ಗಜಲ್ ಕವಿ ನಾರಾಯಣಸ್ವಾಮಿ ಅವರ ‘ಅಂತರಂಗದ ಧ್ಯಾನ’ ಗಜಲ್ ಸಂಕಲನದ ಕುರಿತು ಕವಿಯತ್ರಿ ಅಮೃತ. ಎಂ ಡಿ ಅವರು ಬರೆದಿರುವ ಕೃತಿ ಪರಿಚಯವನ್ನು ತಪ್ಪದೆ ಮುಂದೆ ಓದಿ..
ಪುಸ್ತಕ: ಅಂತರಂಗದ ಧ್ಯಾನ
ಲೇಖಕರು:ನಾರಾಯಣಸ್ವಾಮಿ
ಪ್ರಕಾಶಕರು: ಆಶಾ ಪ್ರಕಾಶನ
ಬೆಲೆ: ೧೨೦/
ಶ್ರೀ ದೇವಿ ಕೆರೆಮನೆ ಅವರ ಮುನ್ನುಡಿ, ಅರುಣ ನರೇಂದ್ರ ಅವರ ಬೆನ್ನುಡಿ ಇಂದ ಕೂಡಿರುವ ಪುಸ್ತಕ ಇದಾಗಿದ್ದು. ಗಜಲ್ ನಲ್ಲಿ ಕಂಡುಬರುವ ಮೂಲ ನಿಯಮಗಳ ಪಾಲನೆ, ಒಂದೊಳ್ಳೆ ಗಜಲ್ ಪುಸ್ತಕ ಇದೆಂದು ನನ್ನ ವೈಯಕ್ತಿಕ ಅಭಿಪ್ರಾಯ.
ಪುಸ್ತಕವನ್ನು ವಿಮರ್ಶೆ ಮಾಡುವಷ್ಟು ಜ್ಞಾನ ನನ್ನಲ್ಲಿ ಇಲ್ಲ, ಗಜಲ್ ಸದಾಕಾಲ ಉಸಿರಾಡಿಸುವ ಆಮ್ಲಜನಕದ ಚಾತಿಗೆ ಸೇರಿದ್ದು ನೀ ಕಲಿತಷ್ಟು, ಕಲೆತಷ್ಟು ಹೊಸ ಭಾವಗಳ ಆವಿರ್ಭವಿಸುವ ಭಾವ ಗುಚ್ಛ ಇಲ್ಲಿದೆ. ಬೆತ್ತಲಾದ ಬಯಕೆಗಳು ಕತ್ತಲ ಬೆಳಕಿನಲ್ಲಿ ವಿಜೃಂಭಿಸುತ್ತಿವೆ ಎಂದು ನೆರವೇರದ, ಕೈಗೆ ಎಟುಕದ ಭಾವಗಳ ಸಮ್ಮಿಶ್ರ ಫಲ ಕಡೆಗೆ ವಿಷಾದ ತೋರುತ್ತಾ ವಾಸ್ತವವನ್ನು ಚಿತ್ರೀಕರಸಿ ಮೆರೆಸುತ್ತಿದ್ದಾರೆ.
ಹೊರಗೆ ಸಿಹಿಯ ಮಾತಾಡಿ ಒಳಗೊಳಗೇ ವಿಷ ಉಣಿಸುವರು , ಜಾತಿ ಧರ್ಮದ ಅಮಲನ್ನು ತುಂಬುವರು ಹೇಗೆ ಮರೆಯಲಿ. ಎಂದು ಜಾತಿ ಧರ್ಮದ ಅಂಧಕಾರ ನಮ್ಮನ್ನು ದಹಿಸಿ ದ್ವಂಸ ಮಾಡುವ ಮುನ್ನ ಬೆಳಕಿನ ಕಡೆಗೆ ಹಾಯಬೇಕಿದೆ. ಅಂಧಕಾರದ ಮುಸುಕಿನ ಮರೆಯಿಂದ ತೆರೆದು ನೋಡಬೇಕಾಗಿದೆ ಎಂದು ಹೇಳುವಲ್ಲಿ ಸಾಮಾಜಿಕ ಕಳಕಳಿ ಎಂದು ಕಾಣ ತೊಡಗುತ್ತದೆ.
ವೈಸರ್ಗಿಂತ ಮಾರಕವಾಗಿವೆ ಅಹಂಕಾರದ ಮನಸ್ಸುಗಳು ಬೀದಿಯೊಳಗೆ , ಎಂದು ಜನರ ಮನಸ್ಥಿತಿಯನ್ನು , ಬದಲಾಗುತ್ತಿರುವ ಸಮಾಜದ ಕುರಿತು ತಮ್ಮ ಕಳಕಳಿಯನ್ನು ವ್ಯಕ್ತ ಪಡಿಸುತ್ತಾರೆ. ಮೋಜು ಮಸ್ತಿ ಸಿರಿತನದ ಅಮಲು ಬದುಕನೆ ಕುರುಡಾಗಿಸುತಿದೆ ಎಂದು ಉಳ್ಳವರ, ಮತ್ತು ಇಲ್ಲದವರ ನಡುವಿನ ಅಂತರವನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿ ಕವಿ ಮನ ಮಾಡುತ್ತಿದೆ.
ಪ್ರೀತಿಯ ಹಪಾಹಪಿ, ಪ್ರೀತಿಸುವಳ ಹಾಜರಿ ಬದುಕ ತುಂಬಾ ರಸ ಮಂಜರಿಯ ತುಂಬುತ್ತಿದೆ ಎಂದು ಪ್ರೀತಿಯ ಆಪ್ತತೆಯನ್ನು ಪದಗಳ ಜೊತೆ ಬೆಸೆದು ಹರವಿದ್ದಾರೆ.ಮಡದಿ ಮನೆ ಮನ ತುಂಬಿದರೆ ಕಷ್ಟ, ಕಾರ್ಪಣ್ಯ ಹೊಸ್ತಿಲ ಆಚೆಗೆ ಎಂದು ತಮ್ಮ ಜೀವದ, ಜೀವನದ ಸಂಗಾತಿಯ ಒಲವನ್ನು ಅಕ್ಷಯ ಪಾತ್ರೆ ಎಂದು ಬಣ್ಣಿಸಿದ್ದಾರೆ. ಹಾಗೆ ಮುಂದುವರೆದು ವಿರಹದ ಬೇಗೆ, ಅಂತರ,ಇವುಗಳನ್ನು ಗಜಲ್ ಅಲ್ಲಿ ಸೆರೆ ಹಿಡಿದು ಪ್ರೀತಿಯ ತೀವ್ರತೆಯನ್ನು ವ್ಯಕ್ತ ಪಡಿಸುತ್ತಾರೆ.
ಭರತಖಂಡದ ಕೋಮುಗಲಭೆಗಳ ಕುರಿತು, ಬಾಪು ನೀಡಿದ ಕೊಡುಗೆಗಳನ್ನೂ ನೆನಪಿಸುವ ಇವರ ಹುಕಿ, ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ನೆನೆಪು ಮಾಡುತ್ತಾ, ದೇಶದ ಜೊತೆಗೆ ಕಟ್ಟಿಕೊಂಡ ಭಾವನಾತ್ಮಕ ಬಾಂಧವ್ಯವನ್ನು ತೋರ್ಪಡಿಸಿ ಓದುಗರ ಎದೆಯಲ್ಲಿ ದೇಶ ಪ್ರೇಮವನ್ನು ಹುಟ್ಟಿಸುತ್ತದೆ.
ಅಂಧಕಾರದ ನಡುವಲ್ಲಿ, ಮೂಢ ನಂಬಿಕೆಯ ನೆರಳಲ್ಲಿ ನಾವು ಸಾಯುತ್ತಿದೇವೆ, ಈಗಲಾದರೂ ಎಚ್ಚೆತ್ತು ನಡೆಯಿರಿ ,ನಾವೆ ಹಾಕಿಕೊಂಡ ಬೇಲಿ ದಾಟಿ ಹೊರಗೆ ನಡೆಯುವ ಎನ್ನುವ ಭಾವ ಜನತೆಯ ಮೇಲಿನ ಕಳ-ಕಳಿಯನ್ನು ತೋರುತ್ತದೆ. ಧುಮ್ಮಿಕ್ಕುವ ಜಲಧಾರೆಯಲೀ ಕೊಚ್ಚಿ ಹೋಗಲಿ ಭ್ರಮೆಗಳು ಎಂದು ಹೇಳುತ್ತ, ವಾಸ್ತವ ಲೋಕಕ್ಕೆ ಬನ್ನಿ ಎಂದು ಕರೆಯುತ್ತಾರೆ.
ಪ್ರೀತಿಯ ಮಾಯೆ, ಮೋಹ, ಇವುಗಳ ದಾಟಬೇಕು ಎಂದು ಲೇಖಕ ಹೇಳುವಾಗ ಇವರ ಸಮಾಜ ಮುಖಿ ಚಿಂತನೆಯ ನಾವು ಕಾಣಬಹುದು. ಮತ ಧರ್ಮದ ಮೌಢ್ಯದ ಸಂಕೋಲೆ ದಾಟುವ ಭಾವ ಇವರಲ್ಲಿ ಎದ್ದು ಕಾಣುತ್ತದೆ. ಅಂತರಾತ್ಮ ಬೀಸುವ ಗಾಳಿಯೊಳಗೆ ಮೀಯುವ ಎನ್ನುವಾಗ ಪ್ರೀತಿಯ ಗಾಢತೆ ಕ್ಷಣ ಕಾಲ ನಮ್ಮನ್ನು ಆವರಿಸಿ ಬಿಡುತ್ತದೆ.
ಮನುಜನಲಿ ಕರುಣೆ ಎಂಬ ಪದವೆ ಮರೆತು ಹೋಗಿದೆ ಎಂದು ತನ್ನ ದುಗುಡವ ವ್ಯಕ್ತ ಪಡಿಸುತ್ತಾ ಹೋಗ್ತಾರೆ. ಹೀಗೆ ಗಜಲ್ ಉದ್ದಕ್ಕೂ ನಮಗೆ ಇಂತಹದ್ದೆ ಪಾರಿಭಾಷಿಕತೆ, ಇಂತಹದ್ದೆ ಆಪ್ತತೆ ಮನ ಆವರಿಸುತ್ತದೆ.
- ಅಮೃತ. ಎಂ ಡಿ – ಕವಿಯತ್ರಿ, ಶಿಕ್ಷಕಿ, ಶಿವಮೊಗ್ಗ.