ಪತ್ತೇದಾರಿ ಕಾದಂಬರಿಗಾರರಾದ ಶ್ರೀ ನಾಗೇಶ್ ಕುಮಾರ್ ಅವರ ಕೊನೆ ಹೇಗೋ ಅರಿಯಲಾರೆ! ಕೃತಿಯ ಕುರಿತು ಲೇಖಕಿ ಹೆಚ್. ವಿ. ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕೊನೆ ಹೇಗೋ ಅರಿಯಲಾರೆ!
ಲೇಖಕರು : ಶ್ರೀ ನಾಗೇಶ್ ಕುಮಾರ್ ಸಿ. ಎಸ್
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ : ₹265/-
ಮೊಬೈಲ್ : 9840564240
9945939436
ಅಂದು ಕೋರ್ಟ್ ನಲ್ಲಿ ‘ಸರಳಾ ಪಟೇಲ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಹರನ್ ಹಾಗೂ ಪ್ರತಿ ವಾದಿ ಲಾಯರ್ ಪ್ರಬಲ್ ಮಾನ್ವೀಕರ್ ತಮ್ಮತಮ್ಮ ವಾದ ಆರಂಭಿಸಿದರು. ಈಗಾಗಲೇ ಪೊಲೀಸರು ಬಂಧಿಸಿರುವ ಶ್ರೀಮತಿ ಸರಳಾ ಪಟೇಲ್ ರವರನ್ನು ನ್ಯಾಯಾoಗ ಬಂಧನದಲ್ಲಿ ಇಡಬೇಕು ಎಂಬ ವಾದ ನಡೆಯುತ್ತಿತ್ತು.
ಆಕರ್ಷಕ ಮುಖಪುಟ ಹೊಂದಿದ ‘ಕೊನೆ ಹೇಗೋ ಅರಿಯಲಾರೆ!’ ಪತ್ತೇದಾರಿ ಕಾದಂಬರಿಯನ್ನು ಓದಲು ಕುಳಿತಾಗ ನನಗೆ ಈ ಪುಸ್ತಕವನ್ನು ಓದುತ್ತಾ ಓದುತ್ತಾ ಸಮಯ ಕೊನೆ ಕೊಂಡಿದ್ದೇ ಗೊತ್ತಾಗಲಿಲ್ಲ. ಕಥೆಯ ಕೋರ್ಟ್ ರೂಮ್ ಕೇಸ್ ನನ್ನನ್ನು ಆಕರ್ಷಿಸಿತು.

ಈಗಾಗಲೇ ಅನೇಕ ಪತ್ತೇದಾರಿ ಕಾದಂಬರಿಗಳನ್ನು ಹೊರ ತಂದಿರುವ ಶ್ರೀ ನಾಗೇಶ್ ಕುಮಾರ್ ರವರು ಈ ಕಥೆಯಲ್ಲಿ ಪತ್ತೇದಾರರ ಕಾರ್ಯಾಚರಣೆ, ನ್ಯಾಯಾಲಯದಲ್ಲಿ ಸಂಭವಿಸುವ ವಾದ ವಿವಾದಗಳು ಹಾಗೂ ನಮ್ಮ ದೇಶದ ಕಾನೂನು ಚೌಕಟ್ಟಿನ ಆಧಾರದ ಮೇಲೆ ನೀಡುವ ತೀರ್ಪು ಇವೆಲ್ಲದ ಬಗ್ಗೆ ಕುತೂಹಲ ದೃಶ್ಯಗಳನ್ನು ಬಿಡಿಸಿದ್ದಾರೆ. ಒಂದು ಪತ್ತೇದಾರಿ ಕಾದಂಬರಿಯು ಓದುಗರಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಆ ಕಥೆಯಲ್ಲಿನ ರೋಚಕ ಹಾಗೂ ಕುತೂಹಲ ತುಂಬುವ ಘಟನೆಗಳು, ಪತ್ತೇದಾರನ ಬುದ್ದಿವಂತಿಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ದೇವರಾಜ್ ತನೇಜಾ ಎಂಬ ಪ್ರತಿಷ್ಠಿತ ಬಿಲ್ಡರ್ ನ ನೂತನ ಬಹು ಅಂತಸ್ತಿನ ಕಾಂಪ್ಲೆಕ್ಸ್ ನ ನಿರ್ಮಾಣ ಹಂತದಲ್ಲಿ ಎದುರಾದ ಸಮಸ್ಯೆಯಿಂದಾಗಿ ಕುಪಿತ ಗೊಂಡಿದ್ದ ಸರಳಾ ಪಟೇಲ್ ಎಂಬಾಕೆ ದೇವರಾಜ್ ತನೇಜಾರವರ ಕಛೇರಿಯ ಮುಂದೆ ಧರಣಿ ಹೂಡಿ ಹೋರಾಟಕ್ಕೆ ನಿಲ್ಲುತ್ತಾಳೆ. ಕೋಟ್ಯಧಿಪತಿಗಳ ಸ್ವಾರ್ಥಕ್ಕೆ ಸರಳಾ ಪಟೇಲ್ ತನ್ನ ಜಾಗವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾಗ ಅವಳು ಒಂದು ಕೊಲೆಯ ಆಪಾದನೆಯಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾಳೆ. ಕೊಲೆಯ ಸುತ್ತ ಹೆಣೆದ ಈ ಕಥೆಯಲ್ಲಿ ಸರಳಾ ಪಟೇಲ್ ಪರ ವಕೀಲರಾದ ಪ್ರಬಲ್ ಮಾನ್ವೀಕರ್ ರವರ ಜಾಣತನ ಹಾಗೂ ಸರಳಾ ಪಾಟೇಲ್ ರವರ ಕೊಲೆ ಕೇಸ್ ನ ತನಿಖೆಗೆಂದು ಪ್ರಬಲ್ ರವರ ಸಹಾಯಕ್ಕೆ ನಿಂತ ಪ್ರೈವೇಟ್ ಪತ್ತೇದಾರರಾದ ವಿಕ್ರಮ್ ಕಾರಂತ್ ಹಾಗೂ ವಿಜಯ್ ರವರ ತನಿಖಾ ವೈಖರಿ ಹಾಗೂ ಕೋರ್ಟ್ ರೂಮ್ ನಲ್ಲಿ ಜರುಗುವ ವಾದ ಪ್ರತಿವಾದಗಳು ಹಾಗೂ ವಿಟ್ನೆಸ್ ಗಳು ಓದುಗರಿಗೆ ಕೌತುಕವನ್ನು ತುಂಬುವಲ್ಲಿ ಯಶಸ್ವಿಗೊಂಡಿದೆ.

ನನಗೆ ನ್ಯಾಯಾಲಯದಲ್ಲಿ ಜರುಗುವ ಯಾವುದೇ ಕೇಸಿನ ವಾದ ಪ್ರತಿವಾದಗಳನ್ನು ಸಿನಿಮಾ, ದೂರದರ್ಶನ ಹಾಗೂ ಕಥೆ ಪುಸ್ತಕಗಳನ್ನು ಓದಿ ಒಂದು ಅಪರಾಧಗಳಿಗೆ ಸಂಬಂಧಪಟ್ಟ ಕಾನೂನಿನ ನೀತಿ ನಿಯಮಗಳನ್ನು, ಅಪರಾಧ ಹಾಗೂ ಶಿಕ್ಷೆಗಳ ಬಗ್ಗೆ ತಿಳಿದುಕೊಳ್ಳಲು ಬಹಳ ಆಸಕ್ತಿ ಉಂಟು. ‘ಕೊನೆ ಹೇಗೋ ಅರಿಯಲಾರೆ!’ ಪದ್ದೇದಾರಿ ಕಾದಂಬರಿಯ ಮೂಲವಸ್ತು ಹಾಗೂ ಸಾಹಿತ್ಯ ಶೈಲಿ ಆಂಗ್ಲ ಭಾಷೆಯ ಪತ್ತೇದಾರಿ ಕಾದಂಬರಿಗಳ ಪ್ರಭಾವ ಹೊಂದಿದೆ ಹಾಗೂ ವಾದ ವಿವಾದ, ಸಸ್ಪೆನ್ಸ್ ಎಲ್ಲವೂ ನನಗೆ ಇಷ್ಟವಾಯಿತು.
ಓರ್ವ ಪತ್ತೇದಾರ ಅಥವಾ ವಕೀಲನಾದವನು ಯಾವ ರೀತಿಯಲ್ಲಿ ಏನೆಲ್ಲಾ ವಿಷಯಗಳ ಬಗ್ಗೆ ಗಮನವಹಿಸಿ ತನ್ನ ತನಿಖೆಯಲ್ಲಿ ಗೆಲುವನ್ನು ಕಾಣಬಹುದು ಎಂದೂ ಸತ್ಯದಲ್ಲೂ ಸುಳ್ಳಿನ ಎಳೆಯನ್ನು ಪತ್ತೆ ಹಚ್ಚಲು ಎಚ್ಚರ ವಹಿಸಬೇಕಾಗುತ್ತದೆ.
ಬಿಲ್ಡರ್ ಗಳಿಂದ ಭೂಕಬಳಿಕೆಯ ದಬ್ಬಾಳಿಕೆಯಿಂದಾಗಿ ತನ್ನ ವಾಸ ಸ್ಥಳವನ್ನು ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಗೊಂಡಾಗ ಪ್ರಖ್ಯಾತ ಬಿಲ್ಡರ್ ವಿರುದ್ಧ ಒಂಟಿಯಾಗಿ ಹೋರಾಟಕ್ಕೆ ನಿಂತಿದ್ದ ಸರಳಾ ಪಾಟೇಲ್ ಗೆ ನ್ಯಾಯ ದೊರಕಿತೇ! ಎಂಬುದನ್ನು ತಿಳಿಯಲು
‘ಕೊನೆ ಹೇಗೋ ಅರಿಯಲಾರೆ!’ ಪತ್ತೇದಾರಿ ಕಾದಂಬರಿಯನ್ನು ಕೊಂಡು ಓದಿ.
ಖ್ಯಾತ ಪತ್ತೇದಾರಿ ಕಾದಂಬರಿಗಾರರಾದ ಶ್ರೀ ನಾಗೇಶ್ ಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
- ಹೆಚ್. ವಿ. ಮೀನಾ – ಬೆಂಗಳೂರು.
