ಮನ ಮುಟ್ಟುವ 'ಮನದ ಮಲ್ಲಿಗೆ'

– ಉಮೇಶ್ ಕುಮಾರ್ ಶಿಮ್ಲಡ್ಕ (ಮುನ್ನುಡಿ ಬರಹಗಾರ,ಹಿರಿಯ ಪತ್ರಕರ್ತ)

uksjournalist@gmail.com

ಕಥೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ… ಕಥೆ ಓದಲು ಇಷ್ಟಪಡದವೂ ಕಥೆ ಕೇಳಲು ಇಷ್ಟಪಡುತ್ತಾರೆ. ಬಹುಶಃ ಅದೇ ಕಾರಣಕ್ಕೆ ನಾವು-ನೀವೆಲ್ಲ ಮಾತುಗಳ ಮೂಲಕ ನಿತ್ಯವೂ ಒಂದಿಲ್ಲೊಂದು ಹೊತ್ತು ಯಾರ ಜತೆಗೋ ಮಾತಿಗೆ ನಿಂತಾಗ “ಮಾತುಗಳ ಮೂಲಕ ಕಥೆ ಕಟ್ಟುತ್ತೇವೆ’’. ಆ ಮಟ್ಟಿಗೆ ನಾವೆಲ್ಲರೂ ಕಥೆಗಾರರೇ.. ನಮ್ಮ ಕಥೆಗಳನ್ನು ಎದುರಿದ್ದವರು ಆಸಕ್ತಿಯಿಂದ ಕೇಳಬೇಕು ಎಂದು ಬಯಸುತ್ತೇವೆ. ಅದೇ ರೀತಿ, ಎದುರಿದ್ದವರು ಕೂಡ ನಮ್ಮಿಂದ ಮನರಂಜಿಸುವಂತಹ ನಿರೂಪಣೆಯಲ್ಲಿ ಕಥೆಯನ್ನು ಬಯಸುತ್ತಿರುತ್ತಾರೆ. ಇದನ್ನೇ ಅಕ್ಷರಲೋಕಕ್ಕೆ ಅನ್ವಯಿಸಿ ನೋಡಬಹುದು.



‘ಜೀವನಚಿತ್ರ’ವನ್ನು ಓದುಗನ ಮನಸ್ಸಿಗೆ ನಾಟುವಂತೆ ಅಕ್ಷರಗಳ ಮೂಲಕ ಕಟ್ಟಿಕೊಡುವುದೇ ‘ಕಥೆ’. ಈ ರೀತಿ ಕಥೆ ಕಟ್ಟುವ ಕೆಲಸ ಎಲ್ಲರಿಂದಲೂ ಸಾಧ್ಯವಾಗದು. ಇದು ಬರವಣಿಗೆಯ ಕೆಲಸವಾದ್ದರಿಂದ ಸ್ವಲ್ಪ ತಾಳ್ಮೆ ಹೆಚ್ಚೇ ಬೇಕಾಗುತ್ತದೆ. ಅಷ್ಟಿದ್ದರೆ ಸಾಲದು, ಕಲ್ಪನಾ ಶಕ್ತಿಯೂ ಚೆನ್ನಾಗಿದ್ದು, ಅದನ್ನು ಬರವಣಿಗೆ ರೂಪಕ್ಕೆ ಇಳಿಸುವ ಸಾಮಥ್ರ್ಯವೂ ಬೇಹದಿನೆಂಟು ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕಥೆಗಾರ್ತಿ ಪ್ರಸನ್ನವಿ.ಚೆಕ್ಕೆಮನೆ. ಇಂತಹ ಒಂದು ಸಾಹಸಕ್ಕೆ ಮುಂದಾಗಿ ಚೊಚ್ಚಲ ಕಥಾಸಂಕಲನ ಹೊರತಂದಿದ್ದಾರೆ.

ಈಗಾಗಲೇ ಕೊಡಗಿನ ಗೌರಮ್ಮ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿರುವ ಪ್ರಸನ್ನ ಕವಯಿತ್ರಿಯೂ ಹೌದು. ಕೇರಳದ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ‘ನನ್ನ ಕೃಷಿ’ ಕವನ ಪಠ್ಯವಾಗಿ ಸೇರ್ಪಡೆಗೊಂಡಿದೆ. ಹೀಗೆ ಸಾಧನೆಗಳ ಪಟ್ಟಿಗೆ ಈಗ ಈ ಚೊಚ್ಚಲ ಕಥಾ ಸಂಕಲನವೂ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರ. ಈ ವರ್ಷ 2018. ಕಥಾ ಸಂಕಲನದಲ್ಲಿರುವ ಕಥೆಗಳ ಸಂಖ್ಯೆ 18 ಎಂಬುದು ವಿಶೇಷ. 18 ಕಥೆಗಳೂ ಕೌಟುಂಬಿಕ ವಾತಾವರಣದ ಚೌಕಟ್ಟು ಹೊಂದಿರುವಂಥವೇ. ಎಲ್ಲ ಕಥೆಗಳ ಕುರಿತು ಟಿಪ್ಪಣಿ ಬರೆಯ ಹೊರಟರೆ ಸರಿಹೋಗದು. ಗಮನಸೆಳೆದ, ಇಷ್ಟವಾದ ಕೆಲವು ವಿಷಯಗಳನ್ನಷ್ಟೇ ಉಲ್ಲೇಖಿಸುವೆ.

ಮೊದಲ ಕಥೆ ‘ಮಲ್ಲಿಗೆ ಹೂವು’ ಆಸ್ಪತ್ರೆಯ ಆವರಣದಿಂದ ಅನಾವರಣಗೊಳ್ಳುತ್ತದೆ. ಅಲ್ಲಿ ಮುಂದೇನಾಗುವುದೋ ಎಂಬ ಸಸ್ಪೆನ್ಸ್ ಕೊನೆವರೆಗೂ ಕಥೆಯೊಳಗೆ ನಮ್ಮನ್ನು ಹಿಡಿದಿಟ್ಟು ಕೊಳ್ಳುತ್ತದೆ.ಕೆಲವೊಂದನ್ನು ಮನಸ್ಸು ಊಹಿಸಿಬಿಡುತ್ತದೆಯಾದರೂ ಟ್ವಿಸ್ಟ್ ಕೂಡ ಇದೆ. ಮನಸ್ಸಿನ ಕಲ್ಪನೆಗೂ ವಾಸ್ತವದ ಬದುಕಿಗೂ ಬಹಳ ವ್ಯತ್ಯಾಸ ಇದೆ ಎಂಬುದಕ್ಕೆ ಈ ಕಥೆಯೊಂದು ನಿದರ್ಶನವಾಗಿ ಉಳಿಯುತ್ತದೆ.

‘ಇದುವೆ ಸ್ವರ್ಗ’ – ಈ ಕಥೆಯ ಶೀರ್ಷಿಕೆ ಮೇಲ್ನೋಟಕ್ಕೆ ಸುಖೀ ಕುಟುಂಬದ ಭಾವವನ್ನು ಬಿಂಬಿಸುತ್ತದೆ. ಆದರೆ ಈ ಕಥೆ ಓದುತ್ತ ಹೋದಂತೆ ನನ್ನ ನೆನಪುಗಳೂ ಎರಡು ದಶಕ ಹಿಂದಕ್ಕೋಡುವಂತಾಗಿತ್ತು. ಕಥೆಯ ಸೂಕ್ಷ್ಮ ನಿರೂಪಣೆ ಕುತೂಹಲವನ್ನು ಉಳಿಸಿಕೊಂಡು ಬದುಕಿನ ವಾಸ್ತವವನ್ನು ಕಟ್ಟಿಕೊಡುತ್ತ ಹೋಗುತ್ತದೆ. ಆ ಕಥೆ ಓದಿ ಮುಗಿಸುವ ಹೊತ್ತಿಗೆ ಒಂದು ನಿಟ್ಟುಸಿರು ಬಂದೇ ಬರುತ್ತದೆ.

ಇನ್ನು ‘ವಿದಾಯ’ – ಈ ಕಥೆಯಂತೂ ಮುಸ್ಸಂಜೆಯ ಬದುಕಿಗೆ ಕನ್ನಡಿ. ಕಾಲಾನುಕ್ರಮದಲ್ಲಿ ಬದಲಾದ, ಬದಲಾಗುತ್ತಿರುವ ತಲೆಮಾರುಗಳ ಚಿಂತನೆಯ ಕ್ರಮವನ್ನು ಹಿಡಿದಿಟ್ಟ ಕಥೆ. ಭಾವ ತುಂಬಿದ ಬದುಕಿಗೂ ಈಗಿನ ಮೆಟೀರಿಯಲಿಸ್ಟಿಕ್ ಬದುಕಿಗೂ ಇರುವ ವ್ಯತ್ಯಾಸ ಅಮ್ಮ ಮತ್ತು ಮಕ್ಕಳ ಸಂಭಾಷಣೆಯಲ್ಲಿ ವ್ಯಕ್ತವಾಗುತ್ತದೆ. ಆತ್ಮ ದೇಹಕ್ಕೆ ವಿದಾಯ ಹೇಳುವ ಪರಿಯ ಚಿತ್ರಣ ನಿಜಕ್ಕೂ ಅನುಭವ ವೇದ್ಯ ವಿಚಾರದಂತೆ ಚಿತ್ರಿಸಿ ಕಥೆಗೊಂದು ನ್ಯಾಯ ಒದಗಿಸಿದ್ದಾರೆ ಕಥೆಗಾರ್ತಿ.

ಇದೇ ರೀತಿ ರತ್ನ ಅಲ್ಲ, ಅನಘ್ರ್ಯ ರತ್ನ.. ಕಥೆಯನ್ನು ಗಮನಿಸಿದರೆ ಅಲ್ಲಿ ನಿರೂಪಣೆ ನಡುವೆ ಪುಟ್ಟ ಪುಟ್ಟ ಕವನಗಳ ಬಳಕೆಯೂ ಆಗಿದೆ. ಅದು ಆ ಕಥಾ ನಿರೂಪಣೆಯ ಚೆಂದವನ್ನು ಹೆಚ್ಚಿಸಿದೆ. ಉದಾಹರಣೆಗೆ –

‘ಕೇಳಲಿಲ್ಲವೇ ನೀನು,

ನನ್ನ ಮೌನದ ಮಾತ,

ಕೇಳಲಿಲ್ಲವೇ ನನ್ನ ಮನದ ಮಿಡಿತ,

ಪ್ರತಿಕ್ಷಣಕು ಪ್ರತಿಯುಗಕು

ಅನುಕ್ಷಣವು ಎಡೆಬಿಡದೆ

ಮಿಡಿದಿಹುದು ನನ್ನೆದೆಯು ನಿನ್ನ ಹೆಸರ!’

ಈ ಪುಟ್ಟ ಕವನ ಎಷ್ಟು ಸರಳವಾಗಿದೆಯೋ ಅಷ್ಟೇ ಅರ್ಥಗರ್ಭಿತವಾಗಿದೆ ಕೂಡ. ಈ ಕವನಗಳನ್ನು ಕಥೆಯ ಓಘಕ್ಕೆ ಜೋಡಿಸುವುದಿದೆಯಲ್ಲ ಅದೊಂದು ಸವಾಲಿನ ಕೆಲಸವೇ ಸರಿ. ಎಲ್ಲ ಕಥೆಗಾರರಿಂದ ಇಂಥ ಪ್ರಯೋಗವನ್ನು ನಿರೀಕ್ಷಿಸಲಾಗದು. ಅದಕ್ಕೇ ಈ ಕಥೆ ಗಮನಸೆಳೆಯುತ್ತದೆ.

ಇನ್ನೊಂದು ಕಥೆ ಚುಕ್ಕೆ ತಪ್ಪದ ರಂಗೋಲಿ. ಈ ಕಥೆಯ ಶೀರ್ಷಿಕೆಯೊಳಗೇ ಬದುಕು ಇದೆ. ಅದಕ್ಕೊಂದು ಚೌಕಟ್ಟು ಕೂಡ ಇದೆ. ಅದನ್ನು ನಿರೂಪಿಸಿದ ಬಗೆ ಆಪ್ಯಾಯಮಾನವೂ ಹೌದು. ಇದೊಂದೇ ಕಥೆ ಎಂದಲ್ಲ, ಪರಿತ್ಯಕ್ತೆ, ಹೆಜ್ಜೆ ಗೆಜ್ಜೆ, ಊದು ವನಮಾಲಿಯ ಮುರಳಿಯ, ಸುಪ್ರಭಾತ.. ಹೀಗೆ ಈ ಕಥಾ ಸಂಕಲನದಲ್ಲಿರುವ ಹದಿನೆಂಟು ಕಥೆಗಳೂ ತನ್ನದೇ ಕಾರಣಕ್ಕೆ ವಿಶಿಷ್ಟವಾಗಿವೆ. ಸಾಮಾಜಿಕ ಪರಿಣಾಮವನ್ನೂ ಬಿಂಬಿಸುವಂತಹ ಕೌಟುಂಬಿಕ ಚಿತ್ರಣ ಮನಮುಟ್ಟುವಂಥದ್ದು.

ಹೀಗೆ ಹದಿನೆಂಟು ಕಥೆಗಳೂ ಒಂದಕ್ಕಿಂತ ಒಂದು ವಿಶೇಷವಾಗಿದೆ. ಕೆಲವೊಂದನ್ನು ಮೊದಲೇ ಊಹಿಸಿಬಿಡಬಹುದಾದರೂ, ಅಥವಾ ಇದೇ ರೀತಿಯ ಕಥೆ ಬೇರೆ ಕಡೆ ಓದಿದ್ದೇನಲ್ಲ ಎಂದೆನಿಸಿದರೂ ಈ ಕಥಾಸಂಕಲನದಲ್ಲಿ ನಿರೂಪಣೆ ಭಿನ್ನವಾಗಿರುವ ಕಾರಣ ಗಮನ ಸೆಳೆಯುತ್ತದೆ. ಹ್ಞಾಂ.. ಮುನ್ನುಡಿಯಲ್ಲೇ ಎಲ್ಲ ಕಥೆಗಳ ತಿರುಳನ್ನು ಅಥವಾ ಸಾರವನ್ನು ಒಂದೇ ಸಾಲಿನಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ, ಮುನ್ನುಡಿ ಓದುತ್ತಲೇ ಅಯ್ಯೋ ಇದರಲ್ಲಿರುವುದು ಇಷ್ಟೇನೇ ಎಂಬ ಭಾವ ಕಾಡೀತು.. ನಾನೊಬ್ಬ ಓದುಗನಾಗಿ ಅಂತಹ ಭಾವ ಕಾಡಲು ಬಿಡಲಾರೆ. ಈಗಾಗಲೇ ಹೇಳಿದಂತೆ ಪ್ರಸನ್ನ ಅವರ ಲೇಳನಿಯಿಂದ ಇಂಥ ನೂರಾರು ಕಥಾ ಸಂಕಲನ ಮೂಡಿಬರಲಿ. ಕನ್ನಡ ಕಥಾಲೋಕಕ್ಕೆ ಇನ್ನಷ್ಟು ಹೊಸತನ, ಹುರುಪನ್ನು ತುಂಬಲಿ. ಶುಭವಾಗಲಿ…

Home
Search
All Articles
Videos
About
%d bloggers like this:
Aakruti Kannada

FREE
VIEW