ಯಾರಿಗಿಲ್ಲ ಕೇಳೆ ಸಖಿ ಓರೆ ಕೋರೆ; ಬಾಣದಂತ ನೋಟ ಎದೆ ಬಗೆದು ಸುಡುತ್ತಿದೆ! …ಕವಿ ಟಿ.ಪಿ.ಉಮೇಶ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ದೂರ ಹೋಗದಿರು ಮುದ್ದು ಮನಸೇ;
ಒಲಿದು ಬಲವ ನೀಡಿ ಒಲವ ಬೆಳೆಸಿದ ಕನಸೇ!
ಮರೆಯಾಗಿ ಹೋದರೆ ನನ್ನ ಮನಸೇ;
ಒಲವ ಅರ್ಥವೆ ಅಳಿಸುವುದು ನನ್ನ ಸೊಗಸೇ!
ಮಾತು ಮಾತು ಬೆಳೆದು ಆಯಿತೇನು;
ತುಸು ನಿಂತು ನೋಡು ಒಲವ ಧಾರೆಯ ಕಣ್ಣು!
ಮೌನ ಮುನಿಸು ತಾನು ತಂದಿತೇನು;
ಕಾಡಿ ಕುದಿದ ಹೃದಯ ಉರಿವ ಬೆಂಕಿ ಮಣ್ಣು!
ಎದುರು ಕಂಡಾಗ ಬಿಗಿತದ ಮೋರೆ:
ಹೂವಿನಂತ ಹಾಡು ಎದೆಯೊಡೆದು ಬಿಕ್ಕುತ್ತಿದೆ!
ಯಾರಿಗಿಲ್ಲ ಕೇಳೆ ಸಖಿ ಓರೆ ಕೋರೆ;
ಬಾಣದಂತ ನೋಟ ಎದೆ ಬಗೆದು ಸುಡುತ್ತಿದೆ!
ಮನಸ್ಸಿನಿಂದ ಮನಸ್ಸು ಬೆರೆತ ಪರಿ;
ಒಣ ಟೊಂಗೆಯಂತೆ ಒಲವ ಮುರಿಯಬಹುದೆ!
ಕನವರಿಕೆಯಲ್ಲು ಅಗಲಿಕೆಯ ಉರಿ;
ಕಾರಣವಿಲ್ಲದೆ ಪ್ರೇಮ ಭಾಷೆ ಹರಿಯಬಹುದೆ!
ಅರಿಯದೆ ಹಬ್ಬಿ ತಬ್ಬಿದ ಆಕರ್ಷಣೆ;
ಉಳಿಸಬೇಕು ಸಹನೆಯಲ್ಲಿ ಕೂತು ಮಾತನಾಡಿ!
ಒಲವಿದೊಂದೆ ಬಾಳ ಉತ್ಕರ್ಷಣೆ;
ಸ್ವಾರ್ಥವರಿಯೆ ಪ್ರಿಯ ಸಖಿ ನೀನೆನ್ನ ಜೀವನಾಡಿ!
- ಟಿ.ಪಿ.ಉಮೇಶ್ – ಸಾಹಿತಿಗಳು, ಹೊಳಲ್ಕೆರೆ.
