ಲೇಖಕಿ ಭಾಗ್ಯರೇಖಾ ದೇಶಪಾಂಡೆ ಅವರ ‘ಮಂಡೋದರಿ’ ಕೃತಿಯ ಕುರಿತು ರಾಘವೇಂದ್ರ ಅಪರಂಜಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ಮಂಡೋದರಿ
ಲೇಖಕರು : ಭಾಗ್ಯರೇಖಾ ದೇಶಪಾಂಡೆ
ಬೆಲೆ : 400.00
ಪ್ರಕಾಶಕರು : ಸಪ್ನ ಬುಕ್ ಹೌಸ್
ರಾವಣ ಮಹಾ ಭಕ್ತ, ಮಹಾ ಕ್ರೂರಿ, ಮಹಾನ್ ಹೋರಾಟಗಾರ, ಮೂರು ಲೋಕಗಳನ್ನು ನಡುಗಿಸಿದಾತ, ಹೀಗೆ ತಿಳಿದುಕೊಳ್ತಾ ಆತನ ಬಗ್ಗೆ ಕುತೂಹಲ ಹೆಚ್ಚಿದಂತೆ ಈತನ ಹೆಂಡತಿ ಮಂಡೋದರಿ ಹೇಗಿದ್ದರಬಹುದು. ರಾವಣನೊಡನೆ ಅದ್ಹೇಗೆ ಸಂಸಾರ ನಡೆಸಿರಬಹುದು ಅಂತ ತಿಳಿಯಬೇಕು ಅಂತ ಅನಿಸಿದಾಗ ಕಣ್ಣು ಮಂಡೋದರಿಯನ್ನು ಹುಡುಕಲು ಆರಂಭ ಮಾಡಿತ್ತು.
ಒಮ್ಮೆ ಹೀಗೆ ಗೆಳೆಯ, ಸಹೋದ್ಯೋಗಿ ಅಂಬರೀಶ ಮನೆಗೆ ಹೋಗಿದ್ದೆ. ಆತನ ಗಾಜಿನ ಕಪಾಟಿನಲ್ಲಿ ಮಂಡೋದರಿ ಸುಮ್ಮನೆ ಕುಳಿತಿದ್ದಳು. ನಂಗೂ ಸ್ವಲ್ಪ ಕೊಡತಿಯಾ ಅಂದೆ….ಲೇಖಕಿ ಭಾಗ್ಯರೇಖಾ ದೇಶಪಾಂಡೆ ಅವರು ಬರೆದ ಈ ಪುಸ್ತಕ ಓದುತ್ತಾ ಓದುತ್ತಾ ಹೋದಂತೆ ಕುತೂಹಲದ ಬಾಗಿಲುಗಳು ತೆರೆಯುತ್ತಾ ಹೋದವು.

ರಾವಣ ತನ್ನ ದಾರಿ ತಪ್ಪಿದಾಗ, ನೈತಿಕತೆಯನ್ನು ತೊರೆದಾಗ ವಿಭಿಷಣ ಹೇಗೆ ದಾರಿ ತೋರುವ ಕೆಲಸ ಮಾಡುತ್ತಿದ್ದನೋ ಅದೇ ಕೆಲಸವನ್ನು ಮಂಡೋದರಿಯೂ ಹೇಗೆ ಮಾಡತಿದ್ದಲು. ರಾವಣನ ಕಥೆ ಮುಗಿದೇ ಹೋಯಿತು ಅಂದಾಗ ಶಿವ, ಪಾರ್ವತಿಯರನ್ನು ಅದ್ಹೇಗೆ ತಾನಿದ್ದಲ್ಲಿಂದಲೇ ಶಿವನನ್ನು ಒಲಿಸಿಕೊಂಡಳು. ಇನ್ನೇನು ರಾವಣ ಮರಳಿ ಬರಲಾರ ಎಂದು ಸ್ವತಃ ರಾವಣನ ತಂದೆ ವಿಶ್ರವಸುನೇ ತನ್ನ ಪತ್ನಿ, ರಾವಣನ ತಾಯಿ ಕೈಕಸೆಗೆ ಹೇಳಿ ಹೋದಾಗಲೂ ಮತ್ತೆ ರಾವಣ ಹೇಗೆ ಬಂದ ಅನ್ನೋ ಆಸಕ್ತಿ ಓದಿದಂತೆ ಕೆರಳುತ್ತಾ ಹೋಗುತ್ತೆ….
ರಾಕ್ಷಸ ಯುವತಿಯರ ಮದುವೆ ಹೇಗೆ ಆಗತಿತ್ತು. ರಾತ್ರೋರಾತ್ರಿ ಅವರನ್ನು ಹೇಗೆ ಅಪಹರಣ ಮಾಡತಿದ್ದರು. ಮಂಡೋದರಿ ತನ್ನ ಗೆಳತಿ ಕಾಣೆಯಾದಾಗ ಪಡುವ ಸಂಕಟ, ಆಕೆಯೇ ನಿರ್ಮಿಸಿಕೊಂಡ ಧ್ಯಾನ ಕುಟೀರ, ಅಶೋಕವನದಲ್ಲಿದ್ದ ಸೀತೆಯನ್ನು ಹಲವಾರು ಬಾರಿ ರಕ್ಷಿಸಿದ ಜಾಣಾಕ್ಷತನ ತಿಳಿದಂತೆಲ್ಲ ಆಕೆಯ ಜ್ಞಾನ, ತಿಳಿವಳಿಕೆಗೆ ತಲೆಬಾಗದೇ ಇರಲು ಸಾಧ್ಯವೇ ಇಲ್ಲ. ಅದಕ್ಕಾಗೇ ಮಂಡೋದರಿಯನ್ನು ಪಂಚ ಪತಿವ್ರತೆಯರಲ್ಲಿ ಒಬ್ಬಳು ಎನ್ನುತ್ತಾರೆ ಅನ್ನೋದನ್ನು ನಾವು ಒಪ್ಪಲೇಬೇಕು.

ಅದಕ್ಕಾಗೇ….ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ತಥಾ, ಪಂಚಕನ್ಯಾ ಸ್ಮರೇನ್ ನಿತ್ಯಂ ಮಹಾ ಪಾಥಕ ನಾಶನಮ್ ಎನ್ನುವ ಮಂತ್ರ ಹೇಳುವುದನ್ನು ನಾವು ಕೇಳತಿವಿ.
ಮಂಡೋದರಿಯನ್ನು ತಿಳಿಯುತ್ತಾ ಹೋದಂತೆ ಹೌದು ಇದು ನಿಜ ಎನ್ನೋದನ್ನು ಲೇಖಕಿ ಭಾಗ್ಯರೇಖಾ ದೇಶಪಾಂಡೆ ಅವರು ಭಾಳ ಚಂದ ನಿರೂಪಣೆ ಮಾಡ್ಯಾರ.
ಬಂಗಾರವನ್ನೇ ಹೊದ್ದುಕೊಂಡ ಲಂಕೆಯ ರಾಣಿಯಾಗಿದ್ದ ಮಂಡೋದರಿ ಅಸುರರ ರಾಜಾ ಮಾಯಾಸುರನ ಮಗಳು. ತಾಯಿ ಅಪ್ಸರಾ ಹುಟ್ಟಿನಿಂದಲೂ ತಾಯಿಯನ್ನು ಈಕೆ ಕಾಣಲೇ ಇಲ್ಲ. ಆದರೆ ತನ್ನ ತಾಯಿ ತನ್ನಂತೆ ಸೌಂದರ್ಯವತಿ ಆಗಿದ್ದಲು ಅಂತ ತಂದೆ ಮೇಲಿಂದ ಮೇಲೆ ಹೇಳೋದನ್ನು ಕೇಳಿ ಕನ್ನಡಿ ಎದುರು ತನ್ನನ್ನೇ ನೋಡಿಕೊಳ್ಳುತ್ತಿದ್ದ ಮಂಡೋದರಿ ಯಾವತ್ತೂ ಮೋಹಪಾಶಕ್ಕೆ ಬೀಳಲೇ ಇಲ್ಲ.
ಈಕೆಗೆ ಮೇಘನಾದ, ಅತಿಕಾಯ, ಅಕ್ಷಯಕುಮಾರ ಎನ್ನುವ ಮೂವರು ಗಂಡು ಮಕ್ಕಳು ಹುಟ್ಟುತ್ತಾರೆ. ಅದರಲ್ಲಿ ಮೇಘನಾದ ಅಥವಾ ಇಂದ್ರಜಿತ್ ತಪಸ್ಸು ಮಾಡಿ ಶಕ್ತಿ ಪಡೆದು ಅನೇಕ ಯುದ್ಧ ಮಾಡಿ ಜಯಶಾಲಿಯಾದರೂ ಧರ್ಮಯುದ್ಧಕ್ಕಷ್ಟೇ ಮಂಡೋದರಿ ಮಾನ್ಯತೆ ನೀಡತಾಳೆ….ಇಂತಹ ಅನೇಕ ಕುತೂಹಲಕರ ಘಟ್ಟಗಳು ಈ ಪುಸ್ತಕದಲ್ಲಿವೆ.
ನಿಮಗೂ ಮಂಡೋದರಿ ಬಗ್ಗೆ ತಿಳಕೋಬೇಕು ಅಂತ ಅನಸ್ತಾ…ಸ್ವಪ್ನಾ ಬುಕ್ ಹೌಸ್ ವೊಳಗ ಸಿಗತದ ನೋಡ್ರಿ ತಂದ ಓದ್ರಿ.
- ರಾಘವೇಂದ್ರ ಅಪರಂಜಿ
