ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕದ ಕುರಿತು ರಂಗ ನಿರ್ದೇಶಕರಾದ ಕಿರಣ್ ಭಟ್ ಹೊನ್ನಾವರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Debris Theatre Company, Slovakia
ನಿರ್ದೇಶಕರು: ಜೋಜಿಫ್ ವಿಚ್
ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕ. ಆಫ್ರಿಕಾದ ಒಂದು ಜನಾಂಗದೊಂದಿಗೆ ಹುಟ್ಟಿಕೊಂಡ ಈ ಹೋಮೋ ಸೆಪಿಯನ್ಸ್ ನಿಧಾನವಾಗಿ ಭೂಮಿಗೇ ಒಡೆಯನಾಗುತ್ತ ಪ್ರಕೃತಿಯನ್ನು ತನ್ನ ಕೈಗೇ ತೆಗೆದುಕೊಳ್ಳುತ್ತ ಹೇಗೆ ಪರಿಸರವನ್ನೇ ಕೆಡಿಸುತ್ತ ಸಾಗುತ್ತಿದೆಯೆಂಬುದನ್ನು ಕೇಳುತ್ತ ಹೋಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿಯಲಾಗಿದೆ. ನದಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಬೆಟ್ಟಗಳೆಲ್ಲ ಸಮತಟ್ಟಾಗಿವೆ. ಜೀವಸಂಕುಲಗಳನ್ನು ಅಳಿವಿನ ಅಂಚಿಗೆ ತರಲಾಗಿದೆ. ಮನುಷ್ಯ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತ ಸಾಗಿದ್ದಾನೆ.
ಎಷ್ಟೆಲ್ಲ ತಾಂತ್ರಿಕತೆ ಮುಂದುವರಿದಿದ್ದರೂ ದಾರಿ ತಪ್ಪಿದೆ. ಎಲ್ಲ ಪ್ಲಾಸ್ಟಿಕ್ ಮಯವಾಗಿದೆ. ಭೂಮಿಯೇ ಕಾಣದಂತೆ ಕಾಂಕ್ರೀಟ್ ಮೆತ್ತಿಕೊಂಡಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಜಗತ್ತು ಈಗ ವಿದೂಷಕರ ಕೈಯಲ್ಲಿದೆ. ಇವರು ಬರೇ ವಿದೂಷಕರಲ್ಲ ಅವರೀಗ ದೆವ್ವದ ಗುಣ ಹೊತ್ತಿದ್ದಾರೆ. ಬಂಡವಾಳಶಾಹಿಗಳ ಮುಖವಾಣಿಯಾಗುತ್ತ ಅವರನ್ನು ಓಲೈಸುತ್ತಿದ್ದಾರೆ.
ನಮಗೆ ತುಂಬ ಹತ್ತಿರ ಹತ್ತಿರ ಎನಿಸುತ್ತಿದೆ ಅಲ್ಲವೇ?
ನಮ್ಮ ಭೋಗಕ್ಕಾಗಿ ನಾವು ಅದೆಂಥ ಬೆಲೆ ತೆರುತ್ತಿದ್ದೇವೆ. ಇವನ್ನೆಲ್ಲ ಹೇಳುತ್ತ ಹೋಗುವ ನೃತ್ಯಪ್ರಧಾನವಾದ ಪ್ರಯೋಗವಿದು. ಇಬ್ಬರೇ ಕಲಾವಿದರು ತುಂಬ ವೈಶಿಷ್ಟ್ಯಪೂರ್ಣ ಚಲನೆಗಳ ಮೂಲಕ ಈ ಪ್ರಯೋಗವನ್ನು ಕಟ್ಟುತ್ತಾರೆ. ಇಡಿಯ ನಾಟಕೋತ್ಸವದಲ್ಲಿ ರಾಂತ್ರಿಕತೆಯನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಂಡ ಪ್ರಯೋಗವಿದು. ನೆಲ, ಗೋಡೆಗಳನ್ನೆಲ್ಲ ಆವರಿಸಿಕೊಂಡ ಚಕ ಚಕನೆ ಬದಲಾಗುವ ʼ ಧ್ವನಿ ಬೆಳಕಿನ ಆಟಗಳು ವಿಭಿನ್ನ ಅನುಭವ ಕೊಡುತ್ತವೆ. ಹಾಗೆಯೇ ವಸ್ತ್ರ ವಿನ್ಯಾಸ ಕೂಡ.
ಆ ದೃಷ್ಟಿಯಲ್ಲಿ ಇದು ನಿಜಕ್ಕೂ ವಾವ್!
- ಕಿರಣ್ ಭಟ್ ಹೊನ್ನಾವರ



