ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ, ಸಾಮ್ಯತೆ ಇದೆ. ನೀವು ಜೋಗ್ ಫಾಲ್ಸ್ ಗೆ ಹೋದಾಗ ರಾಜಾಕಲ್ಲು ಪ್ರದೇಶಕ್ಕೆ ಭೇಟಿ ನೀಡಿದ್ದಿರಾ? ನಿಮಗೆ ಈ ಸ್ಥಳದ ಬಗ್ಗೆ ಮಾಹಿತಿ ಗೊತ್ತಿತ್ತಾ?. ಹೆಚ್ಚಿನ ಮಾಹಿತಿ ತಿಳಿಯಲು ಲೇಖಕರಾದ ಅರುಣ್ ಪ್ರಸಾದ್ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…
ರಾಜಾಸೀಟ್ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೊಡಗನ್ನು ಆಳಿದ ಕೆಳದಿ ವಂಶಸ್ಥರಾದ ಹಾಲೇರಿ ರಾಜರು ತಮ್ಮ ರಾಣಿಯರೊಂದಿಗೆ ಸಂಜೆಯ ವೇಳೆ ವಿಶ್ರಾಂತಿ ಪಡೆಯಲು ಹಾಗೂ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು. ಆದ್ದರಿಂದ ಅದಕ್ಕೆ ‘ರಾಜಾಸೀಟ್’ (ರಾಜನ ಆಸನ) ಎಂಬ ಹೆಸರು ಬಂದಿದೆ.
ಇದೇ ರೀತಿ ಇತಿಹಾಸ ಇರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಸಮೀಪವಿರುವ ‘ರಾಜಾ ಕಲ್ಲು’ ಒಂದು ಸುಂದರ ಹಾಗೂ ಐತಿಹಾಸಿಕ ವೀಕ್ಷಣಾ ತಾಣವಾಗಿದೆ. ಜೋಗ್ ಫಾಲ್ಸ್ ಅಬ್ಬರದಲ್ಲಿ ಇದು ಪ್ರವಾಸಿಗರಿಗೆ ಗೊತ್ತೇ ಇಲ್ಲ. ಈ ಸ್ಥಳವು ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆಚ್ಚಿನ ವೀಕ್ಷಣಾ ತಾಣವಾಗಿತ್ತು.

1939ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶರಾವತಿ ಕಣಿವೆಯ ಜಲ ವಿದ್ಯುತ್ ಯೋಜನೆಗೆ (ಆರಂಭದಲ್ಲಿ ‘ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆ’, ನಂತರ ‘ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ’) ಶಂಕುಸ್ಥಾಪನೆ ನೆರವೇರಿಸಿದ ಸ್ಥಳವೇ ಈ ರಾಜ ಕಲ್ಲು. ಇಲ್ಲಿಂದ ಶರಾವತಿ ಕಣಿವೆಯ ವಿಹಂಗಮ ನೋಟ ಮತ್ತು ಸುತ್ತಲಿನ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಕಣಿವೆಯ ಕೆಳಭಾಗದಲ್ಲಿ ಹರಿಯುವ ನೀರು ಹಾಗೂ ಜಲವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರು ಒಯ್ಯುವ ಬೃಹತ್ ಪೈಪ್ಲೈನ್ಗಳ ನೋಟ ಇಲ್ಲಿಂದ ಗೋಚರಿಸುತ್ತದೆ. ಪ್ರವಾಸಿಗರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಮುಖ್ಯ ಜೋಗ ಜಲಪಾತದ ವೀಕ್ಷಣಾ ತಾಣಕ್ಕೆ ಅತಿ ಸಮೀಪದ ಈ ರಾಜ ಕಲ್ಲು ಅಜ್ಞಾತವಾಗಿಯೇ ಉಳಿದಿದೆ.
70 ರ ದಶಕದ ತನಕ ಜೋಗ್ ಫಾಲ್ಸ್ ಗೆ ಬರುತ್ತಿದ್ದ VIP ಗಳು ರಾಜಾ ಕಲ್ಲು ವೀಕ್ಷಿಸಿ ಜೋಗ ಜಲಪಾತ ನೋಡಲು ಹೋಗುತ್ತಿದ್ದ ವ್ಯವಸ್ಥೆ ಈಗ ಬದಲಾಗಿದೆ. ಹೆಚ್ಚು ಪ್ರವಾಸಿಗರು ಜೋಗ್ ಫಾಲ್ಸ್ ಮಾತ್ರ ನೋಡಲು ಹೋಗುತ್ತಾರೆ ಅದನ್ನು ಹೋಲಿಸಿದರೆ ಇಲ್ಲಿ ಪ್ರವಾಸಿಗರ ಗಿಜಿಗಿಜಿ ಕಡಿಮೆ ಇದ್ದು, ಪ್ರಶಾಂತ ವಾತಾವರಣವಿರುತ್ತದೆ.
ರಾಜಾ ಕಲ್ಲು (Raja Stone) ಎಂಬುದು ಬೇರೆಲ್ಲಿಂದಲೋ ಕೆತ್ತಿ ತಂದು ಪ್ರತಿಷ್ಠಾಪಿಸಿದ ಕಲ್ಲಲ್ಲ . ಶರಾವತಿ ಕಣಿವೆಯ ಕಡಿದಾದ ಪ್ರಪಾತದ ಅಂಚಿನಲ್ಲಿ ನೈಸರ್ಗಿಕವಾಗಿಯೇ ರಚನೆಯಾಗಿರುವ ಒಂದು ಬೃಹತ್ ಶಿಲಾ ರಚನೆ ಇದು.
ಹೆಸರು ಬಂದಿದ್ದು ಹೇಗೆ?
ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನೈಸರ್ಗಿಕ ಬಂಡೆಯ ಮೇಲೆ ಕುಳಿತು ಜೋಗದ ಕಣಿವೆ ಮತ್ತು ಜಲಪಾತದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ಕಾರಣ ಈ ಬಂಡೆಗೆ “ರಾಜಾ ಕಲ್ಲು” ಎಂದು ಕರೆಯಲಾಯಿತು. ಅಲ್ಲಿರುವ ಶಂಕುಸ್ಥಾಪನಾ ಶಿಲಾಫಲಕವನ್ನು ಮಾತ್ರ ಕೆತ್ತಿ ನಿರ್ಮಿಸಲಾಗಿದೆ, ಮುಖ್ಯವಾದ ವೀಕ್ಷಣಾ ‘ರಾಜಾ ಕಲ್ಲು’ ಮಾತ್ರ ಅಲ್ಲಿನ ಪ್ರಕೃತಿದತ್ತವಾದ ನೈಸರ್ಗಿಕ ಬಂಡೆಯಾಗಿದೆ.
ಬ್ರಿಟಿಷ್ ಕಾಲದಲ್ಲಿ ಭಾರತದ ಸರ್ವೇಕ್ಷಣಾಧಿಕಾರಿಗಳು ಹಾಗೂ ಅನ್ವೇಷಕರು (ಉದಾಹರಣೆಗೆ : ಥಾಮಸ್ ಮುನ್ರೋ ಮುಂತಾದವರು) ಜೋಗ ಜಲಪಾತ ಮತ್ತು ರಾಜ ಬಂಡೆಯ ಪರಿಸರವನ್ನು ವೀಕ್ಷಿಸಿ ಅದರ ಪ್ರಾಕೃತಿಕ ವೈಭವವನ್ನು ದಾಖಲಿಸಿದ್ದಾರೆ.
ಮೈಸೂರು ಲೋಕೋಪಯೋಗಿ ಇಲಾಖೆ (PWD) ಮತ್ತು ವಿದ್ಯುತ್ ಮಂಡಳಿಯ ಹಳೆಯ ಅಧಿಕೃತ ದಾಖಲೆಗಳಲ್ಲಿ ರಾಜರ ನೆಚ್ಚಿನ ವೀಕ್ಷಣಾ ತಾಣ ಹಾಗೂ ಅಡಿಗಲ್ಲು ಸ್ಥಾಪನೆಯ ಸ್ಥಳವಾಗಿ ಇದು ದಾಖಲಾಗಿದೆ. ಈ ಮಾಹಿತಿ ಇಷ್ಟ ಆದರೆ ಹೆಚ್ಚು ಶೇರ್ ಮಾಡಿ ಮತ್ತು ಜೋಗ್ ಫಾಲ್ಸ್ ಪ್ರವಾಸಕ್ಕೆ ಹೋದರೆ ತಪ್ಪದೆ ಈ ರಾಜಾ ಕಲ್ಲು ವೀಕ್ಷಣೆ ಮಾಡಿ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು, ಹೊಸನಗರ
