ಹಕ್ಕಿ ಗಗನದೆಡೆಗೆ ಹಾರುವಾಗಲೆಲ್ಲ ನೆಲದ ಮೇಲೆ ಹಸಿರ ಬೀಜ ಚೆಲ್ಲಿತು, ನೆಲದಿ ಸೃಷ್ಟಿ ಸೊಬಗು ಹರಡಿತು… ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹೊನ್ನ ಬಣ್ಣ ಭೂಮಿಗಿಳಿದು
ಹಸಿರನೆಲ್ಲ ತುಂಬಿತು
ಬಾನು ಬಯಲು ಬೆಳಕು ಹರಡಿ
ಸಗ್ಗವಾಗಿ ನಿಂತಿತು
ಹಕ್ಕಿ ಬಳಗ ಗೂಡಿನಿಂದ
ಗಗನದೆಡೆಗೆ ಹೊರಟಿತು
ಹಾರುವಾಗಲೆಲ್ಲ ನೆಲದ ಮೇಲೆ
ಹಸಿರ ಬೀಜ ಚೆಲ್ಲಿತು
ನೀಲಿ ಕಡಲ ರಾಶಿಯಲ್ಲಿ
ಬೆಳ್ಳಿ ಮೀನು ಓಡಿತು
ಅಲೆಯ ಮೇಲೆ ತೇಲಿದಂತೆ
ಪಾತಿ ದೋಣಿ ಸಾಗಿತು
ಬಳ್ಳಿಯೊಲವು ಹೂವಾಗಿ
ಬೆಟ್ಟ ಬಯಲು ತುಂಬಿತು
ಮಣ್ಣ ನೆಲವು ಜೀವವಾಗಿ
ಜೀವಜಾಲ ಸಲಹಿತು,
ಕಣ್ಣ ಮುಂದೆಯೇ ಒಲವ ಧಾರೆ
ಧಾರೆಯಾಗಿ ಹರಿಯಿತು
ಚೆಂದ ಬದುಕು ಕಂಡ ನೆಲದಿ
ಸೃಷ್ಟಿ ಸೊಬಗು ಹರಡಿತು
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
