ಬೇಸಿಗೆ ರಜೆ ಬಂತೆಂದರೆ ಸಾಕು. ಇಡೀ ಬೆಂಗಳೂರಿನಲ್ಲಿ ಬೇಸಿಗೆ ಶಿಬಿರಗಳು ಗರಿಗೆದರಿ ನಿಲ್ಲುತ್ತವೆ. ಮೊದಲು ಅದರ ಬಗ್ಗೆ ಅಬ್ಬರದ ಪ್ರಚಾರ. ಮಕ್ಕಳು ಮತ್ತು ಪಾಲಕರನ್ನು ಆಕರ್ಷಿಸಲು ಹೊಸಬಗೆಯಲ್ಲಿ ಶಿಬಿರ ಆಯೋಜಿಸುವುದು. ಅದಕ್ಕಾಗಿ ಬಣ್ಣದ ಕರಪತ್ರಗಳು, ಪತ್ರಿಕಾ ಸುದ್ದಿಗಳು ಯಥೇಚ್ಛವಾಗಿ ಸುರುವಾಗುತ್ತವೆ. ಇಡೀ ಬೆಂಗಳೂರಿನ ಥೇಟರುಗಳು, ಕಲ್ಯಾಣ ಮಂದಿರಗಳು ಇಂಥ ಶಿಬಿರಗಳ ಕೊನೇ ದಿನದ ಕಾರ್ಯಕ್ರಮಕ್ಕೆ ಬುಕ್ ಆಗುತ್ತವೆ. ರಂಗ ತರಬೇತಿ ಪಡೆದವರು, ಹವ್ಯಾಸಿ ನಟರು, ಕೆಲವು ಸಂಘಟಕರು ನಡೆಸುವ ವರಿಷದ ಕಾರ್ಯಕ್ರಮಗಳು ಇವು.
ಹಾಗೆಂದ ಮಾತ್ರಕ್ಕೆ ಇಂಥ ಮಕ್ಕಳ ಶಿಬಿರಗಳು ಕೇವಲ ಬೆಂಗಳೂರಲ್ಲಿ ಮಾತ್ರ ನಡೆಯುತ್ತವೆ ಎಂದು ತಿಳಿಯಬೇಕಿಲ್ಲ. ಬೆಂಗಳೂರಾಚೆ ಇತರ ನಗರಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲೂ ನಡೆಯುತ್ತವೆ. ವ್ಯತ್ಯಾಸವೆಂದರೆ ಇಲ್ಲಿ ಶಿಬಿರಗಳು ಸಂಪತ್ತನ್ನು ನೋಡಿಕೊಂಡು ತೂಗುತ್ತವೆ. ಅದ್ದೂರಿಯೂ ಆಗಿರುತ್ತವೆ.ಆದರೆ ಇತರ ಕಡೆ ಹಣ ಎರಡನೇ ಸಾಲಿನಲ್ಲಿ ನಿಂತಿರುತ್ತದೆ. ಅಲ್ಲಿ ಏನಿದ್ದರೂ ಉತ್ಸಾಹ- ತ್ಯಾಗಗಳದ್ದೇ ಕಾರು-ಬಾರು. ಹಣ ಏನಿದ್ದರೂ ಶಿಬಿರದ ಉಸಿರಾಟಕ್ಕಷ್ಟೆ. ಮೈಸೂರಿನಲ್ಲಿ ಪ್ರತಿ ಬೇಸಿಗೆಗೆ ರೂಪಿತವಾಗುವ ಅಪರೂಪದ ಬೇಸಿಗೆ ಶಿಬಿರದ ಬಗ್ಗೆ ನಿಮಗೆ ಇಲ್ಲಿ ಹೇಳಲೇಬೇಕು. ಅದನ್ನು ನಡೆಸುವ ಮಹಿಳೆಯ ಉತ್ಸಾಹದ ಬಗ್ಗೆಯೂ ಹೇಳಬೇಕು.
ಶ್ರೀಮತಿ ಸವಿತಾ ಪ್ರಭಾಕರ ಅವರು ಇಂಜನಿಯರ ಪತ್ನಿ. ಬಿ.ಎಸ್ಸಿ. ಪದವೀಧರೆ. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕಾಳೀ ನದಿ ಯೋಜನೆಯಲ್ಲಿ ಸಿವಿಲ್ ಇಂಜನಿಯರ್ ಆಗಿದ್ದ ವೈ.ಎಸ್.ಪ್ರಭಾಕರ್ ಅವರ ಶ್ರೀಮತಿ ಸವಿತಾ ಅವರು ಮಕ್ಕಳಿಗಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಯಾವ ಶಿಕ್ಷಕ ಸಾಹಿತಿಯೂ ಬರೆಯದಷ್ಟು ಮಕ್ಕಳ ಪುಸ್ತಕ ರಚಿಸಿದ್ದಾರೆ. ಮಕ್ಕಳ ನಾಟಕಗಳಿಗಾಗಿ ಮೇಳದಲ್ಲಿ ಹಾಡಿದ್ದಾರೆ. ಅದಕ್ಕಾಗಿ ಊರೂರು ಸುತ್ತಿದ್ದಾರೆ. ನಮ್ಮಲ್ಲಿ ಪ್ರಶಸ್ತಿಗಾಗಿ ಬರೆಯುವ ಸಾಹಿತಿಗಳ ವರ್ಗವೇ ಬೇರೆ. ಮನಸ್ಸಿನ ತೃಪ್ತಿಗಾಗಿ ಬರೆಯುವ ವರ್ಗವೇ ಬೇರೆ. ಅಂಥವರ ಈ ತೃಪ್ತಿ ನಿರಂತರ. ಸವಿತಾ ಪ್ರಭಾಕರ ಅವರು ಗೃಹಿಣಿಯಾಗಿದ್ದೂ ಬರೆಯುತ್ತ ಇಂಥ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡದ್ದು ಅಭಿನಂದನೀಯ. ಮತ್ತು ಅನುಕರಣೀಯ. ಕಾರಣ ಸವಿತಾ ಅವರು ಹೇಳಿ ಕೇಳಿ ಗೃಹಿಣಿ. ಅವರಿಗೆ ಅವರದ್ದೇ ಆದ ಜವಾಬ್ದಾರಿಗಳು, ಇತಿಮಿತಿಗಳು ಇವೆ. ಈ ಮಿತಿಗಳನ್ನು ದಾಟದೆ ಅವರು ಮಾಡುವ ಕಾರ್ಯ ಇತರ ಗೃಹಿಣಿಯರಿಗೆ ಮಾದರಿಯಾಗಿವೆ. ಎದುರು ಬರುವ ಸಮಸ್ಯೆಗಳು ಇವರ ಸಾಂಸ್ಕೃತಿಕ ಉತ್ಸಾಹದ ಮುಂದೆ ನಿಲ್ಲಲೂ ಶಕ್ತಿ ಸಾಲದೆ ಹಾರಿ ದೂರ ಹೋಗಿವೆ. ಅವರು ಪ್ರತಿ ವರ್ಷ ನಡೆಸುವ ಮಕ್ಕಳ ಶಿಬಿರಗಳು ಮೈಸೂರಿಗರ ಮನಗೆದ್ದಿವೆ ಎಂಬುದೇ ದೊಡ್ಡ ಪ್ರಶಸ್ತಿ ಇವರಿಗೆ.
– ಆಕೃತಿ ಮ್ಯಾಗಝಿನ್ ನ್ಯೂಜ್
***
ಈಚಿನ ದಿನಗಳಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ಜನಪ್ರಿಯವಾಗುತ್ತಿವೆ. ಮೈಸೂರಿನ ರಂಗಮಂದಿರದ ಆವರಣದಲ್ಲಿ ನಡೆಯುವ ಚಿಣ್ಣರ ಮೇಳಕ್ಕೆ ಹೆಸರು ನೋಂದಾಯಿಸಲು ಜನರು ನಸುಕಿನಲ್ಲಿ ಸಾಲಾಗಿ ನಿಂತಿದ್ದೇ ಇದಕ್ಕೆ ಸಾಕ್ಷಿ. ಬೇರೆ ಬೇರೆ ಶಿಬಿರಗಳಲ್ಲಿ ವೈವಿಧ್ಯತೆ ಇರುವುದು ಸಹಜವೆ. ಆದರೆ ಬಹುತೇಕ ಶಿಬಿರ ನಡೆಸುವವರು ವಾಣಿಜ್ಯೋದ್ದೇಶದಿಂದ ಎನ್ನುವುದು ಸುಳ್ಳಲ್ಲ. ಅಂಥಹ ಶಿಬಿರಗಳು ಉತ್ತಮ ನಿರ್ವಹಣೆ, ಆಕರ್ಷಕ ಕಾರ್ಯಕ್ರಮಗಳಿಂದ ಕೂಡಿರುತ್ತವೆ. ಆದರೆ ಅಲ್ಲಿ ವಾತ್ಸಲ್ಯಮಯ ವಾತಾರಣವಿರುವುದು ವಿರಳ. ಮೈಸೂರಿನ ಬೋಗಾದಿ ರಸ್ತೆಯಲ್ಲಿರುವಜಯವರ್ಧನ ಬಾಲ ಸಂಸ್ಕಾರ ಕೇಂದ್ರದಲ್ಲಿ ನಡೆಯುವ ಶಿಬಿರವು ವೈಶಿಷ್ಠ್ಯಪೂರ್ಣವಾಗಿದೆ.
ಅಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳು, ವಯಕ್ತಿಕ ಕಾಳಜಿ, ವಿದಾಯ ದಿನದ ಸಹಭೋಜನವು ಮಕ್ಕಳು ಪರಸ್ಪರ ಅರಿಯಲು, ನಲಿಯಲು ಮತ್ತು ಕಲಿಯುವದಷ್ಟೇ ಅಲ್ಲದೆ ಈ ಅನುಭವವನ್ನು ಬಹಳ ಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತವೆ.
ಸುಮಾರು ಇಪ್ಪತೈದು ವರ್ಷಗಳಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಕ್ಕಳ ಮನರಂಜನೆ, ವಿಕಸನಕ್ಕಾಗಿ ಜಯವರ್ಧನ ಬಾಲ ಸಂಸ್ಕಾರ ಕೇಂದ್ರವು ಕೆಲಸ ಮಾಡಿಕೊಂಡು ಬರುತ್ತಿದೆ. ಅಂಬಿಕಾನಗರ, ರಾಯಚೂರು, ಕುಶಾಲನಗರ, ಹೀಗೆ ಹಲವು ಸ್ಥಳಗಳಲ್ಲಿ ತನ್ನ ಚಟುವಟಿಕೆ ನಡೆಸಿಕೊಂಡು ಬಂದಿರುವ ಈ ಕೇಂದ್ರವು ಮೊದಲು ‘ಬಾಲ ಸಂಸ್ಕಾರ ಕೇಂದ್ರ’ ಎಂದಿದ್ದು ಮೈಸೂರಿಗೆ ಬಂದ ನಂತರ ‘ಜಯವರ್ಧನ ಬಾಲ ಸಂಸ್ಕಾರ ಕೇಂದ್ರ’ ವಾಯಿತು. ಇಲ್ಲಿ ನಡೆಯುವ ಬೇಸಿಗೆ ಶಿಬಿರವು ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ವಿಭಿನ್ನ ರೀತಿಯಲ್ಲಿ ನಡೆಯುವ ಈ ಶಿಬಿರದಲ್ಲಿ ವ್ಯಾಯಮ, ಸೂರ್ಯ ನಮಸ್ಕಾರ, ದೇಶ ಭಕ್ತಿಗೀತೆ, ಒಳಾಂಗಣ ಮತ್ತು ಹೊರಾಂಗಣ ಆಟಗಳು, ನೀತಿ ಪಾಠಗಳು, ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ಅರಿವು, ಸಂಸ್ಕೃತ ಭಾಷಾ ಪರಿಚಯ… ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಿಬಿರದಲ್ಲಿ ಪುಟ್ಟ ಗ್ರಂಥಾಲಯವೂ ಇರುತ್ತದೆ. ಜಾನಪದ ಆಟಗಳ ಬಗ್ಗೆ ಮಾಹಿತಿ, ಜಾನಪದ ಅಡುಗೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈಶಿಬಿರದಲ್ಲಿ ಹಲವು ಕ್ಷೇತ್ರದ ಪರಿಣಿತರು ಬಂದು ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚುತ್ತಾರೆ. ವ್ಯಕ್ತಿತ್ವ ವಿಕಸನದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
– ಎಂ.ಎಸ್.ನಾಗೇಂದ್ರ
#ಆಕತನಯಸ