ಮಹಾರಾಜರು ಶಿವಮೊಗ್ಗ ಆಸ್ಪತ್ರೆಗೆ ಮೆಕ್‌ಗ್ಗಾನ್‌ ಹೆಸರನ್ನೇಕೆ ಇಟ್ಟರು?

ಲೇಖನ : ಡಾ.ಗಜಾನನ ಶರ್ಮ

ಮಲೆನಾಡಿನ ಇಂದಿನ ಸಂಕಷ್ಟ ಕಾಲದಲ್ಲಿ ಕರ್ನಲ್‌ ಮೆಗ್ಗಾನ್‌ ದಂಪತಿಗಳು ನೆನಪಾಗುತ್ತಿದ್ದಾರೆ. ಇಂದಿಗೆ ಸರಿಯಾಗಿ ಎಂಭತ್ತೇಳು ವರ್ಷಗಳಹಿಂದೆ [ಜನವರಿ ಹದಿನಾರು ೧೯೩೨] ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಶ್ಣರಾಜ ಒಡೆಯರ್‌ ಶಿವಮೊಗ್ಗದಲ್ಲಿ ಬೃಹತ್‌ ಆಸ್ಪತ್ರೆಯೊಂದಕ್ಕೆ ಅಡಿಗಲ್ಲಿಟ್ಟು ಅದಕ್ಕೆ ಕರ್ನಲ್‌ ಮೆಗಾನ್‌ ಹೆಸರಿಡಲು ಸೂಚಿಸುತ್ತಾರೆ. ಯಾಕೆ?

ನಮ್ಮ ರಾಜರು ನಮ್ಮ ಸಂಸ್ಥಾನದಲ್ಲಿ ನಮ್ಮ ಜನರಿಗಾಗಿ ಸ್ಥಾಪಿಸುವ ಸ್ಥಾಪಿಸುವ ವಿದೇಶಿಯನ ಹೆಸರು? ಯಾರೂ ಪ್ರಶ್ನಿಸಲಿಲ್ಲ. ಯಾಕಂದರೆ ಅದಕ್ಕೆ ಕಾರಣವಿತ್ತು. ಇಡೀ ಮಲೆನಾಡಿಗೆ ಕರ್ನಲ್‌ ಮೆಕ್ ಗಾನ್‌ ದಂಪತಿಗಳ ಋಣಭಾರವಿತ್ತು. ಅವರು ಗೈದ ಸೇವೆಯ ನೆನಪಿತ್ತು. ಹಾಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಕ್‌ ಗಾನ್‌ ಆಸ್ಪತ್ರೆಯಾಯಿತು.

(ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಕ್‌ ಗಾನ್‌ ಆಸ್ಪತ್ರೆ)

ಆ ಮಹನೀಯರ ಪೂರ್ಣ ಹೆಸರು ಕರ್ನಲ್‌ ಟಿ.ಜಿ. ಮೆಕ್‌ ಗಾನ್‌ (colonel T G McGann) 1842 ರಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿ, ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯರಾಗಿ ಬಂದ ಅವರು ಮೈಸೂರು ಸಂಸ್ಥಾನದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸತೊಡಗುತ್ತಾರೆ. ಅವರಿಗೆ ಮೊದಲು ಸೇವೆ ಸಲ್ಲಿಸಲು ಸಿಕ್ಕ ಸ್ಥಳ ಶಿವಮೊಗ್ಗ. ಅಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತೀವ್ರ ಶ್ರದ್ಧೆ ಮತ್ತು ಅಪಾರ ಕರುಣೆಯಿಂದ ಮಲೆ ನಾಡಿನ ಬಡ ರೋಗಿಗಳ ಸೇವೆ ಮಾಡುತ್ತಾರೆ.

ಅದು ಮಲೆ ನಾಡಿನ ಬದುಕು ಅಸಹನೀಯವಾಗಿದ್ದ ಕಾಲ. ವರ್ಷದ ಆರು ತಿಂಗಳು ಮಳೆ. ರಸ್ತೆ, ಸೇತುವೆ, ವಾಹನ ಸಂಪರ್ಕಗಳಿಲ್ಲದ ಹಳ್ಳಿಗಾಡುಗಳು. ಸದಾ ಕವಿದುಕೊಂಡ ಅರಣ್ಯ. ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ಉಪಟಳ. ಕ್ರಿಮಿ ಕೀಟ, ಕಾಡು ಪ್ರಾಣಿಗಳ ಕಾಯ. ವೈದ್ಯಕೀಯ ಸೌಲಭ್ಯಗಳ ತೀವ್ರ ಕೊರತೆ, ಮೂಢ ನಂಬಿಕೆ, ಅನಕ್ಷರತೆ ಇವೆಲ್ಲವುಗಳ ನಡುವೆ ಕಾಡುವ ಹಸಿ ಹಸಿ ಬಡತನ.

ಆದರೆ ಕರ್ನಲ್‌ ಮೆಗ್ಗಾನ್‌ ಇದ್ಯಾವುದಕ್ಕೂ ಮಹತ್ವ ಕೊಡದೆ ನಿರ್ವಂಚನೆಯಿಂದ ಮಲೆನಾಡಿನ ಮುಗ್ಧ ರೋಗಿಗಳ ಸೇವೆ ಮಾಡಿದರು. ತಾನೊಬ್ಬ ವಿದೇಶೀ ವೈದ್ಯ ಎಂಬುದನ್ನೂ ಮರೆತು ತಮ್ಮ ಶ್ರೀಮತಿಯವರನ್ನೂ ಜೊತೆಗೂಡಿಸಿಕೊಂಡು ಮಲೆ ನಾಡಿನ ರೋಗಿಗಳ ಸೇವೆಗೈದರು.

ಅವರಿಗೆ ೧೮೮೫ ರಲ್ಲಿ ರಾಜ್ಯದ ಸೀನಿಯರ್‌ ಸರ್ಜನ್‌ ಆಗಿ ಪದೋನ್ನತಿ ನೀಡಲ್ಪಟ್ಟಿತು. ಆಗಲೂ ಅವರು ಶಿವಮೊಗ್ಗೆಯನ್ನು ಮರೆಯಲಿಲ್ಲ. ಮಲೆನಾಡಿಗರ ಸೇವೆಯನ್ನು ನಿಲ್ಲಿಸಲಿಲ್ಲ.ತಮ್ಮ ಕುಟುಂಬವನ್ನು ಮೈಸೂರಲ್ಲಿಯೇ ಬಿಟ್ಟು ಅವರು ಹೆಚ್ಚು ಕಾಲ ಶಿವಮೊಗ್ಗೆಯಲ್ಲೇ ಉಳಿದು ಮಲೇರಿಯಾ ಮತ್ತು ಕಾಲರಾದಿಂದ ಬಳಲುತ್ತಿದ್ದ ಸಾವಿರಾರು ಜನರನ್ನು ರಕ್ಷಿಸಿದರು.

ಮೈಸೂರಿನಲ್ಲಿ ಅವರ ಶ್ರೀಮತಿ ಆಗಿನ ಸಂಸ್ಥಾನದ ರೀಜೆಂಟರಾಗಿದ್ದ ಶ್ರೀಮತಿ ಕೆಂಪ ನಂಜಮ್ಮಣ್ಣಿಯವರ ನೆಚ್ಚಿನ ಒಡನಾಡಿಯಾಗಿದ್ದರು. ಅವರಿಬ್ಬರ ನಡುವೆ ಆತ್ಮೀಯ ಸ್ನೇಹ ಸಂಬಂಧ ಹರಳುಗಟ್ಟಿತು. ತಾವು ಸೀನಿಯರ ಸರ್ಜನ್‌ ಆಗಿದ್ದ ೧೮೮೫ ರಿಂದ ೧೮೯೫ ರವರೆಗಿನ ಅವಧಿಯಲ್ಲಿ ಕರ್ನಲ್‌ ಮೆಗ್ಗಾನ್‌ಮೈಸೂರು ರಾಜ್ಯದ ಆರೋಗ್ಯ ಇಲಾಖೆಯನ್ನು ಕಟ್ಟಿ ಬೆಳೆಸಿದರು. ಅದಕ್ಕೊಂದು ಕಾಯಕಲ್ಪ ಒದಗಿಸಿದರು. ೧೮೯೫ ರಲ್ಲಿ ಅವರನ್ನು ಅಧಿಕೃತವಾಗಿ ಮೈಸೂರು ರಾಜರ ಮತ್ತು ರಾಜಕುಟುಂಬದ ವೈದ್ಯರಾಗಿ ನೇಮಕ ಮಾಡಲಾಯಿತು..ಅಂದು ರಾಜ್ಯದ ಆರೋಗ್ಯ ಕ್ಷೇತ್ರ ಸಂಪೂರ್ಣವಾಗಿ ಹದಗೆಟ್ಟಿದ್ದ ಕಾಲ. ಸಾಮಾಜಿಕ ಬದುಕಿನಲ್ಲಿ ನೈರ್ಮಲ್ಯ ನಿರ್ಲಕ್ಷಿತಗೊಂಡಿದ್ದ ಅವಧಿ ಅದು. ಆ ಅವಧಿಯಲ್ಲಿ ಕರ್ನಲ್‌ ಮೆಗ್ಗಾನ್‌ ಮಹಾರಾಜರಿಗೆ ರಾಜ್ಯದ ಪ್ರಜೆಗಳ ಆರೋಗ್ಯ ಮತ್ತು ನೈರ್ಮಲ್ಯ ರಕ್ಷಣೆ ಕುರಿತು ಪ್ರಭಾವ ಬೀರುತ್ತಾರೆ. ಅದು ಬಿ.ಎ.ರೈಸ್‌ ಅವರ ಮೈಸೂರು ಗೆಜೆಟೀಯರನಲ್ಲಿ ಹೀಗೆ ಉಲ್ಲೇಖಿಸಲ್ಪಟ್ಟಿದೆ.

But surgeon colonel McGann the head of the Medical Department impresses upon the government.

”the importance of improving village sanitation. Every advance in that direction, in the way of improving and conservingthe water-supply. And promoting general cleanliness, by preventing the storage of manure in the backyards of houses and preventing as far as possible, the deffilment of the ground inimmediately around towns and villages would be distinct gain, would improve the general health of the people, diminish their liability to fevers, bowel complaints and cholera, and tend to check the spread of the lost -named disease on its occurance amongst them”

in order to reduce the mortality from smallfox he strogly urges the introduction of compulsory vaccination act as the only effectual course.

ಹೀಗೆ ಆರೋಗ್ಯ ಇಲಾಖೆಯಮುಖ್ಯಸ್ಥರಾಗಿ ಮೆಗ್ಗಾನ್‌ರು ಹಳ್ಳಿಗರಿಗೆ ಕಲುಷಿತ ನೀರು ಸೇನಿಸದಂತೆ, ಮನೆಯ ಹಿಂದೆ ಗೊಬ್ಬರ ಸಂಗ್ರಹಿಸದಂತೆ, ಮನೆಯ ಸುತ್ತ ಮುತ್ತ ಪರಿಶುದ್ಧತೆ ಕಾಪಾಡಿಕೊಂಡು ಅಂಟು ಜಾಢ್ಯಗಳಿಂದ ಮುಕ್ತರಾಗಲು ಕಡ್ಡಾಯ ಚುಚ್ಚುಮದ್ದು ಪಡೆಯುವಂತೆ ಒತ್ತಾಯಿಸುವ ಕಾಯ್ದೆ ಜಾರಿಗೊಳಿಸಲು ಒತ್ತಡ ಹೇರುತ್ತಿದ್ದರೆ,ಶ್ರೀಮತಿ ಮೆಗ್ಗಾನರುರೀಜಂಟರಾದ ಮಹಾರಾಣಿಯವರಿಗೆ, ಅರಮನೆಯೊಳಗೆ ರಾಜಕುಟುಂಬದ ಹೆಂಗಸರ ನಡುವೆ ವ್ಯವಾಪಿಸಿದ್ದ

ಮುಟ್ಟು-ಮೈಲಿಗೆ, ಮಡಿ-ಹುಡಿಗಳ ಕಂದಾಚಾರದ ಕುರಿತು ಜಾಗ್ರತೆ ಮೂಡಿಸುತ್ತ, ಅವರ ದೈನಂದಿನ ಬದುಕಿಗೆ ಒಂದಷ್ಟು ಆಧುನಿಕತೆಯನ್ನು ತುಂಬಲು ಯತ್ನಿಸುತ್ತಿದ್ದರು. ೧೯೦೫ ರಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕರ್ನಲ್‌ ಮೆಗ್ಗಾನ್‌ ರನ್ನು ದರ್ಬಾರು ವೈದ್ಯರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡುತ್ತಾರೆ.ಇಷ್ಟು ಹೊತ್ತಿಗೆ ಮಹಾರಾಜರ ಕುಟುಂಬಕ್ಕೂ, ಮೆಗ್ಗಾನರ ಕುಟುಂಬಕ್ಕೂ ಅಪಾರ ಅನೋನ್ಯತೆ ಬೆಳೆದಿರುತ್ತದೆ. ಅದರಲ್ಲೂ ರಾಜಮಾತೆಯವರಿಗೂ ಶ್ರಮತಿ ಮೆಗ್ಗಾನರಿಗೂ ನಿಕಟ ಸ್ನೇಹ ಏರ್ಪಟ್ಟಿರುತ್ತದೆ.

೧೯೦೬ ರಲ್ಲಿ ಮೆಗ್ಗಾನರು ಸೇವೆಯಿಂದ ನಿವೃತ್ತರಾಗುತ್ತಾರೆ. ಅನಿವಾರ್ಯವಾಗಿ ಅವರು ತಮ್ಮ ದೇಶಕ್ಕೆ ಹಿಂದಿರುಗಲೇಬೇಕಾಗುತ್ತದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕನ್ನಡದ ಮಣ್ಣನ್ನು ತಮ್ಮ ಮಾತೃಭೂಮಿಯಷ್ಟೇ ಪ್ರೀತಿಸಿ, ಜನಸೇವೆಯಲ್ಲೇ ಮುಳುಗಿ ಬದುಕಿದ್ದ ಮೆಗ್ಗಾನ್‌ ದಂಪತಿಗಳು ತಮ್ಮ ಏಕಮಾತ್ರ ಪುತ್ರಿ ಇರ್ವಿನ್‌ ಜೊತೆ ಇಂಗ್ಲೆಂಡಿಗೆ ಮರಳುತ್ತಾರೆ.

(ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್)

೧೯೦೮ ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಅವರು ಕೆಲವು ಕಾಲ ತಮ್ಮ ಆತಿಥ್ಯ ಸ್ವೀಕರಿಸಲು ಮೈಸೂರಿಗೆ ಆಗಮಿಸುವಂತೆ ಮೆಗ್ಗಾನ್‌ ಕುಟುಂಬವನ್ನು ಆಹ್ವಾನಿಸುತ್ತಾರೆ. ಆ ಪ್ರಸಂಗವನ್ನು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ತಮ್ಮ ವೃತ್ತಿ ಬದುಕಿನ ಆತ್ಮ ಕತೆ – ”ಮೈ ಪಬ್ಲಿಕ್‌ ಲೈಫ್‌” ನಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಅದರ ಕನ್ನಡ ಅನುವಾದ ಹೀಗಿದೆ.

ನಾನು ಅತ್ಯಂತ ಗೌರವದಿಂದ ಕಾಣುವ ಇಬ್ಬರು ಸ್ನೇಹಿತರೆಂದರೆ ಕರ್ನಲ್‌ ಮೆಗ್ಗಾನ್‌ ಮತ್ತು ಅವರ ಶ್ರೀಮತಿಯವರು. ಅವರು ಮಹಾರಾಜರು ಮತ್ತು ಅವರ ದಿವಂಗತ ಮಾತೃಶ್ರೀಯವರಿಗೆ ಅವರು ಅತ್ಯಂತ ಪ್ರೀತಿ ಪಾತ್ರರು. ಶ್ರೀಮತಿಮೆಗ್ಗಾನರು ದಿವಂಗತ ರಾಜಮಾತೆಯವರ ಜೀವದ ಗೆಳತಿಯಾಗಿದ್ದರು. ಮತ್ತು ಇಬ್ಬರೂ ಪರಸ್ಪರ ಗೌರವಾದರ ಹೊಂದಿದ್ದರು. ಕರ್ನಲ್‌ ಮೆಗ್ಗಾನ್‌ ಭಾರತೀಯ ವೈದ್ಯಕೀಯ ಸೇವೆಯಲ್ಲಿದ್ದವರು. ಮತ್ತು ಅವರು ತಮ್ಮ ವೃತ್ತಿ ಜೀವನವನ್ನು ಮೈಸೂರಿನಲ್ಲಿ ಆರಂಭಿಸಿದವರು. ಅವರು ಸಂಸ್ಥಾನದ ಮುಖ್ಯ ವೈದ್ಯಾಧಿಕಾರಿಯ ಹಂತಕ್ಕೇರಿದ್ದಲ್ಲದೆ ರಾಜ್ಯದಲ್ಲಿ ಇಲಾಖೆಯನ್ನು ಕಟ್ಟಿ ಬೆಳೆಸಿದವರು. ಅವರು ತಮ್ಮ ನಿವೃತ್ತಿಯ ನಂತರ ತಮ್ಮ ತಾಯ್ನಾಡು ಇಂಗ್ಲೆಂಡಿಗೆ ಮರಳಿ, ಅಲ್ಲೇ ಉಳಿದುಕೊಳ್ಳುತ್ತಾರೆ.

೧೯೦೮ ರ ಸುಮಾರಿಗೆ ಮಹಾರಾಜರು ಮೆಗ್ಗಾನ ದಂಪತಿಗಳನ್ನು ಕೆಲವು ತಿಂಗಳ ಮಟ್ಟಿಗೆ ತಮ್ಮ ಮತ್ತು ತಮ್ಮ ತಾಯಿಯವರ ಆತಿಥ್ಯ ಸ್ವೀಕರಿಸಬೇಕೆಂದು ಆವ್ವಾನಿಸುತ್ತಾರೆ. ಆದರೆ ಆತಿಥ್ಯದ ಆ ತಿಂಗಳುಗಳು ಹಲವು ವರ್ಷಗಳಾಗಿ ವಿಸ್ತರಿಸುತ್ತವೆ. ಯಾಕಂದರೆ ಮಾಹಾರಾಜರ ಕುಟುಂಬಕ್ಕಾಗಲೀ, ಕರ್ನಲರ ಕುಟುಂಬಕ್ಕಾಗಲೀ ಒಬ್ಬರನೊಬ್ಬರು ಅಗಲುವುದಕ್ಕೆ ಮನಸ್ಸಿರಲಿಲ್ಲ. ಕೊನೆಗೂ ಅವರನ್ನು ಅಗಲಿಸಿದ್ದು ಸಾವು.

ಶ್ರೀಮತಿ ಮೆಗ್ಗಾನ್‌ ಒಂದು ಬಗೆಯ ವಿಶಿಷ್ಟ ವ್ಯಕ್ತಿತ್ವವುಳ್ಳವರಾಗಿದ್ದರು. ಅವರು ಆತ್ಮೀಯ ಸ್ನೇಹಕ್ಕೆ ಅತಿ ಹೆಚ್ಚು ಮಹತ್ವ ನೀಡುವವರಾಗಿದ್ದು ತಮ್ಮ ವಿವೇಚನೆ ಮತ್ತು ದಯಾಪರತೆಯಿಂದ ಯಾರೂ ಇಷ್ಟಪಡುವ ಸ್ವಭಾವದವರಾಗಿದ್ದರು.ಬಹು ದೀರ್ಘಕಾಲ ರಾಜ ಪರಿವಾರ ಅವರ ಪ್ರೀತಿಯನ್ನು ಮಾತ್ರವಲ್ಲದೆ ಅವರ ಸಲಹೆಯನ್ನೂ ಅತ್ಯಂತ ಗೌರವಭಾವದಿಂದ ಸ್ವೀಕರಿಸುತ್ತಿತ್ತು. ಅವರು ಒಬ್ಬ ಅತ್ಯುತ್ತಮ ಆಪ್ತ ಸಲಹೆಗಾರ್ತಿಯಾಗಿದ್ದರು. ಕರ್ನಲ್‌ ಮೆಗ್ಗಾನ್‌ ತಮ್ಮ ತೊಭತ್ತನಾಲ್ಕನೆಯ ವಯಸ್ಸಿಗೆ ಅಂದರೆ ೧೯೩೬ ರಲ್ಲಿ ತೀರಿಕೊಂಡರೆ ಅವರ ಶ್ರೀಮತಿ ೧೯೪೧ರಲ್ಲಿ ಅಂದರೆ ತಮ್ಮ ೮೪ ನೆಯ ವಯಸ್ಸಿನಲ್ಲಿ ತೀರಿಕೊಂಡರು. ಮಹಾರಾಜರು ಮತ್ತು ರಾಜಮಾತೆಯರಿಬ್ಬರೂ ಆಗಲೇ ಅವರನ್ನು ಅಗಲಿಯಾಗಿತ್ತು. ಅವರ ಮರಣದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿ ಇದ್ದುದರಿಂದ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರು ನನಗೆ ತಾಯಿಯಂತಿದ್ದರು. ಅವರ ಮಗಳು ಶ್ರೀಮತಿ ಇರ್ವಿನ್‌ ಈಗಲೂ ಕೂಡ ಮೈಸೂರಿನಲ್ಲಿಯೇ ಇದ್ದಾರೆ. ಮತ್ತು ನನ್ನನ್ನು ತಮ್ಮ ಎರಡನೇ ಮಗನಂತೆ ಎಂದು ಹೇಳುತ್ತಿರುತ್ತಾರೆ.

ರಾಜಪರಿವಾಗದೊಡನೆ ಇದ್ದ ಅವರ ಸ್ನೇಹ ಮತ್ತು ಈ ಮಣ್ಣಿಗೆ ಅವರು ಸಲ್ಲಿಸಿದ ಸೇವೆಯ ಕುರುಹಾಗಿ ಮಹಾರಾಜರು ಶಿವಮೊಗ್ಗದಲ್ಲಿ ಸಂಸ್ಥಾನ ನಿರ್ಮಿಸಿದ ಆಸ್ಪತ್ರೆಗೆ ಕರ್ನಲ್‌ ಮೆಗ್ಗಾನ್‌ರ ಹೆಸರನ್ನೇ ಇಟ್ಟು ಆ ಮಾನವತಾಮೂರ್ತಿಗೆ ಅರ್ಹ ಗೌರವ ಸಲ್ಲಿಸಿದ್ದಾರೆ”

ಹೌದು. ೧೯೩೨ ರ ಜನೆವರಿ ಹದಿನಾರರಂದು ಶಿವಮೊಗ್ಗದ ಆಸ್ಪತ್ರೆಗೆ ಅಡಿಗಲ್ಲಿಟ್ಟ ಮಹಾರಾಜ ಕೃಷ್ಣರಾಜ ಒಡೆಯರ್‌ರವರು ಅವರ ಗುಣಗಾನಗೈದದ್ದನ್ನು ಮಲೆನಾಡು ಮರೆಯುವದಿಲ್ಲ. ಮರೆಯುವಂತೆಯೂ ಇಲ್ಲ.

ಆಗಿನ ಆರೋಗ್ಯ ಇಲಾಖೆಯ ಪರಿಸ್ಥಿತಿ ಹೇಗಿತ್ತು ಗೊತ್ತೇ? ಅದಕ್ಕೂ ಮೆಗ್ಗಾನರದೇ ಉದಾಹರಣೆಯಿದೆ.ಕರ್ನಲ್‌ ಮೆಗ್ಗಾನರು ಸೀನಿಯರ್‌ ಸರ್ಜನ್‌ ಆಗಿದ್ದ ಕಾಲದಲ್ಲಿ ನಡೆದ ಒಂದು ಘಟನೆ ಅತ್ಯಂತ ರೋಚಕವಾಗಿದೆ.

೧೮೮೯ ರ ದಸರಾ ಪ್ರಜಾಪ್ರತಿನಿಧಿ ಸಭೆಯಲ್ಲಿ ಕೆಲವು ಸದಸ್ಯರು ರಾಜ್ಯದ ಪ್ರತಿ ತಾಲೂಕಿಗೆ ಕನಿಷ್ಠ ಒಬ್ಬ ಸೂಲಗಿತ್ತಿ [ಮಿಡ್‌ ವೈವ್ಸ]ಯನ್ನಾದರೂ ನೇಮಕ ಮಾಡಲು ಒತ್ತಾಯಿಸುತ್ತಾರೆ. [ತಾಲೂಕಿಗೊಬ್ಬ ವೈದ್ಯರಲ್ಲ. ಸೂಲಗಿತ್ತಿ. ಊಹಿಸಿಕೊಳ್ಳಿ. ಅಂದಿನ ಪರಿಸ್ಥಿತಿ]ಆದರೆ ಬೇಡಿಕೆ ಸೀನಿಯರ್‌ ಸರ್ಜನ್‌ ಮೆಗ್ಗಾನರಿಗೆ ತಲೆಬೇನೆ ತರುತ್ತದೆ. ಯಾಕಂದರೆ ಆಗ ಮಿಡ್‌ವೈವ್ಸ ನೇಮಕವೆಂಬುದು ಕಡು ಕಷ್ಟದ ಕೆಲಸವಾಗಿತ್ತು. ಆ ಕಾಲದಲ್ಲಿ ಸೂಲಗಿತ್ತಿಯರಿಗೆ ತರಬೇತಿ ಪಡೆಯಲು ಮದರಾಸಿಗೆ ಕಳುಹಿಸಬೇಕಾಗಿರುತ್ತದೆ. ತರಬೇತಿಯ ಸಂದರ್ಭದಲ್ಲಿ ತಿಂಗಳಿಗೆ ಹತ್ತು ರೂಪಾಯಿ ಸ್ಕಾಲರಶಿಪ್‌ ಕೊಡುತ್ತೇವೆ ಮತ್ತು ಅದು ಮುಗಿಯುತ್ತಿದ್ದಂತೆ ಮಾಸಿಕ ಇಪ್ಪತ್ತು ರೂಪಾಯಿ ವೇತನ ಶ್ರೇಣಿಯ ಉದ್ಯೋಗ ನೀಡುತ್ತೇವೆ ಎಂದರೂ ಯಾರೂ ಮುಂದೆ ಬರುತ್ತಿರಲಿಲ್ಲ. [ಆಗ ಹತ್ತು ರೂಪಾಯಿ ಎಂಬುದು ದೊಡ್ಡ ಮೊತ್ತ]ಸರಿ. ಮತ್ತೆಸ್ಕಾರಶಿಪ್‌

ಮಾಸಿಕ ಮಾಸಿಕ ಹದಿನೈದು ರೂಪಾಯಿಗೇರಿಸಿ ೧೮೯೧ ರಲ್ಲಿ ಮಿಡ್‌ವೈವ್ಸ ತರಬೇತಿಗೆ ಕರೆಯಲಾಗುತ್ತದೆ.ಆಗಲೂ ಯಾರೂ ಮುಂದೆ ಬರುವುದಿಲ್ಲ. ಅದು ಮುಟ್ಟು ಮೈಲಿಗೆ ಕಂದಾಚಾರಗಳ ಕಾಲ. ಶೇಣೀಕೃತ ಜಾತಿ ಜಾತಿ ವ್ಯವಸ್ಥೆಯಲ್ಲಿ ಯಾವ ಜಾತಿಯವರೂ ತಮಗಿಂತ ಕನಿಷ್ಠ ಜಾತಿಯವರ ಪ್ರಸವ ಮಾಡಿಸಲು ಮುಂದೆ ಬರದಿದ್ದಾಗ ಉಳಿದದ್ದು ಬರೀ ಕ್ರಿಶ್ಚಿಯನ್ನರು ಮಾತ್ರ. ತರಬೇತಿಗೆ ಆಯ್ಕೆಯಾಗಲು ಇದ್ದ ಒಂದೇ ಕರಾರು ಕನ್ನಡ ಅಥವಾ ತಮಿಳುನ್ನು ಕನಿಷ್ಠ ಓದಲು ಬರಬೇಕಿತ್ತು.

ಆ ಕಾಲಘಟ್ಟದಲ್ಲಿ ಅಬ್ದುಲ್‌ ರಹೆಮಾನ್‌ ಎಂಬುವವರು ಶಿವಮೊಗ್ಗ ಜಿಲ್ಲಾಧಿಕಾರಿ.ಇನ್ನು ಸೀನಿಯರ್‌ ಸರ್ಜನ್‌ ಮೆಗ್ಗಾನ್‌ರಿಗಂತೂ ಶಿವಮೊಗ್ಗ ತವರು ಮನೆಯಂತೆ. ಹಾಗಾಗಿ ಇಬ್ಬರೂ ಸೇರಿ ಶಿವಮೊಗ್ಗದ ಶಿವಮೊಗ್ಗದ ನಥಾಲಿಯಾ ಡಿಕಾಸ್ಟ ಎಂಬ ಮೂವತ್ತೆಂಟು ವರ್ಷದ ಒಬ್ಬ ಮಹಿಳೆ ಮತ್ತು ಹತ್ತೊಂಭತ್ತು ವರ್ಷದ ಆಕೆಯ ಮಗಳು ಅನ್ನಾ ಮಾರಿಯಾ ಎಂಬ ಯುವತಿಯಲ್ಲದೆ, ಇನ್ನೊಬ್ಬಳು ಸಬೀನಾ ಡಿಸೋಜಾ ಎಂಬ ಮುಂತಾಗಿ ನಾಲ್ಕೈದು ಮಹಿಳೆಯರನ್ನು ಕಷ್ಟಪಟ್ಟು ತರಬೇತಿಗೆ ಹೋಗಲು ಒಪ್ಪಿಸುತ್ತಾರೆ.

ಮುಂದೆಯೂ ಬಹಳ ಕಾಲ ಹಿಂದೂ, ಮುಸ್ಲಿಂ ಮಹಿಳೆಯರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಇಡೀ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತದೆ. ಇದೆಲ್ಲದರ ಪರಿಣಾಮವಾಗಿ ಹತ್ತೊಂಭತ್ತನೇ ಶತಮಾನದ ಅಂತ್ಯದ ವೇಳೆಗೆ ಸುಮಾರು ಇಪ್ಪತ್ತು ಬ್ರಾಹ್ಮಣ ಹುಡುಗಿಯರೂ ಸೇರಿದಂತೆ ಹಲವು ಹಿಂದೂ ಮತ್ತು ಮುಸ್ಲಿಂ ಹೆಣ್ಣುಮಕ್ಕಳೂ ಮಿಡ್‌ವೈವ್ಸ ಕೆಲಸಕ್ಕೆ ಸೇರಲು ತರಬೇತಿಗೆ ಹೋಗಲು ಸಿದ್ಧರಾಗುತ್ತಾರೆ.ಇದು ಕರ್ನಲ್‌ ಮೆಗ್ಗಾನ್‌ರಂಥ ಮಹನೀಯರು ಸೃಷ್ಟಿಸಿದ ಜಾಗೃತಿಯ ಪರಿಣಾಮ ಅಂದರೆ ಅತಿಶಯೋಕ್ತಿಯಲ್ಲ.ಮಂಗನಕಾಯಿಲೆಯಂತಹ ಹೊಸ ಹೊಸ ಕಾಯಿಲೆಗಳಿಗೆ ಸಿಕ್ಕು ಇಡೀ ಮಲೆನಾಡು ಬಾಡಿ ಬಸವಳಿಯುತ್ತಿರುವ ಈ ಸಂದರ್ಭದಲ್ಲಿ ಅದೇಕೋ ಮೆಗ್ಗಾನ್‌ ದಂಪತಿಗಳು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಜಾತಿ ಆ ದಂಪತಿಗಳನ್ನು ಮತ, ವರ್ಗ ಲಿಂಗಗಳ ಭೇದವಿಲ್ಲದೇ ದೂರ ದೂರದ ಹಳ್ಳಿಗಳಿಗೆ ಹೋಗಿ ಮಲೇರಿಯಾ, ಕಾಲರಾ ರೋಗಗಳ ವಿರುದ್ಧ ಮುಗ್ಧ ಗ್ರಾಮೀಣರ ಸೇವೆ ಮಾಡುತ್ತಿದ್ದ ಆ ದಂಪತಿಗಳನ್ನು ಕನಿಷ್ಠ ನೆನಪಾದರೂ ಮಾಡಿಕೊಳ್ಳದಿದ್ದರೆನಾವು ಕೃಘ್ನರಾಗುವುದಿಲ್ಲವೆ? ಇಂದು ಯಾರಿದ್ದಾರೆ ಅವರಂತೆ ಸೇವೆಗೈಯುವವರು?

ಲೇಖನ : ಡಾ.ಗಜಾನನ ಶರ್ಮ

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW