‘ರೋಗಿಗೆ ಗೊತ್ತಾಗದ ಹಾಗೆ ಆತನ ಕಿಡ್ನಿ ತಗೆದುಕೊಳ್ಳುವ ವೈದ್ಯ ಕಲಿತವನಲ್ಲವೆ?, ಸರ್ಕಾರಿ ಕೆಲಸ ಮಾಡಲು ಲಂಚ ಕೇಳುವ ಅಧಿಕಾರಿ ಕಲಿತವನಲ್ಲವೆ?…ಹಾಗಿದ್ದಾಗ ದೇಶ ಹಾಳಾಗುವುದು ಯಾರಿಂದ??? ಅನಕ್ಷರಸ್ಥರಿಂದಲೋ ಅಥವಾ ಬುದ್ದಿವಂತರಿಂದಲೋ ಒಮ್ಮೆ ಯೋಚಿಸಿ’ – ಯುವ ಲೇಖಕ ವಿಕಾಸ್. ಫ್. ಮಡಿವಾಳರ ಅವರ ಒಂದು ಚಿಂತನ ಲೇಖನ ಓದುಗರ ಮುಂದಿದೆ…ತಪ್ಪದೆ ಓದಿ…
“ದೇಶ ಹಿಂದುಳಿಯಲು ಅನಕ್ಷರಸ್ಥರು ಕಾರಣರಲ್ಲ. ಬುದ್ದಿವಂತ ಮೋಸಗಾರರು ಕಾರಣ” ಡಾ. ಗುರುರಾಜ್ ಕರಜಗಿಯವರು ಒಂದು ಸಂದರ್ಶನದಲ್ಲಿ ಹೇಳಿದ ಮಾತಿದು. ಗುರುರಾಜ್ ಕರಜಗಿಯವರ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ಅವರ ಸರಳ ವ್ಯಕ್ತಿತ್ವವೆ ಅವರ ಬಗ್ಗೆ ತಿಳಿ ಹೇಳುತ್ತದೆ. ತಮ್ಮ ನೀತಿ ಕಥೆಗಳಿಂದ ಕನ್ನಡಿಗರ, ಕಲಾ ಪ್ರೇಮಿಗಳ ಹಾಗೂ ಸಣ್ಣ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ಅವರ ಕತೆ ಭಾಷಣಗಳನ್ನು ಕೇಳದ ವ್ಯಕ್ತಿಯಿಲ್ಲ. ಅವರ ಮಾತಿಗೆ ತಪ್ಪು ದಾರಿ ಹಿಡಿದಿದ್ದ ಅದೆಷ್ಟೊ ಯುವಕರು ಬದಲಾಗಿದ್ದಾರೆ. ಹಾಗೆ ಬದಲಾದ ಯುವಕರಲ್ಲಿ ನಾನು ಒಬ್ಬ.
ದೇಶದ ಬೆಳವಣಿಗೆಗೆ ಬುನಾದಿಯೆಂದರೆ ಅದು ಬುದ್ದಿವಂತರು ಎಂಬ ವಾಡಿಕೆ ಇದೆ. ಯಾವುದೆ ಕೆಲಸವಿದ್ದರು ಅಲ್ಲಿ ನಮ್ಮ ಬುದ್ದಿವಂತಿಕೆ ಪಾತ್ರ ವಹಿಸುತ್ತದೆ. ಗೌತಮ್ ಅದಾನಿ ಬುದ್ದಿವಂತನಾಗಿರದಿದ್ದರೆ ಶ್ರೀಮಂತ ವ್ಯಕ್ತಿಯಾಗುತ್ತಿದ್ದರೆ? ಅಂಬಾನಿ ತಮ್ಮ ಜಿಯೊ ಸಿಮ್ ಫ್ರಿ ಮಾಡದಿದ್ದರೆ ಭಾರತದಲ್ಲಿ ಅದರ ಬಗ್ಗೆ ಯಾರು ಮಾತಾಡುತ್ತಿರಲಿಲ್ಲ. ನಂದರನ್ನು ಸೋಲಿಸಿ ಭಾರತಖಂಡಕ್ಕೆ ಮೌರ್ಯ ಸಾಮ್ರಾಜ್ಯ ಕಟ್ಟಲು ನೇರವಾದ ಚಾಣಕ್ಯನನ್ನು ನಾವು ಗುರುತಿಸುವುದು ಅವನ ನೀತಿ ಮತ್ತು ಬುದ್ದಿವಂತಿಕೆಗೆ. ಅವರೆಲ್ಲ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಲು ಬುದ್ದಿಯನ್ನು ಉಪಯೋಗಿಸಿದ್ದಾರೆ.
ಫೋಟೋ ಕೃಪೆ : google
2011 ರ ಅಂಕಿ ಅಂಶಗಳ ಪ್ರಕಾರ ಭಾರತದ ಸಾಕ್ಷರತೆ 74.04% ವಿದೆ. ಇಷ್ಟಿದ್ದರು ಭಾರತವು ಇನ್ನೂ ಮುಂದುವರೆಯುತ್ತಿರುವ ದೇಶವಾಗಿದೆ. ಕೆಲ ಹಿತೈಷಿಗಳು, ದೇಶ ಆಳುವವರು ಇದಕ್ಕೆ ಕಾರಣ 25.96% ಇರುವ ಅನಕ್ಷರಸ್ಥರು ಎಂದು ಹೇಳುತ್ತಾರೆ. ಕೆಲ ಜನನಾಯಕರು ಈ ಅಂಶವನ್ನು ಎತ್ತಿ ಹಿಡಿಯುತ್ತಾರೆ. ಆದರೆ ಈ ಮಾತು ಸತ್ಯವೆಂದು ಹೇಳಲಾಗುವುದಿಲ್ಲ. ಅನಕ್ಷರಸ್ಥರಿಂದ ದೇಶಕ್ಕೆ ಕೆಲ ದೃಷ್ಟಿಕೋನದಲ್ಲಿ ಹನಿಯಾಗಬಹುದು ಆದರೆ ಅನಕ್ಷರಸ್ಥರಿಂದಲೆ ದೇಶ ಹಾಳಾಗುತ್ತದೆ ಎಂದು ದೂರುವುದು ತಪ್ಪು.
ಒಬ್ಬ ಅನಕ್ಷರಸ್ಥ ಅಮಾಯಕ ಯುವಕನಿದ್ದಾನೆಂದು ಭಾವಿಸೋಣ. ಸರಿ ತಪ್ಪು ಏನೆಂದು ತಿಳಿಯದ ಆ ವ್ಯಕ್ತಿಗೆ ಹಸಿವು ನೀಗಿಸಲಾಗದಷ್ಟು ಬಡತನ. ಆತನಿಗೆ ದುಡ್ಡು ಕೊಟ್ಟು ಏನು ಕೆಲಸ ಮಾಡೆಂದರು ಮಾಡಿಬಿಡುತ್ತಾನೆ. ಒಬ್ಬ ಅಮಾಯಕನನ್ನು ಒಳ್ಳೆಯ ದಾರಿಗೆ ತರುವುದು ಬಿಡುವುದು ಆತನನ್ನು ಉಪಯೋಗಿಸಿಕೊಳ್ಳುತ್ತಿರುವ ಬುದ್ದಿವಂತ ಯಜಮಾನನ ಮೇಲಿರುತ್ತದೆ. ಆತ ಅವನನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸಬಹುದು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಡ್ರಗ್ ಪ್ಯಾಕೆಟ್ಅನ್ನು ಕೊಟ್ಟು ಒಂದು ಕಡೆ ಸಾಗಿಸು ಅಂತ ಹೇಳಿದಾಗ ಅದರಲ್ಲೇನಿದೆ ಎಂದು ತಿಳಿಯದ ವ್ಯಕ್ತಿ ಆ ಕೆಲಸ ಮಾಡಲೆಬೇಕು. ಆಸ್ತಿ ಪತ್ರಕ್ಕೆ ಸಹಿ ಹಾಕು ಎಂದಾಗ ಓದು ಬರಹ ತಿಳಿಯದ ಅನಕ್ಷರಸ್ಥ ಅದರಲ್ಲೇನು ಬರೆದಿದೆ ಎಂದು ತಿಳಿಯದೆ ಸಹಿ ಹಾಕುತ್ತಾನೆ. ತಮ್ಮ ಕಟು ಭಾಷಣದಿಂದ ಅಮಾಯಕ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ಕೊಲೆ ಮಾಡಿಸಬಹುದು. ಹಾಗಿದ್ದರೆ ಈ ಎಲ್ಲ ಪ್ರಸಂಗದಲ್ಲಿ ಯಾರು ಕೆಟ್ಟವರು? ಅನಕ್ಷರಸ್ಥ ಅಮಾಯಕರೊ, ಇಲ್ಲ ಬುದ್ದಿವಂತ ಮೋಸಗಾರರೊ.
ಫೋಟೋ ಕೃಪೆ : Alamy
ಒಮ್ಮೆ ಯೋಚಿಸಿ ರೋಗಿಗೆ ಗೊತ್ತಾಗದ ಹಾಗೆ ಆತನ ಕಿಡ್ನಿ ತಗೆದುಕೊಳ್ಳುವ ವೈದ್ಯ ಕಲಿತವನಲ್ಲವೆ. ರೋಗಿಗೆ ಏನಾಗಿದೆ ಒಂದು ನಿಕರವಾಗಿ ಗೊತ್ತಿದ್ದರು ಆ ಟೆಸ್ಟು ಈ ಟೆಸ್ಟು ಅಂತ ರೋಗಿಯ ಜೇಬನ್ನು ಕಾಲಿ ಮಾಡುವ ವೈದ್ಯ ಕಲಿತವನಲ್ಲವೆ. ಸರಕಾರದಿಂದ ದುಡ್ಡು ಬರುತ್ತಿದ್ದರು ಸರ್ಕಾರಿ ಕೆಲಸ ಮಾಡಲು ಲಂಚ ಕೇಳುವ ಅಧಿಕಾರಿ ಕಲಿತವನಲ್ಲವೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಎಂದು ಭಾಷಣ ಹೊಡೆದು ಒಳಗೊಳಗೆ ಪ್ರಜೆಗಳ ದುಡ್ಡನ್ನು ಲೂಟಿ ಮಾಡುವ ರಾಜಕಾರಣಿ ಬುದ್ದಿವಂತನಲ್ಲವೆ. ಇವರುಗಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಹೊರತು ಅನಕ್ಷರಸ್ಥರಲ್ಲ. ದೇಶದ ಪ್ರಗತಿಗೆ ಬುದ್ದಿವಂತ ಮೋಸಗಾರರು ಮುಳುವಾಗಿದ್ದಾರೆ ಹೊರತು ಅಮಾಯಕ ಅನಕ್ಷರಸ್ಥರಲ್ಲ. ಹಾಗಾಗಿ ನಮ್ಮ ದೇಶ ಹಿಂದುಳಿಯಲು ಅನಕ್ಷರಸ್ಥರು ಕಾರಣವೆಂಬುದು ಶುದ್ಧ ಸುಳ್ಳಾಗಿದೆ.
ಇಂತಿ ನಿಮ್ಮ ಪ್ರೀತಿಯ..
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ