅವಳು ನಿರಾಶಳಾಗುತ್ತಾಳೆ. ಇಲ್ಲಿ ಸಾವಿನ ಸಾಕಾರವಾದ ಕ್ಯಾನ್ಸರ್ ರೋಗವನ್ನು ಲೇಖಕಿ ಹೇಗೆ ಗೆದ್ದರು ಎನ್ನುವ ಕಥಾನಕವಿದೆ ಮತ್ತು ಅದಕ್ಕೆ ವೈದ್ಯರು ತೋರಬೇಕಾದ ಸಹಾನಭೂತಿ,ಕುಟುಂಬದ ಪ್ರೀತಿ, ಸ್ನೇಹಿತರ ಸಹನೆ, ಔಷದೋಪಚಾರ ಮತ್ತು ರೋಗಕ್ಕೆ ಅಗತ್ಯವಾದ ಪೋಷಕಾಂಶಗಳ ಪೂರೈಕೆ ಎಲ್ಲದರ ಬಗ್ಗೆ ಬಹಳ ವಿವರವಾಗಿ ಚಿಂತಿಸಿ, ಬರೆದಿದ್ದಾರೆ.

ಆದರೆ ಇದೆಲ್ಲವನ್ನೂ ಕೇವಲ ಬೋಧನೆ ಎನ್ನವ ರೀತಿಯಲ್ಲಿ ಹೇಳದೆ,ತಮ್ಮದೇ ಆದ ಹಾಸ್ಯದ ಲಹರಿ, ಮಾನಸಿಕ ತೊಳಲಾಟ, ಎಲ್ಲಕ್ಕಿಂತ ಮುಖ್ಯವಾಗಿ ಬದುಕಲೇ ಬೇಕೆಂಬ ಛಲದಿಂದ ಸಾವಿನೊಂದಿಗೆ ಹೋರಾಡಿ ಗೆದ್ದಿರುವ ನೈಜ ಘಟನೆಯ ಚಿತ್ರಣ ಇಲ್ಲಿದೆ.
ಆದರೆ ರೋಗ ಬೆಳೆದ ನಂತರ ಅವರು ಚಿಕಿತ್ಸೆಗೆ ಹೋಗಿದ್ದರಿಂದ ಅನುಭವಿಸಿರುವ ಯಾತನೆ ಕಡಿಮೆಯೇನಲ್ಲ. ಅದನ್ನವರು ವಿವರಿಸಿರುವ ಪರಿ ಅನನ್ಯವಾದದ್ದು. ಕೀಮೋ ನಂತರ ಅವರು ಅನುಭವಿಸಿದ ಭಯಂಕರ ನೋವಿನ ಬಗ್ಗೆ ಹೀಗೆ ಬರೆದಿದ್ದಾರೆ. “ಹೊಟ್ಟೆಯನ್ನು ಒಂದು ಪಾತ್ರೆಯ ಹಾಗೆ ಭಾವಿಸಿಕೊಳ್ಳಿ, ಅದರ ಪೂರ್ತಿ ಸಂಕಟವನ್ನು ತುಂಬಿಸಿ ಒಂದು ದೊಡ್ಡ ಸೌಟಿನಲ್ಲಿ ಹೊಟ್ಟೆಯಲ್ಲಿರುವ ಸಂಕಟವನ್ನು ಕಲಕಿದರೆ
ಹೇಗಿರುತ್ತದೋ ಹಾಗೆ ಈ ಫೀಲಿಂಗ್.
ಈ ಜುಜುಬಿ ಕ್ಯಾನ್ಸರ್ ನಿಂದ ಜನ ಸಾಯ್ತಿದ್ರಾ?!!ಅಂತ ಜಗತ್ತು ಆಶ್ಚರ್ಯಪಡುವಂತಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ ಬರಹ ಮುಗಿಸಿರುವ ಈ ಪುಸ್ತಕವನ್ನು ಮಂಗಳೂರು ವಿ.ವಿ. ಪಠ್ಯವಾಗಿ ಆಯ್ಕೆ ಮಾಡಿಕೊಂಡಿರುವುದು ಅಭಿನಂದನಾರ್ಹ.
ಇದರೊಂದಿಗೆ ಅನೇಕ ಕ್ಯಾನ್ಸರ್ ರೋಗಿಗಳನ್ನು ಕಂಡು ರೋಗವನ್ನು ಅಧ್ಯಯನ ಮಾಡಿ, ರೋಗದ ವಿಧಗಳು, ಗುಣ ಲಕ್ಷಣ, ಗುಣಪಡಿಸಿಕೊಳ್ಳಬಹುದಾದ ವಿಧಾನ ಎಲ್ಲದರ ಬಗ್ಗೆ ಬರೆಯುತ್ತಾ,ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಮುನ್ನುಡಿ ಬರೆದಿರುವ ನೇಮಿಚಂದ್ರ ಅವರ ಬರಹ ಬಹಳ ಮೌಲಿಕವಾಗಿದ್ದು,ಪುಸ್ತಕಕ್ಕೆ ಪೂರಕವಾಗಿದೆ.ಒಂದು ಉತ್ತಮ ವಾದ ಪುಸ್ತಕವನ್ನು ಓದಿದ ಖುಷಿ ನನ್ನದಾಗಿದೆ.
ಲೇಖಕರು: ಶ್ರೀಮತಿ ಪ್ರಮೀಳಾ ಕಲ್ಕೆರೆ.
