ಆರತಿಯೆತ್ತಲು ನಾರಿಯರೆಲ್ಲರು ಬೀರಿತು ಜ್ಯೋತಿಯು ನಳನಳಿಸಿ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕತ್ತಲನಳಿಸಲು
ಹೊತ್ತಿಸೆ ಹಣತೆಯ
ಮುತ್ತಿತು ಬೆಳಗುತ ಪ್ರಜ್ವಲಿಸಿ
ಚಿತ್ತದಲುಳಿದಿಹ
ಮೆತ್ತಿದ ತಮವನು
ಸುತ್ತುತ ಜ್ಞಾನದ ಬೆಳಕಿಳಿಸಿ
ನೀರೆಯರೆಲ್ಲರು
ತೋರುತ ಬೆಡಗನು
ಸೇರುತ ಹಬ್ಬವನಾಚರಿಸಿ
ಆರತಿಯೆತ್ತಲು
ನಾರಿಯರೆಲ್ಲರು
ಬೀರಿತು ಜ್ಯೋತಿಯು ನಳನಳಿಸಿ
ನರಕಾಸುರನನು
ಹರಿತಾ ವಧಿಸಲು
ಧರೆಯಲಿ ಮೊದಲಿಗೆ ಪೂಜಿಪರು
ಕರೆವರು ಬಲಿಯನು
ಬೆರೆಯಲು ಹಬ್ಬದಿ
ತರತರ ಪೂಜೆಯ ಮಾಡುವರು.
- ಚನ್ನಕೇಶವ ಜಿ ಲಾಳನಕಟ್ಟೆ
