– ಶಾಲಿನಿ ಪ್ರದೀಪ್
ಬೆಂಗಳೂರಿನ ಸುತ್ತ ಮುತ್ತಲಿನ ಜನರಿಗೆ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರವು ಚಿರಪರಿಚಿತ. ೪೦೦ ವರ್ಷಗಳಷ್ಟು ಹಳೆಯದಾದ ಈ ಆಲದ ಮರವು ನೆಲದಾಳದಲ್ಲಿ ಮೂರು ಎಕರೆವರೆಗೂ ತನ್ನ ಬೇರುಗಳನ್ನು ಬಿಟ್ಟಿರುವುದು ಇದರ ವಿಶೇಷತೆಯಾಗಿದೆ. ಹಾಗಾಗಿ ಇದು ‘ದೊಡ್ಡ ಆಲದ ಮರ’ ಎಂದೇ ಖ್ಯಾತಿ ಪಡೆದಿದೆ.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ೨೫ ಕಿ.ಮೀ ದೂರದಲ್ಲಿರುವ ಕೆಟ್ಟೋಹಳ್ಳಿಯಲ್ಲಿ ಈ ದೊಡ್ಡ ಆಲದ ಮರವನ್ನು ನೋಡಬಹುದು. ಕರ್ನಾಟಕದಲ್ಲಿ ಅತಿ ದೊಡ್ಡದಾದ ಮರ ಇದಾಗಿದ್ದು, ಭಾರತದಲ್ಲಿ ಅತಿ ದೊಡ್ಡ ಎರಡನೇ ಮರವೆಂಬ ಕೀರ್ತಿಗೆ ಇದು ಪಾತ್ರವಾಗಿದೆ. ಈ ಮರವನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಬರುತ್ತಿರುತ್ತಾರೆ. ಇದು ಪಿಕ್ನಿಕ್ ಸ್ಪಾಟ್ ಕೂಡ ಹೌದು.
ಇಷ್ಟು ಹಳೆಯದಾದ ಈ ಮರಕ್ಕೆ ಹಲವು ಅಡೆ ತಡೆಗಳು ಆರಂಭವಾಗಿವೆ. ಕಳೆದ ೧೦-೧೫ ವರ್ಷದಿಂದ ತಾಯಿ ಬೇರಿಗೆ ಗೆದ್ದಿಲು ಹುಳು ಹಿಡಿದಿದ್ದು ಆತಂಕ ಸೃಷ್ಟಿಸಿದೆ. ಈ ಮರದ ಉಳುವಿಗಾಗಿ ತಜ್ಞರು ಅನೇಕ ಯೋಜನೆ ಹಾಕಿಕೊಂಡಿದ್ದು ಸದ್ಯ ಅದಕ್ಕೆ ಡ್ರಿಪ್ ತಂತ್ರ ಅಳವಡಿಸಿದ್ದಾರೆ.
ಇದೇನಿದು ಮರಗಳಿಗೂ ಡ್ರಿಪ್ ಹಾಕುತ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಬರಬಹುದು. ಆದರೆ ತಜ್ಞರು ಹೇಳುವ ಪ್ರಕಾರ ಮರದಲ್ಲಿ ಚಿಕ್ಕ ರಂಧ್ರ ಮಾಡಿ ಅದರ ಮೂಲಕ ಔಷಧಿಯನ್ನು ಹಾಕುವುದರಿಂದ ಮರಕ್ಕೆ ಹಿಡಿದಿರುವ ಗೆದ್ದಿಲು ಹುಳು ನಾಶವಾಗುತ್ತದೆ. ಇದರಿಂದ ಇನ್ನಷ್ಟು ದೀರ್ಘ ಕಾಲ ರಕ್ಷಣೆ ಮಾಡಬಹುದು ಎಂಬ ಅಭಿಪ್ರಾಯವಿದೆ.
ಏನೇ ಆಗಲಿ. ಈ ದೊಡ್ಡ ಆಲದ ಮರ ಬೇಗನೇ ಗೆದ್ದಿಲು ಹುಳುಗಳಿಂದ ಮುಕ್ತಿ ಪಡೆಯಲಿ. ಇನ್ನಷ್ಟು ಪ್ರವಾಸಿಗರಿಗೆ ನೆರಳಾಗಲಿ ಎಂದು ಆಶಿಸೋಣ.