ಓದುವುದು ಕಲಿಕೆಯ ಭಾಗವಾದರೆ, ಭಯವು ವ್ಯಕ್ತಿಯ ಭಾವನಾತ್ಮಕಯ ಅಂಶವಾಗಿರುತ್ತದೆ. ವಿದ್ಯಾರ್ಥಿಗಳು ಎಷ್ಟೇ ಶ್ರದ್ಧೆಯಿಂದ ಓದಿದರೂ ಪರೀಕ್ಷೆ ಸಮೀಪಿಸುತ್ತಿದ್ದಂತೆ ಮನದೊಳಗೆ ಭಯ ಶುರುವಾಗುತ್ತದೆ. ಅದಕ್ಕೆ ಅವಿನಾಶ ಸೆರೆಮನಿ ಅವರು ಭಯಕ್ಕೆ ದಾರಿ ತೋರಿಸಿದ್ದಾರೆ, ತಪ್ಪದೆ ಮುಂದೆ ಓದಿ…
ಮಾರ್ಚ ಏಪ್ರಿಲ್ ತಿಂಗಳು ಬಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಜ್ವರ ಕಾಡುತ್ತಾ ಇರುತ್ತೆ.ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಓದಿ ಒಳ್ಳೆಯ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಹೆತ್ತ ತಂದೆ ತಾಯಿ ಮತ್ತು ಕಲಿಸಿದ ಗುರುಗಳಿಗೆ ಹೆಸರು ತರುವ ಬಯಕೆ. ವಿದ್ಯಾರ್ಥಿಗಳು ಕೂಡ ಸತತವಾಗಿ ಶ್ರದ್ಧೆಯಿಂದ ಓದಿ ಇನ್ನೇನು ಪರೀಕ್ಷೆ ಸಮೀಪಿಸುತ್ತಿದ್ದಂತೆ ಮನದೊಳಗೆ ಭಯ ಶುರುವಾಗುತ್ತದೆ ಅದನ್ನ ಓದಬೇಕು ಇದನ್ನ ಓದಬೇಕು ಎಂದೆಲ್ಲ ಅಂದುಕೊಳ್ಳುವಾಗ ಒತ್ತಡವು ನೆಮ್ಮದಿಯನು ಹತ್ತಿಕ್ಕಲು ಶುರು ಮಾಡುತ್ತದೆ.ಯಾವಾಗ ಒತ್ತಡಕ್ಕೆ ಜಾಗ ನೀಡುವಿರೋ ಆಗ ಭಯವೂ ತನ್ನ ಸ್ಥಾನವನ್ನು ಅಲಂಕರಿಸುತ್ತದೆ.
ಪ್ರಸ್ತುತ ವಿದ್ಯಾರ್ಥಿಗಳು ಹೇಳುವುದೇನೆಂದರೆ ಸರ್, ನಾವು ಎಷ್ಟೇ ಓದಿದರು ನಮಗೆ ಪರೀಕ್ಷೆಯ ಭಯವೂ ಹೋಗುವುದೇ ಇಲ್ಲವಲ್ಲ ಯಾಕೆ ಸರ್?… ಎಂದು ಹಲವು ವಿದ್ಯಾರ್ಥಿಗಳು ನನಗೆ ಕಾಲೇಜಿನಲ್ಲಿ ಪದೇ ಪದೇ ಕೇಳುವುದುಂಟು.ಇಲ್ಲಿ ಒಂದು ಉದಾಹರಣೆ ಮೂಲಕ ನಾನು ವಿವರಿಸುತ್ತೇನೆ.ಒಬ್ಬ ವ್ಯಕ್ತಿ ತಾನು ತಲುಪಬೇಕೆಂಬ ದಾರಿಯ ಮಾರ್ಗ ತಿಳಿದಿದ್ದರೂ ಮನದೊಳಗೆ ಗೊಂದಲವು ಆವರಿಸಲು ಶುರು ಮಾಡುತ್ತದೆ ಏಕೆಂದರೆ ಯಾವಾಗ ಅವನು ತನ್ನ ದಾರಿಯ ಮಾರ್ಗವನ್ನು ಸರಿಯಾಗಿ ಅರಿತಿರುವುದಿಲ್ಲವೇ ಆಗ ಅವನಿಗೆ ತಾನಂದುಕೊಂಡ ಸ್ಥಳವನು ತಲುಪುವವರೆಗೆ ಗೊಂದಲವು ನಿರ್ಗಮಿಸುವುದಿಲ್ಲ.ಹಾಗೆಯೇ ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ಓದಿದರೂ ಪರೀಕ್ಷೆಗಳು ಮುಗಿಯುವ ತನಕ ಭಯವೂ ಮನದೊಳಗೆ ತನ್ನ ಬಿಡಾರ ಹೂಡಿರುತ್ತದೆ. ಯಾವಾಗ ವಿಷಯವಾರು ಪತ್ರಿಕೆಗಳು ಒಂದೊಂದೇ ಮುಗಿಯುತ್ತಾ ಹೋಗುತ್ತವೆಯೋ ಆಗ ಸ್ವಲ್ಪ ಸ್ವಲ್ಪ ಪರೀಕ್ಷೆ ಭಯ ಕಡಿಮೆಯಾಗುತ್ತಾ.ಕೊನೆಗೆ ಅಂತಿಮವಾಗಿ ಭಯವೂ ನಿರ್ಗಮಿಸಿ ಪರೀಕ್ಷೆ ಚೆನ್ನಾಗಿ ಮುಗಿದವು ಎಂಬ ಸಂತೃಪ್ತಿಯ ಭಾವ ವಿದ್ಯಾರ್ಥಿಗಳನ್ನು ಮುತ್ತಿ ಸಂತಸವನು ನೀಡುತ್ತದೆ.

ಫೋಟೋ ಕೃಪೆ : google
ಓದುವುದು ಕಲಿಕೆಯ ಭಾಗವಾದರೆ ಭಯವು ವ್ಯಕ್ತಿಯ ಭಾವನಾತ್ಮಕಯ ಅಂಶವಾಗಿರುತ್ತದೆ. ಹಾಗಾಗಿ ಓದಿದರೂ ಭಯವೆಂಬ ಭೂತ ಮನವನ್ನು ಬಿಟ್ಟು ತೆರಳದು.ಯಾವಾಗ ಓದು ಜ್ಞಾನೇಂದ್ರಿಯವನ್ನು ಪ್ರವೇಶಿಸಿ ಪರೀಕ್ಷೆಯಲ್ಲಿ ತನ್ನಯ ಕಾರ್ಯವನ್ನು ನಿರ್ವಹಿಸುತ್ತಾ ಸಾಗುತ್ತದೆಯೋ.ಹಾಗೆ ನೆನಪಿನ ಶಕ್ತಿಯ ಮೂಲಕ ಬಿತ್ತರಿಸಲು ಆರಂಭಿಸುತ್ತದೆಯೋ ಭಯ ಸಾವಕಾಶವಾಗಿ ಮೋಡವು ಬಾನಿನಿಂದ ಸರಿಯುತ್ತಾ ಹೋದಂತೆ ಭಯವೂ ಕೂಡ ಸಣ್ಣ ಹೆಜ್ಜೆಯಿಡುತ ಮನದಿಂದ ಹೇಳಲು ಹೆಸರಿಲ್ಲದಂತೆ ತೆರಳುತ್ತದೆ.ಹಾಗಾಗಿ ವಿದ್ಯಾರ್ಥಿಗಳು ಭಯವೆಂಬ ಭೂತಕ್ಕೆ ಹೆದರದೆ ಓದಿನ ಸಂತೃಪ್ತತೆಯಿಂದ ನಿರಾಳವಾಗಿ ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆಗಳಿಗೆ ಸಿದ್ದರಾಗಬೇಕು.
ಓದಿನಲ್ಲಿ ಪಠ್ಯಪುಸ್ತಕದ ಸಂಪತ್ತಿರುತ್ತದೆ. ಆದರೆ ಭಯದಲ್ಲಿ ಜೀವವನ್ನೇ ಅಲುಗಾಡಿಸುವ ಭೂಕಂಪದ ರೀತಿಯ ಆಪತ್ತಿರುತ್ತದೆ ಹಾಗಾಗಿ.ಓದಿದರೂ ವಿದ್ಯಾರ್ಥಿಗಳು ಪರೀಕ್ಷೆಗೆ ಹೆದರದೆ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಭಯದಿಂದ ಮುಕ್ತರಾಗಬಹುದು.
- ಓದಿದ್ದೇನೆ ಭಯವೇ ನಿನಗೇಕೆ ಹೆದರಲಿ ಎಂದು ನಮಗೆ ನಾವೆ ಅಂದುಕೊಳ್ಳಬೇಕು.
- ಓದಿದ್ದೇನೆ ಪರೀಕ್ಷೆಯನು ದಿಟ್ಟತನದಿ ಎದುರಿಸುವೆ ಎಂಬ ಆತ್ಮವಿಶ್ವಾಸವಿರಬೇಕು(ಅತಿಯಾಗಬಾರದು)
- ವಿಷಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರೆ ಭಯವೂ ದೂರವಾಗುವುದು.
- ಓದಿದ ತಕ್ಷಣವೇ ಎಲ್ಲವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಬಾರದು.ಸಮಯದ ಅಂತರದಿಂದ ಒಂದೊಂದು ಅಧ್ಯಾಯದ ಉತ್ತರಗಳನ್ನು ಪುನರ ಮನನ ಮಾಡಿಕೊಳ್ಳಬೇಕು.
- ನನ್ನ ಸಹಪಾಠಿಗಳಿಗಿಂತ ಹೆಚ್ಚಿನ ಅಂಕ ತೆಗೆದುಕೊಳ್ಳಬೇಕು ಎಂದು ಪರೀಕ್ಷೆ ಸಮೀಪಿಸಿದಾಗ ಮನದಲಿ ಅಂದುಕೊಳ್ಳಲೇಬಾರದು.
- ಓದಿಗಿಂತ ಭಯವೇನು ಹರಿತವಾದುದ್ದಲ್ಲ ಎಂದು ತಿಳಿಯಬೇಕು.
- ಓದುವ ವಿಷಯವನ್ನು ಸರಿಯಾಗಿ ಅರಿತುಕೊಳ್ಳಬೇಕು.
- ಓದಿದ್ದನ್ನು ಮೆಲುಕು ಹಾಕುತ್ತಿರಬೇಕು
- ಏನೋ ಒಂದು ಉತ್ತರ ಬರದಿದ್ದರೆ ನೊಂದುಕೊಳ್ಳಬಾರದು.
- ಓದಿದ್ದೇವೆ ವಿಷಯದ ಪರೀಕ್ಷೆ ಬಹಳ ಚೆನ್ನಾಗಿ ಬರೆಯುತ್ತೇವೆ ಎಂದು ಮನಸನು ಗಟ್ಟಿಗೊಳಿಸಬೇಕು.

ಫೋಟೋ ಕೃಪೆ : google
ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ ಓದಿದರೆ ಹೆದರಬೇಡಿ ಹೆದರಿದರೆ ಓದಿದ್ದು ಮರೆಯಾಗಿ ಹೋದಿತು. ನಿಮ್ಮಯ ಕನಸುಗಳನ್ನು ನುಚ್ಚು ನೂರು ಮಾಡಿತು.ಹಾಗಾಗಿ ಓದುತ್ತ ಪರಿಕಲ್ಪನೆಗಳನ್ನು ತಿಳಿದುಕೊಳ್ಳಿರಿ.ಪರೀಕ್ಷೆ ಸಮೀಪಿಸಿದಂತೆ ಮುಖ್ಯ ಅಂಶಗಳ ಮಾತ್ರ ಓದನ್ನು ಕೇಂದ್ರೀಕರಿಸಿ ಆಗ ಓದು ಜೊತೆಗಿರುತ್ತದೆ.ಭಯವೂ ದೂರಾಗುತ್ತದೆ. ಸಂತಸವು ಇಮ್ಮಡಿಯಾಗುತ್ತದೆ. ಪರೀಕ್ಷೆಯನು ದಿಟ್ಟತನದಿ ಎದುರಿಸುತ್ತೇವೆ.
ಒಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿ ಭಯವನು ಓಡಿಸಿ,ಶ್ರದ್ಧೆಯಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
- ಅವಿನಾಶ ಸೆರೆಮನಿ
