ಪ್ರಕೃತಿಯಲಿ ಸೊಬಗು, ವಿಕೃತಿ ಕುರೂಪದಲಿ ಸಂಸ್ಕೃತಿ… ವಿಕೃತಿ ಭಾವ ನೆಲೆಸಿದಂತೆ!! …ಕವಿಯತ್ರಿ ಶಾರದಾ ಶ್ರಾವಣಸಿಂಗ್ ರಜಪೂತ ಅವರ ಲೇಖನಿಯಲ್ಲಿ ಅರಳಿದ ಸುಂದರ ಕ್ಷಣಗಳನ್ನು ತಪ್ಪದೆ ಮುಂದೆ ಓದಿ…
ಮರದ ಕೊಡರಿನಲಿ, ಶಿಲೆಯ ಉದರದಲಿ
ಮೂರ್ತ ಪ್ರತಿಮೆ ಆಳದಿ ಅಡಗಿರುವಂತೆ!!
ಹರಿವ ನದಿಯಲಿ, ಬೀಸುವ ತಂಗಾಳಿಯಂತೆ
ಜಲಲ… ತನನ… ಸಂಗೀತ ಉಲಿಯುವಂತೆ!!
ಪ್ರಕೃತಿಯಲಿ ಸೊಬಗು, ವಿಕೃತಿ ಕುರೂಪದಲಿ
ಸಂಸ್ಕೃತಿ… ವಿಕೃತಿ ಭಾವ ನೆಲೆಸಿದಂತೆ!!
ತಂಪು ನೆರಳ ಛಾಯೆಯಲಿ, ಸುಡುಬಿಸಿಲ ಧಗೆಯಲಿ
ಮನದ ಹಿತ… ಅಹಿತ ಜತೆಯಾಗಿ ಮೇಳೈಸಿದಂತೆ!!
ಭೂರಮೆಯ ಕ್ಷಿತಿಜದಲಿ,ಆಗಸದ ಪರಿಧಿಯಲಿ
ಭುವಿ-ಬಾನಿನ ಪ್ರೇಮ ಸಾಂಗತ್ಯ ಸಲ್ಲಾಪದಂತೆ!!
ತಾಯಿ ಕರುಳ ಬಳ್ಳಿಗಂಟು, ಸಂಗಾತಿ ಕಣ್ಣಿನ ನಂಟು
ಜೀವನದಿ ಅಗತ್ಯತೆ ಆಗಿರುವ ಬಾಂಧವ್ಯದಂತೆ!!
ಜನನ-ಮರಣದ ನಡುವೆ ಮೂರು ದಿನದ ಬಾಳಲಿ
ಬದುಕಬೇಕು ಜಗದ ಉಸಿರಾಗಿ ನೆನೆಸುವಂತೆ!!
ಕವಿದ ಮೋಡದಲ್ಲಿ ಕರಗಿದ ಮೌನದಲಿ
ಹನಿಹನಿಯಾದ ನೀರಿನಂತಿರು ಜಗವು ಸುಖಿಸುವಂತೆ!!
- ಶಾರದಾ ಶ್ರಾವಣಸಿಂಗ್ ರಜಪೂತ – ಕೊಪ್ಪಳ.
