ನಾಡಿನ ಸಮಸ್ತ ಜನರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಈ ಸುಂದರ ಕವಿತೆಯನ್ನು ತಪ್ಪದೆ ಓದಿ…
ಧರಣಿಯೇ ಮಾತೆಯಾಗಿ
ಹೂನಗೆಯ ಬೀರಿಹಳು
ಅರಶಿನ ಕುಂಕುಮದ
ಮಂಗಳದ ಮೊಗದಿ
ನೇಸರನ ಮಿಂಚುಗಣ್ಣು
ಹೊಳಪ ಪೂಸಿಹುದು
ಜೀವರಾಶಿ ಪ್ರಫುಲ್ಲವಾಗಿ
ಚೈತನ್ಯ ತುಂಬಿಹವು ಜಗದಿ
ಹಳದಿ, ಹಸಿರು, ನೀಲಿ,
ಬಿಳಿ, ಕರಿ ಬಣ್ಣದಹಕ್ಕಿಗಳು
ನಿರತವಾಗಿಹವು ಹರುಷಚಿತ್ತದಲಿ
ಜಗ ಮರೆತು ಮಧುಪಾನದಿ
ಸ್ತೋತ್ರಾರ್ಚನೆಯಲಿ
ನಿರತವೀ ಜಗ
ಎಲ್ಲೆಲ್ಲು ವಾಯುದೇವ
ಮಂಗಳವ ಹಾಡಿ
ಹೊಸದಾಗಿದೆ ಜಗ
ಹೊಸಹೂಗಳ ನಗಿಸಿ
ತರುಲತೆಗಳ ಬಳುಕಿನಲಿ
ನಾಟ್ಯದಾಮೋದ ತುಂಬಿ
ಆಗಸದ ಚಪ್ಪರದ ಮೆಲೆ
ಹಗಲ ದೀಪದ ಕಿರಣಸಾಲು
ಮುದ್ದಿಸಿದೆ ಮನವ
ಹರಸುತ ಶುಭತರಲಿ ಗೌರಿ ಎಂದು…!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
