ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ಅರ್ಜುನ್ ರಾಜ್ ಸರ್ಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 94.5% ಅಂಕಗಳನ್ನು ಗಳಿಸಿದ್ದಾನೆ. ಅವನ ಹಿರಿಮೆಯ ಕುರಿತು ಯುಟ್ಯೂಬರ್ ರಾಘವೇಂದ್ರ ಅವರು ಬರೆದ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಅರ್ಜುನ್ ರಾಜ್ ಸಾಧನೆಯೊಂದಿಗೆ ಮಾದರಿಯಾದ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಾರಂಬಳ್ಳಿ ಎಂಬ ಚಿಕ್ಕ ಊರಿನ ವಿದ್ಯಾರ್ಥಿ ಅರ್ಜುನ್ ರಾಜ್. GJCHS ಹೊಸನಗರ ಎಂಬ ಸರಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 94.5% ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಅವನ ಸಾಧನೆಯ ವಿಶೇಷತೆ ಅಂಕಗಳಷ್ಟೇ ಅಲ್ಲ. ಅವನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಇಂದಿನ ಕಾಲದಲ್ಲಿ ಬಹುತೇಕರು ಪ್ರೈವೇಟ್ ಶಿಕ್ಷಣದತ್ತ ಮುಖ ಮಾಡುತ್ತಿರುವಾಗ, ಅರ್ಜುನ್ ತನ್ನ ಪರಿಶ್ರಮ ಮತ್ತು ಗಮನದ ಮೂಲಕ ಸರ್ಕಾರಿ ಶಾಲೆಯಲ್ಲಿಯೇ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಸಾಬೀತು ಪಡಿಸಿದ್ದಾನೆ.

ಅರ್ಜುನ್ ಅವರ ಕುಟುಂಬವೂ ಸಮಾಜಕ್ಕೆ ಒಂದು ಮಾದರಿ. ಅವರ ತಂದೆ ವಿ.ಡಿ. ನಾಗರಾಜ್ ಅವರು ಹೊಸನಗರದ ಸೋನಲೆ ಕ್ಲಸ್ಟರ್ ವಿಭಾಗದ ಸಿಆರ್ ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಅಂಜು ಬೇಬಿ ಅವರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ. ಶಿಕ್ಷಣದ ಮೇಲಿನ ಅವರ ನಂಬಿಕೆ ಮತ್ತು ಸೇವಾ ಮನೋಭಾವ ಮಕ್ಕಳಲ್ಲಿ ಸಹ ಅದೇ ಮೌಲ್ಯಗಳನ್ನು ಬೆಳೆಸಿದೆ.
ಅರ್ಜುನ್ಗೆ ಇನ್ನೊಬ್ಬ ತಮ್ಮ ಇದ್ದು, ಅವನ ಹೆಸರು ಆರವ್ ಸೂರ್ಯ. ಆತ ಈಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ಹೊಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳ್ಳೋಡಿ ಶಾಲೆಯಲ್ಲಿ ತನ್ನ ತಾಯಿಯ ಮಾರ್ಗದರ್ಶನದಲ್ಲಿಯೇ ಅವರ ಶಾಲೆಯಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾನೆ.
ಇಂದಿನ ಕಾಲದಲ್ಲಿ “ಪ್ರೈವೇಟ್ ಶಾಲೆ ಮಾತ್ರ ಉತ್ತಮ” ಎಂಬ ಭಾವನೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಈ ಕುಟುಂಬ ಸರ್ಕಾರಿ ಶಿಕ್ಷಣದ ಮೇಲೆ ವಿಶ್ವಾಸ ಇಟ್ಟುಕೊಂಡು, ತಮ್ಮ ಜೀವನದ ಮೂಲಕವೇ ಅದಕ್ಕೆ ಮೌಲ್ಯ ನೀಡುತ್ತಿರುವುದು ಶ್ಲಾಘನೀಯ.
ಅರ್ಜುನ್ ರಾಜ್ ಅವರ ಸಾಧನೆ ಕೇವಲ ಅವರ ವೈಯಕ್ತಿಕ ಜಯವಲ್ಲ. ಇದು ಸರ್ಕಾರಿ ಶಾಲೆಗಳ ಸಾಮರ್ಥ್ಯಕ್ಕೆ ಒಂದು ಜೀವಂತ ಉದಾಹರಣೆ.

ಸರ್ಕಾರಿ ಶಾಲೆಯ ಶಿಕ್ಷಣ ಹೆಮ್ಮೆಯ ಶಿಕ್ಷಣ :
ಮಕ್ಕಳ ಸರ್ವತೋಮುಖ ಬೆಳವಣಿಗೆ ಗೆ ಅವಕಾಶ ಇರುತ್ತದೆ. ಅದರ ಪ್ರತೀಕವಾಗಿ ಪ್ರತಿಭಾ ಕಾರಂಜಿಯಲ್ಲಿ 3 ನೆ ತರಗತಿಯಿಂದ SSLC ವರೆಗೂ ಪ್ರತಿಭಾ ಕಾರಂಜಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುತ್ತಾನೆ.

ಸಂದೇಶ ಒಂದೇ ಅವಕಾಶ ಹಾಗೂ ಶ್ರದ್ದೆ ಇದ್ದರೆ ಸಾಕು, ಸಾಧನೆ ಯಾವ ಶಾಲೆಯಲ್ಲಾದರೂ ಸಾಧ್ಯ. ಕೇವಲ ಪ್ರೈವೇಟ್ ಸ್ಕೂಲ್ ನಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಭ್ರಮೆಯಲ್ಲಿ ಇರುವ ನನ್ನಂತಹ ಪೋಷಕನಿಗೆ ಈ ದಂಪತಿಗಳು ಮುಚ್ಚಿದ ಕಣ್ಣು ತೆರೆಸಿದ್ದಾರೆ. ಅರ್ಜುನ್ ರಾಜ್ ಅವರ ಮುಂದಿನ ಭವಿಷ್ಯ ಉಜ್ವಲಿಸಲಿ ಎಂದು ಹಾರೈಸುತ್ತಾ ಸರ್ಕಾರಿ ಶಾಲೆಗಳನ್ನ ಉಳಿಸುವ ಹಾಗೂ ಬೆಳೆಸುವ ಕಾರ್ಯಕ್ಕೆ ಕೈ ಜೋಡಿಸೋಣ ಎಂದು ಕೇಳಿಕೊಳ್ಳುತ್ತೇನೆ.
- ರಾಘವೇಂದ್ರ
