ವಯಸ್ಸಾದಂತೆಲ್ಲ ಬಾಲ್ಯವೇ ಚನ್ನಾಗಿತ್ತು, ಮತ್ತೆ ಬಾಲ್ಯಕ್ಕೆ ಹೋಗುವ ಅವಕಾಶ ಸಿಕ್ಕರೆ ಈಗ ಮಾಡಿದ ತಪ್ಪುಗಳನ್ನು ಮತ್ತೆ ಮಾಡೋದಿಲ್ಲ, ಏನೇನೋ ಭ್ರಮೆಯಲ್ಲಿರುತ್ತೇವೆ, ಆ ಭ್ರಮೆಯ ಕುರಿತು ಲೇಖಕ ನಟರಾಜು ಮೈದುನಹಳ್ಳಿ ಅವರು ಬರೆದ ಒಂದು ಚಿಂತನ ಲೇಖನ, ತಪ್ಪದೆ ಓದಿ…
30-35 ರ ವಯಸ್ಸಿನಲ್ಲಿ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಾರಿ ಯೋಚಿಸೋ ವಿಷಯ- “ಮತ್ತೆ ಬಾಲ್ಯದಿಂದ ಬದುಕೋ ಅವಕಾಶ ನನಗೆ ಸಿಕ್ಕಿದರೆ ಬೇರೆ ರೀತಿಯೇ ಬದುಕ್ತೇನೆ. ಈ ಮೊದಲು ಬಾಲ್ಯದಲ್ಲಿ ಏನೇನು ತಪ್ಪು ಮಾಡಿದ್ದೇನೋ ಅವುಗಳನ್ನು ಮತ್ತೆ ಮಾಡಲ್ಲ. ಬಾಲ್ಯದಲ್ಲಿ ಮಿಸ್ ಮಾಡ್ಕೊಂಡಿರೋ ಸಂತೋಷಗಳನ್ನು ಈ ಸಾರಿ ಸರಿಯಾಗಿ ಎಂಜಾಯ್ ಮಾಡ್ತೇನೆ. ಚೆನ್ನಾಗಿ ಓದ್ತೇನೆ, ಸ್ಟೂಡೆಂಟ್ ಲೈಫ್ ಚೆನ್ನಾಗಿ ಎಂಜಾಯ್ ಮಾಡ್ತೇನೆ. ಒಳ್ಳೆಯ ಕೆಲಸಕ್ಕೆ ಸೇರ್ತೇನೆ. ಕೆಟ್ಟ ಅಭ್ಯಾಸಗಳು ಕಲಿಯಲ್ಲ. ಇನ್ನೂ ಬೆಟರ್ ಆಗಿರೋ (?) ಜೀವನ ಸಂಗಾತಿಯನ್ನು ಆಯ್ಕೆ ಮಾಡ್ಕೊಳ್ತೇನೆ. ವ್ವೆ..ವ್ವೆ..ವ್ವೆ…” ಹೀಗೆ ಆಗದೆ ಇರುವ ವಿಷಯದ ಬಗ್ಗೆ ಹಳೆಯ ಹಳವಂಡಗಳನ್ನು ಕೆದಕಿಕೊಂಡು ಹಲುಬುವ ಬದಲು ಈಗ 35 ರ ನಂತರದ ಜೀವನವನ್ನು ಅರ್ಥಪೂರ್ಣವಾಗಿ ಸಾರ್ಥಕವಾಗಿ ಬದುಕಬೇಕೆಂಬುದರ ಬಗ್ಗೆ ಯೋಚಿಸೋಲ್ಲ.
ಮತ್ತೆ 60 ರ ವಯಸ್ಸಿನಲ್ಲಿ “35 ರಿಂದ 55 ರವರೆಗೆ ನಾನು ಇನ್ನಷ್ಟು ದುಡಿಯಬಹುದಾಗಿತ್ತು. ದುಡಿಯೋದಕ್ಕೆ ಎಷ್ಡೆಲ್ಲಾ ಅವಕಾಸಗಳಿದ್ದವು. ಮಿಸ್ ಮಾಡ್ಕೊಂಡೆ. ಎಷ್ಟೆಲ್ಲಾ ಟ್ರಿಪ್ ಸುತ್ತಬಹುದಾಗಿತ್ತು. ಈ ವೃದ್ಧಾಪ್ಯದ ಜೀವನಕ್ಕೆ ಸ್ವಲ್ಪ ಹಣ ಕೂಡಿಟ್ಕೋಬೇಕಾಗಿತ್ತು. ಹಣ ಹಣ ಅಂಥ ದುಡಿಯುತ್ತಾ ಜೀವನದಲ್ಲಿ ಏನೂ ಎಂಜಾಯ್ ಮಾಡದೆ ಜೀವನ ವೇಸ್ಟ್ ಮಾಡ್ಕೋಬಿಟ್ಟೆ. ಏನೂ ಅನುಭವಿಸಲಿಲ್ಲ. ಅಪ್ಪ ಅಮ್ಮನನ್ನು ಇನ್ನಷ್ಟು ಚೆನ್ನಾಗಿ ನೋಡ್ಕೋಬೇಕಾಗಿತ್ತು. ಮಕ್ಕಳನ್ನು ಇನ್ನಷ್ಟು ಚೆನ್ನಾಗಿ ಶಿಸ್ತಿನಿಂದ ಬೆಳೆಸಬೇಕಾಗಿತ್ತು. ಒಮ್ಮೆ ಹಿಂತಿರುಗಿ ನೋಡಿದರೆ ಅನಿಸುತ್ತೆ- ಬರೀ ಹೆಂಡತಿ ಮಕ್ಕಳಿಗೋಸ್ಕರಾನೇ ಬದುಕಿಬಿಟ್ಟೆ. ನನಗೋಸ್ಕರ ಅಂಥ ಏನೂ ಅನುಭವಿಸಲಿಲ್ಲ. ಮತ್ತೆ 35 ರ ಏಜ್ ನಿಂದ ಬದುಕಲು ಅವಕಾಶ ಸಿಕ್ಕಿದರೆ ಬೇರೆ ರೀತಿಯೇ ಬದುಕುತ್ತೇನೆ ” ಹೀಗೆ ಕೊರಗುವುದು ತಪ್ಪುತ್ತದೆ.

ಬಾಲ್ಯದಲ್ಲಿ ಲೇಖಕರು
ಅದಕ್ಕೋಸ್ಕರ ನಮ್ಮ ಹಿಂದಿನ ಜೀವನದಲ್ಲಿ ಏನೇ ಆಗಿರಲಿ, ಕೊರಗುವುದು ಬೇಡ. ಈಗ ನಾವು ಯಾವುದೇ ವಯಸ್ಸಿನಲ್ಲಿರಲಿ ಮುಂದಿನ ಜೀವನವನ್ನು ಚೆನ್ನಾಗಿ ಬದುಕುವುದರ ಬಗ್ಗೆ ಯೋಚಿಸೋಣ.
ಒಂದು ವಿಷಯ– ಅಕಸ್ಮಾತ್ ಮತ್ತೆ ನಮಗೆ ಮೊದಲಿನಿಂದ ಬದುಕುವ ಅವಕಾಶ ಸಿಕ್ಕಿದರೂ ನನ್ನ ಪ್ರಕಾರ ಬಹಳ ಬ್ಯೂಟಿಫುಲ್ ಆಗೇನೂ ಬದುಕಲ್ಲ. ಅದೇ ತಪ್ಪುಗಳು, ಅದೇ ಹಳವಂಡಗಳಲ್ಲೇ ತೊಳಲಾಡ್ತೇವೆ.
ಅಂದ ಹಾಗೆ ಇಲ್ಲಿ ಹಾಕಿರುವ ಫೋಟೋ – 1974 ರಲ್ಲಿ ನಾನು 5 ವರ್ಷ ವಯಸ್ಸಿನವನಾಗಿದ್ದಾಗ, ನನ್ನ ಫೋಟೋ ತೆಗೆಸಲೇಬೇಕೆಂದು ಅಪ್ಪನ ಹತ್ತಿರ ಹಠ ಮಾಡಿದಾಗ, ಅವರು ನನ್ನನ್ನು ಮಧುಗಿರಿಗೆ ಕರೆದುಕೊಂಡು ಹೋಗಿ ಸ್ಟುಡಿಯೋದಲ್ಲಿ ತೆಗೆಸಿದ ಮೊದಲ ಫೋಟೋ.
- ನಟರಾಜು ಮೈದುನಹಳ್ಳಿ – ಲೇಖಕರು, ಪತ್ರಕರ್ತರು.
