ಬೀದರ ಭಾಷೆ ಸಂಸ್ಕೃತಿ ಕುರಿತು ಸಾಹಿತಿಗಳು, ಬಸವಪರ ಚಿಂತಕರಾದ ರಜಿಯಾ ಬಳಬಟ್ಟಿ ಅವರು ತಮ್ಮ ಅಂಕಣ ಬರಹಗಳ ಪುಸ್ತಕವಾದ “ಆಸರಕಿ ಬ್ಯಾಸರಕಿ” ಪುಸ್ತಕದಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಈ ಕೃತಿಯ ಕುರಿತು ಲೇಖಕರಾದ ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಆಸರಕಿ ಬ್ಯಾಸರಕಿ (ಅಂಕಣ ಬರಹಗಳು)
ಲೇಖಕರು : ರಜಿಯಾ ಬಳಬಟ್ಟಿ.
ಪ್ರಕಾಶಕರು : ನ್ಯಾಷನಲ್ ಪ್ರಕಾಶನ ಬಾಗಲಕೋಟ್
ಬೆಲೆ :೧೨೫ ರೂಪಾಯಿ.
ಬೀದರ ಉಸ್ ಷಹರ ಕಾ ನಾಮ ಹೈ
ಜಿಸ್ ಕೆ ಮಲಬೆ ಸೇ ಗುಲದಾನ ನಿಕಲತೆ ಹೈo
ಯಹ ಷಹರ್ ರಹಾ ಹೋಗಾ ಶಾಯಿಸ್ತಾ ಮಿಜಾಜೋo ಕಾ”
ಅರ್ಥಾತ್ತ್ :
ಯಾವ ಊರಿನ ಭಗ್ನಾವಶೇಷದಲ್ಲೂ ಹೂವಿನ ಕುಂಡಗಳು ದೊರಕುತ್ತವೋ, ಆ ಊರಿಗೆ ಬೀದರ್ ಎಂದು ಹೆಸರು, ಇದು ಸನ್ನಡತೆಯ ನಾಗರಿಕರ ಊರು ಇದ್ದಿರಬೇಕು.
ಈ ಮಾತನ್ನು ಹೇಳಿದವರು ದೆಹಲಿಯ ಯುವ ಕವಿಗಳು ಹಾಗು ಪತ್ರಕರ್ತರಾದ ‘ಮೋಹಿನ್ ಶಾದಬ” ಅವರು ಅವರು ಕೆಲವು ವರುಷಗಳ ಹಿಂದೆ ಬೀದರ್ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಾಗ ಇಲ್ಲಿನ ವಾತಾವರಣ ಬೀದರ ಜನರ ಸನ್ನಡತೆ ಗುರುತಿಸಿ ಬಹಳ ಹರ್ಷದಿಂದ ಶಹರಿಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕವಿಗಳ ಮಾತು ಅಕ್ಷರಸಹ ಸತ್ಯ. ಬೀದರ ಜನ ಸರ್ವಕಾಲಿಕ ಸಜ್ಜನರು ಅವರ ಆಡು ಭಾಷೆ ಬಿರುಸಾಗಿದ್ದರು, ಹೃದಯವಂತ ಕರುಣೆಯ ಖಣಿ ಬೀದರ ಜನ.

ಬೀದರ ನಾಡು ಶರಣರ ಬೀಡು, ಬೀದರ ಜಿಲ್ಲೆಯು ಐತಿಹಾಸಿಕವಾಗಿ ಸಾoಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿ ಹಾಗು ವಿಶೇಷವಾಗಿ ೧೨ನೇ ಶತಮಾನದ ಬಸವಾದಿ ಶರಣರ ಕರ್ಮ ಭೂಮಿ ಹಾಗು ವಚನ ಚಳವಳಿಯ ಕೇಂದ್ರ ಬೀದರ ಜಿಲ್ಲೆಯ ಬಸವಕಲ್ಯಾಣವು ಬಸವಣ್ಣನವರು ಮತ್ತು ಶರಣರು ಅನುಭವ ಮಂಟಪ ದ ಮೂಲಕ ಸಮಾನತೆ, ಮತ್ತು ಸಾಮಾಜಿಕ ಸುಧಾರಣೆಗೆ ಅಡಿಪಾಯ ಹಾಕಿದ ಪವಿತ್ರ ಭೂಮಿಯಾಗಿದೆ.
ಬೀದರ ಜಿಲ್ಲೆ ಕರುನಾಡಿನ ಮುಕುಟ ಮಣಿಯಾಗಿದ್ದು ಕಲ್ಯಾಣ ನಾಡಿನ ಶರಣರಂತೆ ಸೂಫಿ ಸಂತರು ಓಡಾಡಿರುವ ಹಾಗು ಐತಿಹಾಸಿಕ ಪ್ರವಾಸಿ ತಾಣಗಳು ಪವಿತ್ರ ಪ್ರೇಕ್ಷಣಿಯ ಸ್ಥಳಗಳಾದ ಬೀದರ ಕೋಟೆ, ಗುರುನಾನಕ ಝಾರ, ಪಾಪನಾಶ ದೇವಾಲಯ, ನರಸಿಂಹ ಝರಣ ಗುಹೆ, ಹೊನ್ನಕೇರಿ ಸಿದ್ದೇಶ್ವರ ಮಂದಿರ, ಮಾಣಿಕ ಪ್ರಭು ವಿದ್ಯಾಲಯ ಕೇಂದ್ರ, ಭಾಲ್ಕಿ ಹಿರೇಮಠ, ಹೀಗೆ ಅನೇಕ ಐತಿಹಾಸಿಕ ತಾಣಗಳಿಂದ ಬೀದರ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುವಂತಿದೆ.
ಬೀದರ ಭಾಷೆ ಬಗ್ಗೆ ಹೇಳಬೇಕಾದರೆ ಇಲ್ಲಿನ ಕನ್ನಡ ಭಾಷೆ ಕೇಳಲು ಬಿರುಸಾದರೂ ಹೃದಯಸ್ಪರ್ಶಿ ಅನುಭೂತಿ ನೀಡುವಾದಾಗಿದೆ. ಮರಾಠಿ, ಉರ್ದು, ಹಿಂದಿ ಮತ್ತು ತೆಲುಗು ಭಾಷೆಗಳ ಪ್ರಭಾವದಿಂದಾಗಿ ತನ್ನದೇಯಾದ ವಿಶಿಷ್ಟ ದೇಶೀ ಸೊಗಡನ್ನು ಹೊಂದಿರುವ ಎಲ್ಲ ಭಾಷೆಗಳ ಮಿಶ್ರಿತ ಭಾಷೆಯ ಕಂಪನ್ನು ಸೂಸುವ ಕನ್ನಡ ಭಾಷೆ ಬೀದರ ಭಾಷೆಯಾಗಿದೆ.
ಬೀದರ ಭಾಷೆ ಸಂಸ್ಕೃತಿ ಕುರಿತು ಸಾಹಿತಿಗಳು, ಬಸವಪರ ಚಿಂತಕರಾದ ಶ್ರೀಮತಿ ರಜಿಯಾ ಬಳಬಟ್ಟಿ ಅವರು ತಮ್ಮ ಅಂಕಣ ಬರಹಗಳ ಪುಸ್ತಕವಾದ “ಆಸರಕಿ ಬ್ಯಾಸರಕಿ” ಪುಸ್ತಕದಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ.
ಲೇಖಕಿ ಶ್ರೀಮತಿ ರಜಿಯಾ ಬಳಬಟ್ಟಿ ಅವರ ಕುರಿತು ಹೇಳಬೇಕಾದರೆ ಅವರು ಮೂಲತಃ ಬಿಜಾಪುರ (ವಿಜಯಪುರ)ಜಿಲ್ಲೆಯ ಬಾಗಲಕೋಟ ತಾಲೂಕಿನವರು. ಇವರು ೨೦೦೯ರಲ್ಲಿ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮೈಸೂರು ಇದರ ಪ್ರತಿನಿಧಿಯಾಗಿ ಬೀದರ ಜಿಲ್ಲಾ ಸಂಯೋಜಕಿಯಾಗಿ ಬೀದರ ನಾಡಿಗೆ ಬಂದವರು, ತದನಂತರ ಬೀದರ ಜಿಲ್ಲೆಯ ವಿವಿಧ ಸಂಸ್ಥೆಗಳ ಸಂಯೋಜಕಿಯಾಗಿ ಜನ ಮನ್ನಣೆ ಗಳಿಸಿದರು, ಹಾಗಾಗಿ ವಿಜಯಪುರ ಜಿಲ್ಲೆ ಇವರ ಜನ್ಮ ಭೂಮಿಯಾದರೆ ಬೀದರ ಇವರ ಕರ್ಮಭೂಮಿಯಾಯಿತು.

ವೃತ್ತಿಯಲ್ಲಿ ಸಂಸ್ಥೆಗಳ ಜವಾಬ್ದಾರಿ ಕೆಲಸದ ಜೊತೆಗೆ ಸಾಹಿತ್ಯಕೃಷಿ ಮಾಡುವ ಶ್ರೀಮತಿ ರಜಿಯಾ ಅವರು ಬಸವಪರ, ಜೀವ ಪರ, ಜನಪರ ಚಿಂತಕರು ಕೂಡ ಆಗಿರುವರು.
ಲೇಖಕಿ ರಜಿಯಾ ಅವರ “ಆಸರಕಿ ಬ್ಯಾಸರಕಿ” ಪುಸ್ತಕದಲ್ಲಿ ಒಟ್ಟು ೨೦ ಅಂಕಣ ಬರಹಗಳ ಪುಸ್ತಕವಾಗಿದ್ದು ಅವುಗಳಲ್ಲಿ ಕೆಲವು ಲೇಖನಗಳು ಈಗಾಗಲೇ “ವಿಜಯ ಕರ್ನಾಟಕ” ಕನ್ನಡ ದಿನ ಪತ್ರಿಕೆ ಸೇರಿದಂತೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಹಾಗು ಅಪ್ರಕಟಿತ ಲೇಖನಗಳು ಸೇರಿ ಒಟ್ಟಾಗಿ “ಆಸರಕಿ ಬ್ಯಾಸರಕಿ” (ಅಂಕಣ ಬರಹ)ಲೇಖನಗಳು ಹೊರ ತರುವ ಮೂಲಕ ಬೀದರ, ಔರಾದ ಸೇರಿದಂತೆ ಜಿಲ್ಲೆಯ ಭಾಷೆ ಸಂಸ್ಕೃತಿಅಲ್ಲಿನ ಜನರ ಬದುಕು ರೀತಿ ನೀತಿ ಕುರಿತು ಬೆಳಕು ಚೆಲ್ಲಿದ್ದಾರೆ.
ಬೀದರ ಕನ್ನಡ ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವ ರಜಿಯಾ ಅವರು ಮೊದ ಮೊದಲಿಗೆ ಬೇಸರವನ್ನು ವ್ಯಕ್ತಪಡಿಸುವ ಜೊತೆ ಜೊತೆಗೆ ಇಲ್ಲಿನ ಜನರ ಆಚಾರ ವಿಚಾರ ಗಳಿಗೆ ಮಾರು ಹೋಗಿ ಬೀದರನ್ನು ಅಪ್ಪಿಕೊಂಡರು.
ಬೀದರ ಕನ್ನಡದ ಕುರಿತು ಅವರು ಬರೆದ ಪುಸ್ತಕ ಕನ್ನಡದ ಭಾವ ಭಿನ್ನತೆಯ ಬಗ್ಗೆ ಇರುವ ಶ್ರೇಷ್ಠ ಲೇಖನಗಳಲ್ಲಿ ಈ ವೊಂದು ಲೇಖನ ಅನಿಸುತ್ತದೆ. ಇಬ್ಬರು ಪಕ್ಕಾ ಬೀದರ ಕನ್ನಡ ಮಾತಾಡುವವರು ಭೇಟಿಯಾದರೆ ಭಾಷೆ ಅರ್ಥವಾಗದ ಮೂರನೇ ವ್ಯಕ್ತಿ ಕಣ್ಣು ಬಿಟ್ಟು ನೋಡುವ ಪರಿಯನ್ನು ಪ್ರಾರಂಭದಲ್ಲಿ ಅವರು ಬೀದರ ಜಿಲ್ಲೆಗೆ ಕಾಲಿಟ್ಟ ಅನುಭವವನ್ನು ಓದುಗರಲ್ಲಿ ಲೇಖನದ ಮೂಲಕ ಹಂಚಿಕೊಂಡಿದ್ದಾರೆ.
ಬೀದರ ಭಾಷೆ ಜನರ ಆಚಾರ ವಿಚಾರದ ಕುರಿತು ತಮಗಾದ ಅನುಭಾವದ ಪ್ರಸಂಗವೊಂದು ಈ ರೀತಿ ಬರೆದುಕೊಂಡಿದ್ದಾರೆ.
“ಕಲ್ ಹಮಾರೆ ಘರಮೇ ಗಣಪತಿಕಾ ಇದ್ ಹೈ” ಆಪಕೋ ದಾವತ್ ಮೇ ಜರೂರ್ ಅನಾ ಹೈ ” ಅಂತ ಸ್ನೇಹಿತರೊಬ್ಬರು ಆಮಂತ್ರಣ ನೀಡಿದಾಗ ಅವರಿಗೆ ಆದ ಗಾಬರಿ ಜೊತೆಗೆ ಆದ ಸಂತೋಷದ ಸಂಗತಿಯನ್ನು ಇಲ್ಲಿ ಉಲ್ಲೆಖಿಸಿದ್ದಾರೆ.
ಬೀದರ ಜಿಲ್ಲೆಯ ಮುಸ್ಲಿಂ ಜನಾಂಗದ ಮದುವೆ ಪದ್ಧತಿಯ ಕುರಿತು ಸಾಮಾಜಿಕ ಸಂಸ್ಕೃತಿ ಭಿನ್ನತೆ ಔರಾದ ಅಮರೇಶ್ವರ ದೇವಾಲಯದಲ್ಲಿರುವ ೧೧ ನೇ ಶತಮಾನದ ಕನ್ನಡ ಮತ್ತು ಉರ್ದು ಭಾಷೆಯ ಶಾಸನಗಳು ಶರಣೆ ಧೂಪದ ಗುಗ್ಗವ್ವೆ ಕುರಿತು ಸ್ವಾತಂತ್ರಪೂರ್ವ ಕಮಲ ನಗರ ನಿಜಾಮರ ಕಾಲದ ರೇಲ್ವೆ ನಿಲ್ದಾಣ, ಭಾಲ್ಕಿ ಚೆನ್ನಬಸವ ಪಟ್ಟದೇವರ ಪವಿತ್ರ ಜನ್ಮ ಭೂಮಿ ಕುರಿತು, ಬೀದರನ ಕೋಟೆ, ಸಾಹಿತ್ಯ ಸಂಗೀತ, ಹಾಗು ಇಲ್ಲಿ ನಿರಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಮ್ಮ ಲೇಖನಗಳಲ್ಲಿ ಬರೆದುಕೊಂಡಿದ್ದಾರೆ.
ಬೀದರ ಕನ್ನಡ ವೈಶಿಷ್ಟ, ಬೀದರ ಮುಸ್ಲಿಮರ ಮದುವೆಯ ಘಮಲು, ಬೀದರ ಕೋಟೆ ಮತ್ತು ನಾನು, ಬೆಂದಕಾಳೂರು ಮತ್ತು ಹಳಿ ಮೇಲಿನ ಸದ್ದು, ಮೂರ್ತಿ ಬೇಕು ತತ್ವ ಬೇಡ, ನೋಡೋ ದೃಷ್ಟಿ ವಿಚಾರ ಮಾಡೋ ರೀತಿ, ಊರ ಕೇ ರಿಯ ಮಾತು, ಹೀಗೆ ಪ್ರತಿಯೊಂದು ಅಂಕಣ ಬರಹಗಳು ಓದುಗರಿಗೆ ಕುತೂಹಲದಿಂದ ಓದಿಸಿಕೊಂಡು ಹೋಗುವ ರೀತಿಯಲ್ಲಿವೆ.
ಶ್ರೀಮತಿ ರಜಿಯಾ ಅವರು ತಮ್ಮ ವೈಯಕ್ತಿಕ ಬದುಕಿನ ಕುರಿತು ಹಂಚಿಕೊಳ್ಳದೆ ಮುಖ್ಯವಾಗಿ ತಮ್ಮ ಬರಹಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಅವರು ತಮ್ಮ ಲೇಖನಿಯಿಂದ ಇನ್ನೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಮೆಹಂದಿ, ದಾವಣಿ ಹುಡುಗಿ, ಬಿಸಿಲೂರಿಗೆ, ಮುಂತಾದ ಕೃತಿಗಳು ಪ್ರಮುಖವಾಗಿರುವ ಕೃತಿಗಳಾಗಿವೆ.
ಒಟ್ಟಾರೆಯಾಗಿ ಹೇಳುವದಾದರೆ ಆಸರಕಿ ಬ್ಯಾಸರಕಿ ಅಂಕಣ ಬರಹದ ಪುಸ್ತಕ ಓದಿದರೆ ಸಮಗ್ರ ಬೀದರ ಜಿಲ್ಲೆಯ ಚಿತ್ರಣ ಕಣ್ಣ ಮುಂದೆ ಬಂದಂತೆ ಗೋಚರವಾಗುತ್ತದೆ. ಅದೇ ರೀತಿ ಪ್ರತಿ ಅಂಕಣದ ಕೊನೆಯಲ್ಲಿ “ಏನಂತೀರಿ” ಅನ್ನುವ ಲೇಖಕರ ಮಾತು ಮನಸಿಗೆ ಬಹಳ ಹಿಡಿಸುವದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ರಜಿಯಾ ಅವರ ಆಸರಕಿ ಬ್ಯಾಸರಕಿ ಪುಸ್ತಕ ಓದುಗರಿಗೆ ಬ್ಯಾಸರಕಿ ತರಿಸಲಾರದೇ ಓದುವ ಉತ್ತಮ ಪುಸ್ತಕವಾಗಿದ್ದು ಲೇಖಕಿ ಅವರಿಂದ ಇನ್ನಷ್ಟು ಸಮಾಜ ಮುಖಿ ಪುಸ್ತಕ ಪ್ರಕಟವಾಗಲೆಂದು ಹಾರೈಸುವೆ.
- ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.
