ಕಳೆದುಹೋದ ದಿನಗಳಿಗೆ ಮರುಗದೆ ಇಂದಿನ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಸಂತಸದಿಂದ ಬದುಕಿ ಬಾಳಿ ಎನ್ನುವ ಸಾರವನ್ನು ಹೊತ್ತು ತಂದ ಪದ್ಮನಾಭ. ಡಿ ಅವರ ಒಂದು ಸುಂದರ ಕವನ ತಪ್ಪದೆ ಓದಿ…
ಕಳೆದುಹೋದ ವರ್ಷವು
ಕಲಿಸಿತೊಂದು ಪಾಠವ
ಮಿತಿಯಲಿರಲು ಎಲ್ಲ ಚಂದ
ಎಂಬುದೊಂದು ಸತ್ಯವ//
ಮಿತಿಮೀರಿದ ಸಲಿಗೆಯಿಂದ
ಹಿತವಹುದೇ ಮನಸಿಗೆ
ಅತಿಯಾದ ಅವಲಂಬನೆಯೂ
ಮುಳ್ಳು ಯಶದ ಹಾದಿಗೆ//
ನಾವು ಮೆಚ್ಚಿದಂತ ಮಂದಿ
ನಮ್ಮ ಮೆಚ್ಚದಿರಬಹುದು
ಅತಿಯಾದ ನಿರೀಕ್ಷೆಯಿಂದ
ನಿರಾಸೆ ಖಚಿತವಹುದು//
ನೀರು ಸಿಗುವ ಜಾಗದಲ್ಲೇ
ಕೂಪ ಖನನ ಸೂಕ್ತವು
ಮಾನ್ಯತೆಯು ದೊರೆವಲ್ಲೇ
ಜೀವಿಸುವುದೇ ಕ್ಷೇಮವು//
ಕಳೆದುಹೋದ ದಿನಗಳನ್ನೇ
ನೆನೆದು ವ್ಯರ್ಥ ಕೊರಗಲೇಕೆ
ಮುಂಬರುವ ದಿನಗಳಲ್ಲಿ
ಸಂತಸವ ಅರಸಬಾರದೇಕೆ//
- ಪದ್ಮನಾಭ. ಡಿ – ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ – 2022 ಕವಿಗಳು, ಲೇಖಕರು, ಮೈಸೂರು.