ಉಲಿದ ಮಾತುಗಳೆಲ್ಲ ಬರಿ ನೆನಪುಗಳಾದವೇ….ಹಲವಾರು ಭರವಸೆಗಳು ಹುಸಿಯಾದವೇ…ಅನಂತ ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಾಡಿಸುತ್ತಿದೆ ಮನದಿ ಕುಡಿನೋಟ ನಸುನಗುವು
ಬೇಡುತಿದೆ ನಿನ್ನಿರುವು ಪ್ರತಿ ನಿಮಿಷವೂ|
ಬೀಡಾದ ತನುವೆಲ್ಲ ಕಂಪಿಸುತ್ತಿದೆ ಗೆಳೆಯಾ
ಬಾಡುತಿಹೆ ವಿರಹದಲಿ ಬಳಿ ಬಾರೆಯಾ ||
ಉಲಿದ ಮಾತುಗಳೆಲ್ಲ ಬರಿ ನೆನಪುಗಳಾದವೇ
ಹಲವಾರು ಭರವಸೆಗಳು ಹುಸಿಯಾದವೇ|
ಚೆಲುವ ನಿನ್ನಯ ಭಾವ ನಾನೆಂದೂ ಅರಿಯೆನು
ಒಲವ ಧಾರೆಯ ಹರಿಸು ಬಳಿ ಬಂದು ಇನ್ನು ||
ಸನ್ನೆ ಮಾಡುತ ಎನಗೆ ಅಂದು ಕರೆದವ ಬಳಿಗೆ
ಭಿನ್ನ ಮೊಗ ಮಾಡೀಗ ನಿಲುವುದೇಕೆ?|
ಕನ್ನ ಹಾಕಿದ ಹೃದಯ ಮಿಡಿಯುತಿದೆ ನಿರುತವು
ಬನ್ನಗೊಳಿಪುದು ಹಿತವೆ? ನಿನಗೇಕೆ ಸೆಡವು ||
ದೂರು ಕೊಡಲೇ? ಜಗದೊಡೆಯ ನೀನಹುದು
ದೂರಾಗಿ ಬಿಡುವೆಯೆಂಬ ಭಯವಿರುವುದು|
ತೋರಿಕೆಯ ಪ್ರೀತಿಯದು ನಿನದಲ್ಲ ಬಲ್ಲೆನು
ಮಾರಜನಕನೆ ಎನ್ನ ಕರಪಿಡೆಯೆ ಕಾದಿಹೆನು ||
ಅಂತರಾಳದಿ ನಿಂತ ತುಂಟ ಗೋಪರ ಗುರುವೆ
ಸಂತತವು ಕಾರುಣ್ಯವನು ಬೇಡುತ್ತಲಿರುವೆ|
ಸಂತಳಲ್ಲವು ಪ್ರಭುವೆ ಭಕ್ತಿ ಮಾಡರಿಯೆನು
ಅನಂತಶಯನನೆ ನೀನು ಎಲ್ಲ ಬಲ್ಲಿದನು ||
- ಅನಂತ ನಾಯ್ಕ
