‘ಹಾವೇರಿ ಎಂದರೆ ಕೇವಲ ಸಮ್ಮೇಳನದ ನೆನಪು ಮಾತ್ರ ಅಲ್ಲ, ಸಾಹಿತ್ಯಾಸಕ್ತರನ್ನು, ಸಾಹಿತಿಗಳನ್ನು, ಕಲಾವಿದರನ್ನು ಅಪಾರವಾದ ಪ್ರತಿಭೆಗಳನ್ನು ಕೊಟ್ಟಂತಹ ಜಿಲ್ಲೆ ಅದು. ಅಲ್ಲಿ ಕಳೆದ ಸುಮಧುರ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ – ಹೂಲಿಶೇಖರ, ಮುಂದೆ ಓದಿ…
ಹಾವೇರಿ ಸಮ್ಮೇಳನ ನಿನ್ನೆ ಮುಗಿಯಿತು. ನನ್ನ ಮಟ್ಟಿಗೆ ಅದು ಮರೆತೂ ಹೋಯಿತು. ಅದಕ್ಕೆ ಎರಡು ಕಾರಣ. ಒಂದು ನಾನು ಸಮ್ಮೇಳನಕ್ಕೆ ಹೋಗಿಯೇ ಇಲ್ಲ. ಎರಡನೆಯ ನಾನು ಇಲ್ಲಿಯ ತನಕ ಇಪ್ಪತ್ತು ಸಮ್ಮೇಳನಗಳನ್ನು ನೋಡಿ ಬಂದಿದ್ದೇನೆ. ಐವತ್ತನೇ ಸಮ್ಮೇಳನ ದೆಹಲಿಯಲ್ಲಿ ನಡೆಯಿತು. ಆಗಲೂ ಆಗ ಹೋಗಿದ್ದೆ.ದಿ. ಜಿ.ಪಿ.ರಾಜರತ್ನಂ ಅವರು ಆಗ ಸಮ್ಮೇಳನ ಅಧ್ಯಕ್ಷರಾಗಿದ್ದರು. ಇದುವರೆಗೆ ಸುಮಾರು ನೂರಾ ಐವತ್ತು ನಿರ್ಣಯಗಳನ್ನು ಮಂಡಿಸಿದ್ದನ್ನು ಕಂಡಿದ್ದೇನೆ. ಅವೆಲ್ಲ ಮುಂದೇನಾದುವೋ ಗೋತ್ತಿಲ್ಲ. ಚರ್ವಿತ ಚರ್ವಣ ವಿಷಯ ಬಿಟ್ಟರೆ ಭರ್ಜರಿ ಊಟ ˌ ಆಸಕ್ತಿಯಿಂದ ಬಂದವರ ಸಂಖ್ಯೆ ಹೆಚ್ಚು. ಬರುವವರು ಕಡಿಮೆಯಾಗಿಲ್ಲ. ಅಷ್ಟರ ಮಟ್ಟಿಗೆ ನನಗೆ ಸಮ್ಮೇಳನದ ಕೆಲವು ನೆನಪುಗಳಿವೆ.
ಆದರೆ ಹಾವೇರಿ ಪದೇ ಪದೇ ನೆನಪಾಗುವುದು ನನಗೆ ಈ ಕಾರಣದಿಂದ. ಮೋದಲು ಹಾವೇರಿಯ ಸೀಮೆಯಲ್ಲ ತಿರುಗಾಡಿ ಮೂರು ಕನ್ನಡ ಕಿರುತೆರೆಯ ಧಾರಾವಾಹಿಗಳನ್ನು ಇಲ್ಲಿ ನಿರ್ಮಿಸಿದ್ದು. ಈ ಮೂರೂ ಧಾರಾವಾಹಿಗಳಿಗೆ ನನ್ನ ಸಾಹಿತ್ಯ ಬೇರು ಬಿಟ್ಟಿದ್ದು. ಕಥೆ ˌ ಚಿತ್ರಕಥೆ ˌಸಂಭಾಷಣೆಗಳಿಗೆ ಪ್ರಮುಖವಾಗಿ ನಾನೇ ಭಾಗವಾಗಿದ್ದೆ. ಅವುಗಳಲ್ಲಿ ಮೊದಲನೆಯದು ‘ಮೂಡಲ ಮನೆ’ . ವೈಶಾಲಿ ಕಾಸರವಳ್ಳಿಯವ ನಿರ್ದೇಶನದು. ಈ ಟೀವಿಯ ನಿರ್ಮಾಣದ್ದು. ಎರಡನೆಯದು ಕಸ್ತೂರಿ ವಾಹಿನಿ ನಿರ್ಮಿಸಿದ ಧಾರಾವಾಹಿ ‘ಆ ಊರು ಈ ಊರು’ ಖ್ಯಾತ ನಿರ್ದೇಶಕ ನಾಗಾಭರಣ ಅವರ ನಿರ್ದೇಶನದ್ದು. ಮೂರನೆಯದು ‘ಸೌಭಾಗ್ಯವತಿ’ ಎಂಬಧಾರಾವಾಹಿ. ಇದರ ನಿರ್ಮಾಣ ಕೂಡ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರ ಕಸ್ತೂರಿ ವಾಹಿನಿ ಮೂಲಕ. ಇದರ ನಿರ್ದೇಶಕರು ಹಾವೇರಿಯವರೇ ಆದ ಶಿವಣಗೌಡ ಹಾವೇರಿಯವರು. ಚಿತ್ರೀಕರಣದ ಸಂದರ್ಭದಲ್ಲಿ ನಾನೇ ಖುದ್ದಾಗಿ ತಂಡದಲ್ಲಿರುತ್ತಿದ್ದೆ. ಹಾವೇರಿಯ ಬಹುತೇಕ ಹಳ್ಳಿಗಳಲ್ಲಿ ನನ್ನ ಭೇಟಿ ಇರುತ್ತಿತ್ತು. ಮನೆಗಳುˌ ವಾಡೆˌ ಗುಡಿ ಬಣಿವೆˌ ಹಗೆ ಹಳ್ಳಗಳು ಎಲ್ಲವನ್ನೂ ನೋಡಿದೆ. ಇಲ್ಲಿ ತಾಂಡಾಗಳಲ್ಲೂ ಕೂತು ದೃಶ್ಯ ಬರೆಯುತ್ತಿದ್ದೆ. ಜಿಲ್ಲೆ ಬಹುತೇಕ ಜಾತ್ರೆಗಳಿಗೂ ದೃಶ್ಯ ಬರೆದು ಚಿತ್ರೀಕರಣ ಮಾಡಲಾಗಿದೆ.
ಇನ್ನೊಂದು ಬಹುಮುಖ್ಯವಾಗಿ ನಾನು ಮರೆಯಲಾರದ ನೆನಪು ಇಲ್ಲಿದೆ. ಏನಂದರೆ ಸೌಭಾಗ್ಯ ಧಾರಾವಾಹಿಗೆ ಹಾಡು ಟೈಟಲ್ ಹಾಡಿಗಾಗಿ ನಾನು ವಿನಂತಿಸಿಕೊಂಡ ಕೂಡಲೇ ಬರೆದುಕೊಟ್ಟವರು ಸುಪ್ರಸಿದ್ಧ ಕವಿ ದೊಡ್ಡರಂಗೇ ಗೌಡರು. ಇಡೀ ಧಾರಾವಾಹಿಯನ್ನು ಸಂಪೂರ್ಣ ಹಾವೇರಿ ಜಿಲ್ಲೆಯಲ್ಲಿಯೇ ಚಿತ್ರೀಕರಣಗೊಳಿಸಿದೆವು. ಈ ಹಾಡನ್ನು ಬರೆದುಕೊಟ್ಟವರು ಡಾ.ದೊಡ್ಡರಂಗೇಗೌಡರು. ಮುಂದೆ ಅವರೇ ಈಗ ಹಾವೇರಿಯಲ್ಲಿ ಅ.ಭಾ.ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಈ ನೆನಪು ನನಗೆ ಮರೆಯಲಾಗದು. ಜಿಲ್ಲೆಯ ತುಂಬ ಓಡಾಡಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಓಡಾಡಿದ್ದೇನೆ. ಈ ಮೂಲಕ ಹಾವೇರಿಯ ಕಲಾವಿದರುˌ ಬರಹಗಾರರನ್ನು ಭೇಟಿಯಾಗಿದ್ದೇನೆ. ಮೂರು ವರ್ಷಕ್ಕಿತ ಹೆಚ್ಚು ಕಾಲ ಈ ಹಳ್ಳಿಗಳನ್ನು ತಿರುಗಾಡಿದ್ದೇನೆ. ಈ ನೆನಪು ನನಗೆಂದೂ ಮರೆಯಲಾರದ್ದು. ಸಾಹಿತ್ಯ ಸಮ್ಮೇಳನಕ್ಕಿಂತ ನನಗೆ ಈ ನೆನಪೇ ದೊಡ್ಡದು.
- ಹೂಲಿಶೇಖರ – ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು.