ಯಾರೋ ಹೇಳಿದ್ರು, ಯೋಗ್ಯತೆ ಇರೋರಿಗೆ ಮಾತ್ರ ಕಣ್ಣೀರು ಹಾಕಿ. ಯೋಗ್ಯತೆ ಇಲ್ದೆ ಇರೋರಿಗೆ ಕಣ್ಣೀರಿಗೆ ದಂಡ ಕಟ್ಟಬೇಡಿ ಅಂತ. ಆ ದಿನದಿಂದ ನನ್ನ ಆಲೋಚನೆಯ ಲಹರಿಯಲ್ಲಿ ಗುಲ್ಲೆಬ್ಬಿಸಿ ಹಿಂಸಿಸುತ್ತಿದ್ದ. ಒಂದಷ್ಟು ಅರ್ಥವಿಲ್ಲದ ಪ್ರಶ್ನೆಗಳು ಮುಗಿಲೆದ್ದು,ಮಾತನಾಡಲು ಶುರು ಮಾಡಿದವು. ಮುಂದೆ ಓದಿ…
ಮೊನ್ನೆ ದೂರದ ಸಂಬಂಧಿ ಸಾವಾಗಿತ್ತು, ಸಾವು ಅಂದ್ರೆ ಅಶ್ರು ತರ್ಪಣ ಸಲ್ಲಿಸಲಿಲ್ಲವೆಂದ್ರು ಮುಖ ನೋಡಿ ಬರೋದು ನನ್ನ ಹವ್ಯಾಸ. ಎಂದಿನಂತೆ ಆ ಸಾವಿಗೆ ನಾನು ಹೋಗಿದ್ದೆ, 50 ಕೂಡ ದಾಟದ ಮನುಷ್ಯ ಅವ್ರು, ನನ್ನ ವಯಸ್ಸಿನ ಒಬ್ಬ ಮಗ, ಅವನಿಗಿಂತ ಎರಡು ವರ್ಷ ಚಿಕ್ಕವ ಇನ್ನೊಬ್ಬ, ಅಲ್ಲೊಂದು ರೌರವ ಕೂಗು, ಆಕಂದ್ರನ ಮುಗಿಲ ಮುಟ್ಟುತ್ತಲಿತ್ತು, ಹೃದಯ ವಿದ್ರಾವಕ ಸನ್ನಿವೇಶವದು, ನನಗೂ ದುಃಖವಾಯ್ತು, ಸಂಕಟವಾಯ್ತು ಕಣ್ಣಿನಿಂದ ಒಂದನಿ ಕಣ್ಣೀರು ಕೂಡ ಜಾರಲಿಲ್ಲ, ಹಾಗಂತ ನಾನೇನು ಒರಟಲ್ಲ, ಕಲ್ಲಂತೂ ಮೊದಲೇ ಅಲ್ಲ, ಯಾಕ್ ಹೀಗೆ ಹೇಳಿದೆ ಅಂತ ಇನ್ನೊಂದು ಸನ್ನಿವೇಶ ಹೇಳ್ತೀನಿ.
ಒಂದು ವಾರದ ಹಿಂದೆ ನನಗೂ ನನ್ನ ಸ್ನೇಹಿತೆಗೂ ಸ್ವಲ್ಪ ಕಿರಿ ಕಿರಿ ಆಯ್ತು. ಸಾಮಾನ್ಯವಾಗಿ ನಾ ಯಾರೇ ಮೇಲು ಕೋಪ ಮಾಡಿಕೊಳ್ಳುವುದಿಲ್ಲ. ಜಗಳ ಅಂತೂ ಮೊದಲೇ ಮಾಡಲ್ಲ. ಆದ್ರೆ ಏನೋ ಬದುಕಿಗೆ ತೀರ ನಿಂತವರ ಜೊತೆಗೂ ಕೂಡ ಅಷ್ಟೂ ವೈಮನಸ್ಸು ಜರುಗುವುದಿಲ್ಲ. ಇವಳೊಂತರ ನನ್ನ ಬದುಕಿಗೆ ವಿಶೇಷ. ಯಾರ್ ಮುಂದೇನು ತಲೆಬಾಗಿಲ್ಲ ಅಂದ್ರು, ಕುಗ್ಗಿಲ್ಲ ಅಂದ್ರು ಇವಳ ಒಂದು ಮಾತು ಸಾಕು ಕುಗ್ಗೋಕು- ಹಿಗ್ಗೋಕು. ವಿಶೇಷವಿಲ್ಲದಿದ್ದರು ಸಂಭ್ರಮಿಸೋಕೆ. ಲಕ್ಷ್ಮಣ ರೇಖೆ ಅಂತಾರಲ್ಲ ಹಾಂಗೆ ಅವಳ ಹೇಳಿದ್ದು ದಾಟಲ್ಲ. ಹೀಗಿರುವಾಗ ಮಾತಿಗೆ ಮಾತು ಬೆಳೆದು ಕೋಪ ನೆತ್ತಿಗೆ ಏರಿತ್ತು. ಹತಾಶೆ ಅನ್ನೋದು ಸದ್ದಿಲ್ಲದೆ ಸೆಡ್ಡು ಹೊಡೆದು ಸದ್ದು ಮಾಡ್ತಾ ಇತ್ತು.

ಫೋಟೋ ಕೃಪೆ : The times
ಹೇಳಿದ್ದು ಒಂದೇ ಮಾತು… ನನ್ನ ಜೀವನದಲ್ಲಿ ಯಾವತ್ತಿಗೂ ಕಣ್ಮುಂದೆ ಬರಬೇಡ. ಇನ್ನು ಕಣ್ಣಿಗೆ ಕಾಣಿಸ್ಕೊಬೇಡ ಅಂತ ಅಷ್ಟೇ ಹೇಳಿದ್ದು. ಅದೆಲ್ಲಿತ್ತೋ ಕಣ್ಣೀರು, ಅಶ್ರುಧಾರೆ ಮೇಲಾ..? ಅಶ್ರುಗ್ರಂಥಿಗಳ ಜಗ್ಗಾಟ ಮೇಲಾ..? ಅನ್ನೋತರ ಆ ದಿನದ ಮೂಡ್, ಕೆಲ್ಸ ಎಲ್ಲ ವಜಾ, ಅದೊಂದೇ ಯೋಚನೆ, ಅದರ ಜೊತೆಗೆ ಅವರು ಕೂಡ ಅತ್ತಿದ್ರು ಅನ್ನೋದಕ್ಕಿಂತ ಒಂದೇ ಮಾತಲ್ಲಿ ಅಳಿಸಿದ್ದೆ.
ಈ ಎರಡು ಸನ್ನಿವೇಶದಿಂದ ನಾ ತಿಳಿದಿದ್ದು ಒಂದೇ ಕಣ್ಣೀರು ಬಿತ್ತನೆ ಇಲ್ಲ,ಶ್ರಮವಿಲ್ಲ. ಯಾರ್ ಯಾರಿಗೋಯಾರಿಗೋ ಕಣ್ಣೀರು ಬರುವುದಿಲ್ಲ. ನೀವು ಕಣ್ಣೀರ್ ಹಾಕ್ತಾ ಇದ್ದೀರಾ ಅಂದ್ರೆ, ಯಾರಿಗೋಸ್ಕರ ಮಿಡಿಯುತ್ತ ಇದ್ದಿರೋ ಅವ್ರು ಕೂಡ ಅಷ್ಟೇ ಒದ್ದಾಡ್ತಾ ಇರ್ತಾರೆ. ನಿಮ್ಮದು ನಿಜ ಪ್ರೀತಿ ಆಗಿದ್ರೆ ಮಾತ್ರ.
ಬದುಕಿಗೆ ಎಲ್ಲರನ್ನು ಕರೆತಂದು ಮೋಸ ಮಾಡಿದ್ರು, ನೋವು ಕೊಟ್ರು ಎಂದು ಸಂಕಟ ಪಡುವ ಮುನ್ನ ಒಬ್ಬರನ್ನ ಜೀವ ಎಂದು ಕೊಳ್ಳುವ ಮುನ್ನ, ಅವ್ರೇ ಜೀವನ ಎಂದು ಬದುಕುವ ಮುನ್ನ, ನಿಧಾನ ಆದ್ರೂ ಪರವಾಗಿಲ್ಲ. ಉತ್ತಮ ವ್ಯಕ್ತಿಗಳನ್ನೇ ಬದುಕಿನ ಅಂಗಳಕ್ಕೆ ಕರೆದು ತನ್ನಿ. ಜೀವ ಹೋಗೋವಷ್ಟು ಕಣ್ಣೀರ ಸುರಿಸಿ ಆ ಅಲೆಯಲ್ಲಿ ಈಜುವ ಮುನ್ನ ಪ್ರೀತಿಸಿದವರ ಪ್ರೀತಿಯ ಆಳವ ಅರಿತುಕೊಳ್ಳಿ, ಸುಖಾಸುಮ್ಮನೆ ಸಂಕಟ ಪಡಬೇಡಿ, ಯಾರನ್ನೋ ದೂಷಿಸುವ ಮುನ್ನ ಧೋರಣೆಗಳ ವ್ಯಕ್ತ ಪಡಿಸಿದ್ದು ನೀವೇ ಎಂಬುದ ಮರೆಯದಿರಿ..
ಯಾರದೋ ಹೆಸರಲ್ಲಿ ನೀವು ಸಂಕಟ ಪಡುವ ಮುನ್ನ, ಆ ವ್ಯಕ್ತಿಯ ಬದುಕನ್ನ ಹೀಯಾಳಿಸುವ ಮುನ್ನ ಆ ವ್ಯಕ್ತಿಯ ಜೊತೆಗಿನ ಪಯಣದಲ್ಲಿ ಹೆಜ್ಜೆ ಇರಿಸಿದಾಗ ನಿಮ್ಮ ಜೀವನ ಹಸಿರ ಸಿರಿಯಂತೆ ಕಂಗೊಳಿಸುತ್ತಿತ್ತು ಎನ್ನುವುದ ಮರೆಯದಿರಿ ಯಾಕಂದ್ರೆ ಕಣ್ಣೀರು ಅನ್ನೋದು ಅತ್ಯಮೂಲ್ಯ ಸರಕು ನನ್ನ ಪ್ರಕಾರ ಅಷ್ಟು ಸುಲಭದಿ ಎಂದು ಅರ್ಹತೆ ಇಲ್ಲದವರಿಗೆ ಜಾರುವುದಿಲ್ಲ.
- ಎಂ ಅಮೃತ ( ಸ್ನಾತಕೋತ್ತರ ವಿದ್ಯಾರ್ಥಿನಿ ಮತ್ತು ಕವಿಯತ್ರಿ)

ಮನಸ್ಸಿನ ಮಾತು ಇದು ಅರ್ಥ ಪೂರ್ಣ ಲೇಖನ .ಶುಭವಾಗಲಿ ಅಮೃತಾ