“ತಿಳು ಗುಲಾಬಿ ಬಣ್ಣದ ಕಬ್ಬಕ್ಕಿಗಳು” ವಲಸೆ ಪಕ್ಷಿಗಳಾಗಿದ್ದು, ಹೆಗ್ಗೆರೆಕೆರೆಗೆ ಬಂದಾಗ ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಸುಂದರ ಪಟಗಳನ್ನು ಮತ್ತು ಬರಹವನ್ನು ತಪ್ಪದೆ ಓದಿ….
ಹಾವೇರಿಯ ಕಾರದ ತಿನಿಸಿಗೆ ಮರಳಾಗಿರುವ “ಗುಲಾಬಿ ಬಣ್ಣದ ಕಬ್ಬಕ್ಕಿಗಳು”…!
ಹಾವೇರಿಯಲ್ಲಿ ಇತ್ತೀಚೆಗೆ ಜರುಗಿದ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ ಹಾಗೂ ಸಮಾರಂಭದ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮೇರಾವನ್ನು ಹೊರತಗೆದದ್ದು ಬಿಟ್ಟರೆ, ಮತ್ತೆ ಕ್ಯಾಮೇರಾ ಕಡೆಗೆ ನೋಡಿರಲಿಲ್ಲ. ಜನವರಿ೨೧ರಂದು ಭಾನುವಾರ ಸ್ವಲ್ಪ ತಡವಾಗಿ ಹಾಸಿಗೆಯಿಂದ ಎದ್ದು ಮುಖ-ಮಾರ್ಜನ ಮಾಡಿಕೊಂಡೆ. ಚಳಿಗಾಲ ಮುಕ್ತಾಯದ ಹಂತಕ್ಕೆ ಬಂದಿದೆ, “ಹೆಗ್ಗೆರೆಕೆರೆಗೆ ವಲಸೆಪಕ್ಷಿಗಳು ಬಂದಿರಬಹುದು ಎಂದುಕೊಂಡು… ಕ್ಯಾಮೇರಾ ಬ್ಯಾಗನ್ನು ಹೇಗೆಲೇರಿಸಿಕೊಂಡು…. ಬೆಳಿಗ್ಗೆ ೮-೧೦ರಸುಮಾರಿಗೆ ಕಟ.. ಕಟ..ಎನ್ನವ ಬೈಕ್ನ್ನೇರೆ ಹೆಗ್ಗೇರಿಕೆರೆಯ ಕಡೆಗೆ ಬೈಕ್ ಓಡಿಸಿದೆ”. “ಅಲ್ಲಿ ಸ್ಥಳೀಯ ಪಕ್ಷಿಗಳನ್ನು ಬಿಟ್ಟರೆ ಯಾವುದೇ ವಲಸೆಪಕ್ಷಿಗಳು ಕಣ್ಣಿಗೆ ಕಾಣಿಸಲಿಲ್ಲ”. ಸ್ವಲ್ಪ ಸಮಯ ಅಲ್ಲಲ್ಲಿ ಓಡಾಡಿ ಮತ್ತೆ ಮನೆಯ ಕಡೆಗೆ ಬೈಕ್ ತಿರುಗಿಸಿದೆ, ಇನ್ನೇನು ಹೆದ್ದಾರಿಗೆ ಬರಬೇಕೆನ್ನುವಷ್ಟರಲ್ಲಿಯೇ ದಾನೇಶ್ವರಿನಗರದಲ್ಲಿನ ತಂತಿಯ ಮೇಲೆ ಕುಳಿತಿದ್ದ ಪಕ್ಷಿಗಳ ಗುಂಪು ಗಮನಸೆಳೆಯಿತು.
ತಡಮಾಡದೆ ಬೈಕ್ ನಿಲ್ಲಿಸಿ, ಪಕ್ಷಿಗಳ ಕಡೆಗೆ ನೋಡಿದೆ, ಅಲ್ಲಿ ತಿಳು ಗುಲಾಬಿ ಬಣ್ಣದ ಕಬ್ಬಕ್ಕಿಗಳು ಇರುವುದು ಕಂಡಿತು. ಇವುಗಳ ಚಲನವಲನ ಗಮನಿಸುತ್ತಾ ಅವುಗಳ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದೆ. “ತಿಳು ಗುಲಾಬಿಬಣ್ಣದ ಕಬ್ಬಕ್ಕಿಗಳು” ವಲಸೆ ಪಕ್ಷಿಗಳಾಗಿದ್ದು, ಇವು ಏಕೆ ನಗರ ಪ್ರದೇಶಕ್ಕೆ ಬಂದಿವೆ?ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು.
ಸಾಮಾನ್ಯವಾಗಿ ಇವುಗಳ ಚಳಿಗಾಲದಲ್ಲಿ ನಮ್ಮ ಭಾಗದ ಕೆರೆಕಟ್ಟೆಗಳಿಗೆ ವಲಸೆ ಬರುತ್ತವೆ. (ಗುತ್ತಲ-ನೆಗಳೂರು, ಅಗಡಿ ಭಾಗದಲ್ಲಿ ಇವುಗಳು ಹೆಚ್ಚಾಗಿ ಕಂಡು ಬಂದಿದ್ದವು)ದಟ್ಟವಾದ ಪೋದೆಯ ಪ್ರದೇಶದಲ್ಲಿ ಗೂಡು ನಿರ್ಮಿಸಿಕೊಂಡು ಗುಂಪಾಗಿ ವಾಸಿಸುವ ಇವುಗಳು ಸಂತಾನ ಅಭಿವೃದ್ಧಿ ಪಡಿಸಿಕೊಂಡು ಬೇಸಿಗೆ ಆರಂಭವಾದ ತಕ್ಷಣ ಇವು ಮೂಲ ಸ್ಥಳಕ್ಕೆ ಮರಳುತ್ತವೆ.
“ನೋಡಲು ಇವು ನಮ್ಮ ಸ್ಥಳೀಯ ಪಕ್ಷಿ ಗೊರವಂಕನ ತರಹ ಕಂಡು ಬರುತ್ತವೆ. ಆದರೆ, ರೂಪದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ”. ಇವುಗಳಿಗೆ ಇಂಗ್ಲಿಷನಲ್ಲಿ “ರೋಜಿ ಸ್ಟಾರ್ಲಿಂಗ್” , ಕನ್ನಡದಲ್ಲಿ “ಗುಲಾಬಿ ಬಣ್ಣದಕಬ್ಬಕಿ” ಎಂದು ಕರೆಯಲಾಗುತ್ತದೆ. “ಇವುಗಳು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾದಿಂದ ವಲಸೆ ಬರುತ್ತವೆ”. “ಹಕ್ಕಿಯ ದೇಹ ಹಾಗೂ ಚುಂಚು ಗುಲಾಬಿ ಬಣ್ಣದಿಂದ ಕೂಡಿದ್ದರೂ, ಕಾಲು ಮಾತ್ರ ತಿಳಿಕಿತ್ತಳೆ ಬಣ್ಣದಿಂದ ಕೂಡಿರುತ್ತದೆ.
ಇವು ಜೋಳ, ರಾಗಿ ಸೇರಿದಂತೆ ವಿವಿಧ ಧವಸ ಧಾನ್ಯ ಬೆಳೆವ ಪ್ರದೇಶದಲ್ಲಿ ಗುಲಾಬಿ ಬಣ್ಣದ ಕಬ್ಬಕ್ಕಿಗಳು ದೊಡ್ಡ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ಗುಂಪಿನಲ್ಲಿ ಸುಮಾರು ೫೦೦ ರಿಂದ ೧,೦೦೦ ಹಕ್ಕಿಗಳು ಇರುತ್ತವೆ”.
“ಒಟ್ಟಾಗಿ ಬಂದು ಹೊಲಗಳಿಗೆ ದಾಳಿ ಮಾಡುವ ಇವುಗಳು ಜೋಳದ ತೆನೆಗಳಲ್ಲಿನ ಕಾಳುಗಳನ್ನು ಭಕ್ಷಿಸುತ್ತವೆ. ಬೆಳೆಗಳಿಗೆ ಮಾರಕವಾದ ಚಿಟ್ಟೆ, ಇತರೆ ಕೀಟಗಳನ್ನ ಭಕ್ಷಿಸಿ ಕೆಲವೊಮ್ಮೆಧಾನ್ಯ ರಕ್ಷಿಸಿ ಉಪಕಾರ ಮಾಡುವುದರಿಂದ ಇವುಗಳನ್ನು ರೈತರು ಸಹಿಸಿಕೊಳ್ಳುವುದು ಉಂಟು!”. ಇದಲ್ಲದೇ, “ಈ ಹಕ್ಕಿಗಳು ಪರಾಗಸ್ಪರ್ಶದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ರೈತರಪಾಲಿಗೆ ಇದು ಪ್ರಿಯವಾದ ಪಕ್ಷಿಯಾಗಿದೆ”.
“ಇವುಗಳು ಮೈನಾ ಹಕ್ಕಿಗಳ ಒಡನಾಟದಲ್ಲಿರುವುದರಿಂದ ಅವುಗಳ ಜೊತೆಗೆ ಸೇರಿಕೊಂಡು ಹಣ್ಣು, ಕಾಳು ತಿನ್ನುತ್ತವೆ. ಹೆಣ್ಣು ಗುಲಾಬಿ ಕಬ್ಬಕ್ಕಿ ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಗಂಡು -ಹೆಣ್ಣು ಸೇರಿ ಮರಿಗಳಿಗೆ ಗುಟುಕು ನೀಡಿ, ಆರೈಕೆ ಮಾಡುತ್ತವೆ. ಗುಲಾಬಿ ಮತ್ತು ಕಪ್ಪು ಕಬ್ಬಕ್ಕಿಗಳು ಸಾಧಾರಣ ಗಾತ್ರದವುಗಳಾಗಿದ್ದು (೨೨ ಸೆಂ)ಕಪ್ಪು, ಎದೆ ಮತ್ತು ತಿಳಿ ಗುಲಾಬಿ ಬಣ್ಣದಹೊಂದಿವೆ”.
ಸಾಮಾನ್ಯವಾಗಿ “ಕೆರೆಯ ಪ್ರದೇಶದಲ್ಲಿ, ಜೋಳದ ಹೊಲಗಳಲ್ಲಿ ಹೆಚ್ಚಾಗಿ ಕಂಡು ಬರುವ ಗುಲಾಬಿ ಬಣ್ಣದ ಕಬ್ಬಕ್ಕಿಗಳು ನಗರಪ್ರದೇಶದಲ್ಲಿರುವುದು ನನಗೆ ಅಚ್ಚರಿ ಎನಿಸಿತು”!. “ಇವುಗಳು ನಗರ ಪ್ರದೇಶದಲ್ಲಿ ಕಂಡುಬಂದಿರುವುದಕ್ಕೆ ಕಾರಣ ಹುಡುಕತೊಡಗಿದಾಗ ನನಗೆ ಕಂಡದ್ದು, ಹಾವೇರಿಯ ಕಾರದ ತಿನಿಸಗಳು”. “ಕಾರದ ತಿನಿಸುಗಳಿಗೆ ಮರುಳಾದ ಗುಲಾಬಿಬಣ್ಣದ ಕಬ್ಬಕ್ಕಿಗಳು. ತಂತಿಯ ಮೇಲೆ ಕುಳಿತು ಸರತಿಯಲ್ಲ ಹಾರಾಟ ನಡೆಸಿ ಕಾರದ ತಿನಿಸುಗಳು ಬಿದ್ದಿರುವ ಸ್ಥಳಕ್ಕೆ ಹಾರಿ ಹೋಗಿ ಅಲ್ಲಿಂದ ಕಾರದತಿನಿಸುಗಳನ್ನು ಹೆಕ್ಕಿಕೊಂಡು ತಿಂದು ಮತ್ತೆ ವಿದ್ಯುತ್ ತಂತಿಯಮೇಲೆ ಬಂದು ವಿಶ್ರಮಿಸುತ್ತಿದ್ದವು”.
“ಹಾವೇರಿನಗರದ ದಾನೇಶ್ವರಿನಗರದಲ್ಲಿನ ಹೆಗ್ಗೆರೆಕೆರೆಗೆ ಹೋಗುವ ಮುಖ್ಯರಸ್ತೆಯಲ್ಲಿನ ಡಾ.ರಾಜಕುಮಾರ ಮರೋಳ ಆಸ್ಪತ್ರೆಯ ಪಕ್ಷದ ಕಟ್ಟಡದಲ್ಲಿ ಕಾರ ಹಾಗೂ ಸಿಹಿ ತಿನಿಸು ತಯಾರಿಸುವ ಘಟಕವಿದ್ದು, ಈ ಘಟಕದವರು ಅಳಿದುಳಿದ ಕರಿದ ಕೆಟ್ಟ ತಿಂಡಿ-ಕರಿದ ಪದಾರ್ಥಗಳನ್ನು ಈ ಪ್ರದೇಶದಲ್ಲಿ ಚೆಲ್ಲುತ್ತಾರೆ. ಇವುಗಳಿಗೆ ಮನಸೋತ ಗುಲಾಬಿ ಬಣ್ಣದ ಕಬ್ಬಕ್ಕಿಗಳು ಸ್ಥಳೀಯ ಗೊರವಂಕ, ಕಾಗೆಗಳ ಜೊತೆಗೆ ಆಗಾಗ ಈ ಪ್ರದೇಶಕ್ಕೆ ಬಂದು ಸುಲಬವಾಗಿ, ಸರಳವಾಗಿ ಸಿಗುವ ಕಾರದತಿನಿಸುಗಳನ್ನು ತಿಂದು ಹಾರುವುದು ಗೊತ್ತಾಯಿತು”.
ಸುಮಾರು ಹೊತ್ತು ಆ ಸ್ಥಳದಲ್ಲಿದ್ದ ನನಗೆ “ಗುಲಾಬಿ ಬಣ್ಣದ ಕಬ್ಬಕ್ಕಿಗಳು ಹಾವೇರಿಯ ಕಾರದ ತಿನಿಸಿಗೆ ಮರಳಾಗಿರುವ ಅಸಲಿ ವಿಷಯ ಗೊತ್ತಾಯಿತು”. “ಒಂದು ಕಡೆಗೆ ಬಿಸಿಲನ ತಾಪ ಹೆಚ್ಚುತ್ತಿತ್ತು, ಮೇಲಾಗಿ ಹೆಗ್ಗೆರೆ ರಸ್ತೆಯಲ್ಲಿ ಸಂಚಾರದಟ್ಟಣೆ ಹೆಚ್ಚುತ್ತಾ ಹೋಯಿತು. ಹಾದಿ ಹೋಕರು ಗುಲಾಬಿ ಬಣ್ಣದ ಕಬ್ಬಕ್ಕಿಗಳು ಪೋಟೋಗಳನ್ನು ತಗೆಯುತ್ತಿದ್ದ ನನ್ನ ಕಡೆಗೊಮ್ಮ, ಗುಲಾಬಿ ಬಣ್ಣದ ಕಬ್ಬಕ್ಕಿಗಳ ಕಡೆಗೆ ನೋಡಲಾರಂಭಿಸಿದರು”. “ಜನರು ಜಾಸ್ತಿಯಾದ ಕಾರಣಕ್ಕೆ ಗುಲಾಬಿಬಣ್ಣದ ಕಬ್ಬಕ್ಕಿಗಳ ಏಕಾಂತಕ್ಕೆ ಧಕ್ಕೆ ಬಂದಂತೆ ಕಾಣಿಸಿತೆಂದು ಕಾಣುತ್ತದೆ. ಅವುಗಳ ವಿದ್ಯುತ್ ತಂತಿಯ ಮೇಲಿಂದ ದೂರಕ್ಕೆ ಹಾರಿಹೋದವು. “ಗುಲಾಬಿ ಬಣ್ಣದ ಕಬ್ಬಕ್ಕಿಗಳ ಆಹಾರ ಮೀಡತೆ, ಕ್ರೀಮಿ-ಕೀಟಗಳಾಗಿದ್ದ, ಆದರೆ ಇವುಗಳೇಕೆ ಕಾರದ ತಿನಿಸುಗಳ ರುಚಿಹಚ್ಚಿಕೊಂಡಿವೆ”?. “ಈ ಕಾರದ ತಿನಿಸುಗಳು ಗುಲಾಬಿಬಣ್ಣದ ಕಬ್ಬಕ್ಕಿಗಳ ಆರೋಗ್ಯಮೇಲೆ ಪರಿಣಾಮ ಬಿರುವುದಿಲ್ಲವೇ”? ಎಂದು ಆಲೋಚಿಸುತ್ತಾ ಮನೆಯ ಕಡೆಗೆ ಬೈಕ್ ಓಡಿಸಿದೆ.
- ಚಿತ್ರ/ಲೇಖನ: ಮಾಲತೇಶ ಅಂಗೂರ, ವನ್ಯಜೀವಿ ಛಾಯಾಗ್ರಾಹಕ, ಹಾವೇರಿ.