ಚಿತ್ತದ ಧ್ಯಾನಕ್ಕೆ ಮಾತು ಮೌನವಾಯಿತು, ಬೀಜ ಮಂತ್ರವಾಯಿತು…ಕವಿ ಪದ್ಯಾಣ ಗೋವಿಂದ ಭಟ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ….
ಮಣ್ಣಿನೊಳಗಣ ಮೌನ
ಘ್ರಾಣಕ್ಕೆ ಪ್ರಾಣವಾಗಿ
ಸುಖಕ್ಕಾಗಿ ಕಣ
ಕಣದಲ್ಲಿ ಅರಳುತ್ತ-
ಕೆರಳುತ್ತ, ಹೊರಳಿ
ಘಮಘಮಿಸಿ
ಗಂಧವಾಯಿತು.
*
ನೀರೊಳಗಣ ಮೌನ
ತೆರೆದಲೆಗಳಲಿ ತೇಲುತ್ತ
ತೇಲುತ್ತ ದಡದ ಮರಳ ಚುಂ
ಬನದ ಪುಳಕದಲಿ
ರಸವಾಯಿತು.
*
ಬೆಂಕಿಯೊಳಗಣ ಮೌನ
ಪಾಪಿಯಂತೆ ಉರಿದುರಿದು
ಬೇಯುತ್ತ ಪವಿತ್ರವಾಗಿ
ಬೂದಿ ರಾಶಿಯಲಿ
ಬೆಳಕಾಗಿ ಹೊಳೆಯಲು
ಬಿಸಿಯಾಯಿತು.
*
ಗಾಳಿಯೊಳಗಣ ಮೌನ
ಉಸಿರಾಗಿ ಹಸಿರಾಗಲು
ಜಡ-ಜಂಗಮರ ನಡುವೆ
ಮೂಗಾಯಿತು.ಎದೆಯ
ಗೂಡಾಯಿತು.
ರೂಪವಿಲ್ಲದ ಸ್ಪರ್ಶವಾಯಿತು.
*
ಆಕಾಶದೊಳಗಣ ಮೌನ
ಓಂಕಾರದ ಸ್ವರವಾಗಲು
ಪುಣ್ಯಪದವಾಗಿ-ಶಬ್ದಕ್ಕೆ
ಮೈಯೊಡ್ಡಿ,ಕರ್ಣ
ಕುಹರದ ಸುಳಿ
ಗಳಲ್ಲಿ ಸುಳಿದಿಳಿದು
ನಿರಾಕಾರವಾಯಿತು.
*
ಅಕ್ಷರಗಳೊಗಣ ಮೌನ
ಪದ ಸಂಕೇತಕ್ಕೆ
ಬಳಪ-ಕಾಗದಗಳಲ್ಲಿ
ತಿದ್ದಿ ತೀಡುತ್ತ ಗೆರಗಳ
ಚಿತ್ತಾಗಿ,ಚಿತ್ರವಾಯಿತು.
*
ಮೌನದೊಳಗಣ ಮೌನ
ಅರಿವಾಗಲು ಹವಣಿಸುತ
ನಾಲಿಗೆಯ ಬೇಲಿಯಲಿ
ಸಿಕ್ಕುಸಿಕ್ಕಾಗಿ ಹೊಕ್ಕುಳಲಿ
ಸ್ವರವಾಯಿತು.
*
ಮಾತೊಳಗಣ ಮೌನ
ಶಬ್ದದ ಜಾಡಿನಲ್ಲಿ
ತೆವಳುತ್ತ-ಕಿವಿಯ ತಿರುವುಗಳ
ಸುಳಿ ಸುಳಿದು
ಬಳಲಿ ಸುಮ್ಮನಿದೆ.
*
ಬೀಜದೊಳಗಣ ಮೌನ
ಚಿಗುರ ಕಣ್ಣ
ಪಿಳಿ ಪಿಳಿ ಬಿಟ್ಟು
ಆಗಸದ ಅಗಲವನಳೆಯಿತು.
*
ದೇವನೊಳಗಣ ಮೌನ
ಆಕಾರ ಕಾಣಲು-ಕಣ್ಣಾಗಲು
ಬೆಳಕ ಬೀಜಕ್ಕೆ ಬೇರಾಗಿ
ನೆಲದೊಳಗಿಳಿದು
ಬೇಯುತ್ತ,ನೀರ ಹುಡುಕುತ್ತ
ಉಸಿರಾಡಿ,ಹಸುರಾಗಿ
ಓಂಕಾರವಾಯಿತು.
*
ಚಿತ್ತದ ಧ್ಯಾನಕ್ಕೆ
ಮಾತು ಮೌನವಾಯಿತು.
ಬೀಜ ಮಂತ್ರವಾಯಿತು.
- ಪದ್ಯಾಣ ಗೋವಿಂದ ಭಟ್ (ಪದ್ಯಾಣ)
