ಹಸ್ತವನು ಹಿಡಿಯುತ್ತ, ಪುಸ್ತಕವನೋದಿಸುತ ಮಸ್ತಕಕ್ಕೇರಿಸುವ ಗುರಿಕಾರನು ನಮ್ಮ ಗುರುವರ್ಯರು…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅರಿವೆರೆವ ಗುರುವಿಂಗೆ
ಕರಮುಗಿದು ನಮಿಸಿದರೆ
ಪೊರೆಯುವನು ಸರ್ವರನು ಗುರುದೇವನು
ಹರಸುತಲಿ ಬೆಳಗಿಸಲು
ತೆರೆಸುತ್ತಲೊಳಗಣ್ಣ
ತೊರೆಸುತ್ತ ತಮವನ್ನು ಹರಸುವವನು
ಅಪ್ಪಿರುವ ತಪ್ಪುಗಳ-
ನೊಪ್ಪದೆಯೆ ತಿದ್ದುವನು
ಕಪ್ಪವನು ಕೇಳದೆಯೆ ಕಲಿಸುವವನು
ತುಪ್ಪದನ್ನದಸವಿಯ
ತಪ್ಪದೆಯೆ ವರ್ಣಗಳ
ಬೆಪ್ಪನಾದರು ಸರಿಯೆ ಬಡಿಸುವವನು
ಹಸ್ತವನು ಹಿಡಿಯುತ್ತ
ಪುಸ್ತಕವನೋದಿಸುತ
ಮಸ್ತಕಕ್ಕೇರಿಸುವ ಗುರಿಕಾರನು
ಮಸ್ತಿಷ್ಕಕಕ್ಷರವೆ
ಮಸ್ತಕಕ್ಕಭಿಷೇಕ
ಶಿಸ್ತಿನಿಂದೆಲ್ಲವನು ಬೋಧಿಸುವನು
ಹೊತ್ತಗೆಯ ಬೆಳಕಿಂದ
ಕತ್ತಲನು ಕಳೆಯುತ್ತ
ಬಿತ್ತುತ್ತ ಬುದ್ಧಿಯನು ಪೊರೆಯುವವನು
ಸುತ್ತಲಲ್ಲಡರಿರುವ
ಹತ್ತಾರು ತೊಡರುಗಳ
ಮೆತ್ತನಿಳಿಸೋ ಜ್ಯೋತಿ ಗುರುವರ್ಯನು.
- ಚನ್ನಕೇಶವ ಜಿ ಲಾಳನಕಟ್ಟೆ – ಛಂದೋಬದ್ಧ ಬರಹಗಾರರು
