ಒಡೆದು ಬಿದ್ದ ಹಾಡಿಗೆ ಇಲ್ಲಿ ಮತ್ತೆ ಸ್ವರ ಹಾಕಲಾಗುವುದಿಲ್ಲ…ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರಾದ ಟಿ.ಪಿ.ಉಮೇಶ್ ಅವರ ರಚನೆಯ ಈ ಕವನವನ್ನು ತಪ್ಪದೆ ಮುಂದೆ ಓದಿ…
ಈ ರಹದಾರಿಯಲ್ಲಿ
ಬಿಸಿಲು ಕರಗುವುದು ನಿಲ್ಲುವುದಿಲ್ಲ!
ಯಾರೇ ನಡೆದರೂ ನಡೆಯದಿದ್ದರೂ
ನೆರಳೂ ಕೂಡಾ
ತನ್ನ ಚಹರೆ ಬದಲಿಸುವುದಿಲ್ಲ!
ಕನಸಿನ ಮೇಲೆ
ಮೌನದ ಮಣ್ಣು ಎರಚಿ
ಒಂದೊಂದೇ ದಿನದ ಸಂಜೆ
ಮುಗಿದೀತೆಂದು ಹೇಳಿಬಿಡುವುದು
ನಿಲ್ಲುವುದಿಲ್ಲ!
ನನಗೆ ಗೊತ್ತು
ಈ ನಗರದ ಗದ್ದಲದೊಳಗೆ
ಮನಸು ಚೂರುಚೂರಾಗುವುದು
ನಿಲ್ಲುವುದಿಲ್ಲ!
ಒಡೆದು ಬಿದ್ದ ಹಾಡಿಗೆ
ಇಲ್ಲಿ ಮತ್ತೆ ಸ್ವರ ಹಾಕಲಾಗುವುದಿಲ್ಲ!
ಹೋಗಿಬಿಟ್ಟವರ ಕಣ್ಣಿನ ಬೆಳಕು
ನನ್ನದಾಗುವುದಿಲ್ಲ!
ಅವರು ಅರ್ಧದಲ್ಲೇ ಬಿಟ್ಟ ಮಾತುಗಳು
ನನ್ನೊಳಗೆ ಪೂರ್ಣವಾಗುವುದಿಲ್ಲ!
ಒಮ್ಮೆ ಕೈ ಹಿಡಿದು ನಡೆದವರು
ಮತ್ತೆ ಹಿಂದಿರುಗಿ ಅದೇ ದಾರಿಯಲ್ಲಿ
ನನ್ನ ಜೊತೆ ನಡೆಯುವುದಿಲ್ಲ!
ಈ ಬೆಳಗಿನ ಹನಿಯಂತೆ
ಒಂದು ಚಿಕ್ಕ ನಗು
ಹೃದಯದ ಬಿರುಕುಗಳಲ್ಲಿ
ಮತ್ತೆ ಮೊಳೆಯುವುದು ನಿಲ್ಲುವುದಿಲ್ಲ!
- ಟಿ.ಪಿ.ಉಮೇಶ್ – ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರು, ಚಿತ್ರದುರ್ಗ.
