ಕವಿಯತ್ರಿ ರುದ್ರಾಗ್ನಿ ಶ್ರುತಿ ಮಧುಸೂದನ್ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಹುಶಃ ಹೀಗೆ
ನೆಮ್ಮದಿಯಾಗಿ
ಮಡಿಲ ಮೇಲೆ ಮಗುವಾಗಿ
ಮಲಗುವಾಸೆಯೊಂದಿತ್ತು…
ಉಸಿರು ಬೆರೆಸಿ
ಮೈ ಬಾಗಿಸಿ
ನೀರೆರದು ನಿಶ್ಚಿಂತೆಯಿಂದ
ಕೂತವಳ
ಕೈ ಬಳೆಗಳ ಸದ್ದು ಕೇಳುತ್ತಾ
ಬೆಳೆದ ಕೂಸುಗಳು,
ಅವ್ವ ಬೆಳೆಸಿದ ಅದೇ
ಹಸಿರು ಮರಗಳ ಸಾಲುಗಳೇ…!
ಆ ಸಾಲು ಮರದ
ಮಕ್ಕಳ ಮಮತೆಗೆ
ಮೌನಾಚರಣೆಯ ಪದವೂ
ಮೌನ ತಾಳಿ
ಈ ಕವಿತೆ ಮಡಿಲ ಪಾಲಿಗೆ
ಶೋಕಾಚರಣೆ….!
ಅವ್ವ…
ನೀ ಮಣ್ಣಾದರೂ ಹಸಿರೇ
ನೀ ಮರವಾಗಿ
ನೆರಳಾಗಿ
ನೆರವಾಗಿ
ಈ ಜೀವರಾಶಿಗಳಿಗೆ
ಸದಾ ಜೀವ ನೀಡುವ ಉಸಿರೇ…
ಇಂತಿ
- ರುದ್ರಾಗ್ನಿ ಶ್ರುತಿ ಮಧುಸೂದನ್
