ತರಣಿ ಕಿರಣವೇರಿ ಸಾಗಿ, ಭರಣಿಯೊಡನೆ ತಾರೆಯಾಗೊ ಕನಸು ಕಾಣುತಾ…ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ಬಿಳಿಯ ಮೋಡ ಜೊತೆಯಲೋಡಿ
ತಳೆದು ಮೇಘದೊಳಗೆ ಹಿಮವು
ಮಳೆಯ ರೂಪದಲ್ಲಿ ಬರುವೆನಿಳೆಯೊಳಿಳಿಯುತಾ
ತೊಳೆದು ಕೊಳೆಯ ಹಸನುಗೊಳಿಸಿ
ತಳಿದು ಬೀಜ ಮಡಿಗಳೊಳಗೆ
ಹೊಳೆದು ಬರುವೆ ಹಸಿರು ತುಂಬಿ ಬಸಿರೊಳುದಿಸುತಾ
ಗಗನ ಭೂಮಿಯೊಂದು ಮಾಡಿ
ನೆಗೆದು ಕುಣಿವೆ ತನನವಾಡಿ
ಜಗವ ಕಾಂಬೆ ಸಗ್ಗದಿಂದ ಬಗ್ಗಿ ನೋಡುತಾ
ಬಿಗುವ ತೊರೆದು ಗಿಡಗಳಲ್ಲಿ
ನಗುತ ಬರುವೆ ಕುಸುಮವಾಗಿ
ಹಗುರವಾಗಿ ಗಂಧ ಸೂಸಿ ನಾಕ ಸೇರುತಾ
ಗುರಿಯನಿರಿಸಿ ಚಿತ್ತದೊಳಗೆ
ತರಣಿ ಕಿರಣವೇರಿ ಸಾಗಿ
ಭರಣಿಯೊಡನೆ ತಾರೆಯಾಗೊ ಕನಸು ಕಾಣುತಾ
ಸರಿದು ನೀಲ ಪರದೆಯಾಚೆ
ಹರಿಯ ಚರಣ ಸೇವೆಗೊದಗಿ
ಮರಣ ಸಮಯಕೊದಗಲೆಂದು ಪೂಜೆ ಮಾಡುತಾ
ಪರಮ ಪದವ ಬಯಸಿ ನಾನು
ಕರದಿ ಹರನ ಲಿಂಗವಿರಿಸಿ
ಭರದಿ ಧವಳ ಪುಷ್ಪವಿಟ್ಟು ಬೇಡಿಕೊಳ್ಳುವೆ
ಕರವ ಮುಗಿವೆ ದೇವ ನಿನಗೆ
ತೆರೆದು ತೋರು ಮುಕ್ತಿ ಪಥವ
ಬರುವೆ ನಾನು ಬಳಿಗೆ ನಿನ್ನೊಳೈಕ್ಯವಾಗುವೆ
- ಬಿಟ್ಟೀರ ಚೋಂದಮ್ಮ, ಬೆಂಗಳೂರು

ಸೊಗಸಾದ ಪದ್ಯ ಮತ್ತೆ ಮತ್ತೆ ಓದಬೇಕಿನಿಸುತ್ತಿದೆ.