ಕವಿಯತ್ರಿ ವಸುಧಾ ಪ್ರಭು ಅವರು ಬರೆದಿರುವ ‘ ಏನು ಬರೆಯಲಿ’ ಸುಂದರ ಕವನವನ್ನು ತಪ್ಪದೆ ಓದಿ…
ಯಾಕೋ ಮನಸ್ಸು ಭಾರವಾಗಿತ್ತು
ಕವನ ಒಂದ ಬರೆವ ಮನಸ್ಸಾಗಿತ್ತು
ಮನದಲ್ಲಿ ವಿವಿಧ ಭಾವನೆಗಳು ಮೂಡುತಿತ್ತು
ಬರೆಯಲು ವಿಷಯವನ್ನು ಹುಡುಕುತಿತ್ತು…
ಸ್ವಲ್ಪ ತಾಜಾತನಕ್ಕಾಗಿ ದೂರದರ್ಶನ ನೋಡ ಹತ್ತಿದೆ
ಅಲ್ಲಿ ಅತ್ತೆ,ಸೊಸೆ, ಮಗಳು,ಎಲ್ಲಾ ಒಳ ಜಗಳ ನೋಡಿದೆ
ಮನಸ್ಸು ಇನ್ನೂ ರಾಡಿಯಾಯಿತು, ಯೋಚಿಸ ತೊಡಗಿತ್ತು…
ದಿನಪತ್ರಿಕೆಯ ಕೈಗೆತ್ತಿಕೊಂಡೆ,ಸುದ್ದಿಗಳ ಮೇಲೆ ಕಣ್ಣಾಡಿಸಿದೆ
ಅಲ್ಲಿ ಕೊಲೆ, ದರೋಡೆ, ಸುಲಿಗೆ ವಂಚನೆ ಅನ್ಯಾಯಗಳನ್ನ ಓದಿದೆ,ಪೇಪರನ್ನು ಮಡಚಿಟ್ಟೆ
ಹಾಗೇ ಸ್ವಲ್ಪ ನಡೆಯೋಣ ಎಂದು ಮನೆಯಿಂದ ಹೊರಬಿದ್ದೆ
ಒಬ್ಬ ಗಂಡನ ಇಬ್ಬರು ಹೆಂಡತಿಯರ ಜಗಳವನ್ನು ನೋಡಿ ನಾನು ಕಾಲು ಕಿತ್ತೆ,
ಭವಿಷ್ಯವನ್ನಾದರೂ ನೋಡೋಣ ಎಂದು ಮುಖ ಪುಸ್ತಕ ತೆಗೆದೆ
ಎಲ್ಲರ ಭವಿಷ್ಯವಾಣಿಯಲ್ಲಿ ‘ಮುಟ್ಟಿದ್ದೆಲ್ಲಾ ಚಿನ್ನ’ ವಾಕ್ಯ ಒಂದೇ
ಮೆಲ್ಲನೆ ಅಡುಗೆ ಮನೆಗೆ ಹೋಗಿ ದೊಡ್ಡ ತಪ್ಪಲೆಯೊಂದ ಮುಟ್ಟಿದೆ
ಚಿನ್ನವಾಗುವುದೆಂದು ಸುಮಾರು ಹೊತ್ತು ತಾಳ್ಮೆಯಿಂದ ಕುಳಿತೆ
ಎಷ್ಟು ಹೊತ್ತಾದರೂ ಚಿನ್ನವೂ ಇಲ್ಲ,ಮಣ್ಣೂ ಇಲ್ಲ ಎಂದು ಸುಮ್ಮನಾದೆ…
ಕವನಕ್ಕೆ ಬೇಕಾದ ಪರಿಕರ ಕೊನೆಗೂ ಸಿಗಲೇ ಇಲ್ಲ
ನನ್ನ ಕವನದ ಆಸೆ ಪೂರ್ಣ ಆಗಲೇ ಇಲ್ಲ
ಖಾಲಿ ಹಾಳೆ ಇಂಕಿನ ಪೆನ್ನು ನನ್ನ ನೋಡಿ ನಗ ಹತ್ತಿತು,
ಮೂಢಾ ಕವನ ಹುಡುಕಿದರೆ ಸಿಗದು, ಶಬ್ದಗಳು ಬರದು
ಕೆದಕು ನಿನ್ನ ದುಖದ,ಸಂತಸದ, ಅನ್ಯಾಯದ, ಅನುಭವಿಸಿದ ಕ್ಷಣಗಳನ್ನ
ತಾನಾಗೇ ಹೊರಬರುವುದು ಶಬ್ದಗಳ ಮೆರವಣಿಗೆ
ಸೀಳಿ ನಿನ್ನ ಭಾವನೆಗಳನ್ನ (೨)
- ವಸುಧಾಪ್ರಭು, ಮುಂಬೈ.