ರಾಘವಾಂಕ ಪಂಡಿತ ಅವರ ರಚನೆಯ ಹರಿಶ್ಚಂದ್ರ ಚಾರಿತ್ರ ಕೃತಿಯ ಕುರಿತು ರವೀಂದ್ರ ಕುಮಾರ್ ಎಲ್ವಿ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಕೃತಿಗೆ ನಾಮಂ ಹರಿಶ್ಚಂದ್ರ ಚಾರಿತ್ರವೀ
ಕೃತಿಗೊಡೆಯನಮಳಪಂಪಾವಿರೂಪಾಕ್ಷನೀ
ಕೃತಿಗೆ ಪಾಲಕರು ಲೋಕದ ಭಕ್ತ ಜನವಿದಂ ಪೇಳ್ದಾತನಾರೆಂದಡೆ l
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿಕಮಲರವಿ ರಾಘವಾಂಕ ಪಂ
ಡಿತನೆಂದೊಡೀ ಕಥಾ ರಸದ ಲಹರಿಯನು ಬ
ಸದರಾರೀ ಧರೆಯೊಳು ll
ಈ ಕೃತಿಯ ಹೆಸರು ಹರಿಶ್ಚಂದ್ರ ಚಾರಿತ್ರ, ಈ ಕೃತಿಗೆ ಒಡೆಯನು, ಮಾಲೀಕನು ಅಮಳ – ಅಮಲ ಎಂದರೆ ಮಲವಿಲ್ಲದ ಅರ್ಥಾತ್ ನಿರ್ಮಲನಾದ ಪಂಪಾ ವಿರೂಪಾಕ್ಷನು.
ಈ ಕೃತಿಯ ಪಾಲಕರು ಕಾಪಾಡುವವರು ಲೋಕದ ಪ್ರಪಂಚದ ಭಕ್ತ ಜನರು ಇದನ್ನು ಪೇಳ್ದಾತನಾರೆಂದೊಡೆ ಹೇಳಿದವನು ಯಾರೆಂದರೆ ಚತುರ ಜಾಣ ಕವಿರಾಯ ಹಂಪೆಯ ಹರೀಶ್ವರನ ವರಸುತ ಎಂದರೆ ಹರೀಶ್ವರನ ಅನುಗ್ರಹದಿಂದ ಹುಟ್ಟಿದ ಉಭಯ ಕವಿ. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಯಲ್ಲಿ ಕವಿತ್ವ ಮಾಡುವ ಕಮಲ ರವಿ ರಾಘವಾಂಕ ಪಂಡಿತನ್… ಎಂದೊಡೀ ಕಥಾ ರಸದ ಲಹರಿ… ಕಥಾ ಸಾರದ ಅಲೆಯನ್ನು ಬಣ್ಣಿಸದರ್ – ವರ್ಣಿಸದವರು ಆರೀ ಧರೆಯೋಳ್.. ಯಾರು ಈ ಭೂಮಂಡಲದಲ್ಲಿ.

ಈ ಕೃತಿಯ ಹೆಸರು ಹರಿಶ್ಚಂದ್ರ ಚಾರಿತ್ರ. ಹಂಪೆಯ ವಿರೂಪಾಕ್ಷನೇ ಈ ಕೃತಿಯ ಯಜಮಾನ. ಲೋಕದ ಭಕ್ತ ಜನರೇ ಇದನ್ನು ಕಾಪಾಡುವವರು. ಎಷ್ಟು ಸುಂದರ ಮತ್ತು ಸತ್ಯವಾದ ಮಾತುಗಳಿವು. ಸಾಹಿತ್ಯ ಲೋಕದ ಭಕ್ತ ಜನರೇ ಇಂತಹ ಕೃತಿಗಳನ್ನು ಕಾಪಾಡುವವರು ಎಂಬ ಭಾವ.
ಇದನ್ನು ಬರೆದವನು ಹಂಪೆಯ ಹರೀಶ್ವರನಿಂದ ಅನುಗ್ರಹಿಸಲ್ಪಟ್ಟ ರಾಘವಾಂಕ ಪಂಡಿತ. ಈತನು ಸಂಸ್ಕೃತ ಮತ್ತು ಕನ್ನಡ ಎರಡರಲ್ಲೂ ಕಾವ್ಯ ರಚಿಸಬಲ್ಲ ಜಾಣ ಕವಿ.
ಈತನ ಕಾವ್ಯದ ಕಥಾ ರಸವನ್ನು ಈ ನಾಡಿನಲ್ಲಿ ವರ್ಣಿಸದವರೇ ವಿರಳ ಎಂಬುದು ಈ ಪದ್ಯದ ಸಾರ.
ಮುಂದುವರೆಯುವುದು.
ಹಿಂದಿನ ಸಂಚಿಕೆ:
- ರವೀಂದ್ರ ಕುಮಾರ್ ಎಲ್ವಿ – ಮೈಸೂರು.
