ತುರ್ಕಿಯ ಮಹಾಕವಿ ನಾಜೀ಼ಮ್ ಹಿಕ್ಮತ್ ಅವರ ಒಂದು ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಕೇಶವ ಮಳಗಿ ಅವರು, ಮುಂದೆ ಓದಿ…

* ನಾಜೀ಼ಮ್ ಹಿಕ್ಮತ್ (ತುರ್ಕಿಯ ಮಹಾಕವಿ)
*
ಈಗ ಏನಾಗುತಿದೆ,
ಮುಂದೆ ಏನಾಗಲಿದೆ,
ಎಂದು ಅರಿಯಲು-
ಪುಸ್ತಕಗಳಲಿ, ಬೀದಿಗಳಲಿ
ಅವ್ವನ ಜೋಗುಳದ ಹಾಡಿನಲಿ,
ಉದ್ಘೋಷಕರ ಸುದ್ದಿಗಳಲಿ
ಸುಳ್ಳುಗಳ ವಿರುದ್ಧ
ಎದೆಯಾಳದಲಿ ಸೆಣೆಸುವುದು
ಮನಕೆ ಮುದವನೇ ನೀಡುವುದು ನನ್ನ #ಒಲವೇ!
*
ನಮ್ಮ ರಟ್ಟೆಗಳು ಹಣ್ಣುಗಳ ಭಾರದಿಂದ
ತೊನೆಯುತಿರುವ ಕೊಂಬೆಗಳು;
ನಮ್ಮನು ಅಲುಗಿಸುತಲೇ ಇರುವ ಎದುರಾಳಿ.
ಹಣ್ಣುಗಳನು ಸುಗ್ಗಿ ಮಾಡಲಿಂದು ಸಕಾಲ
ಅವರು ಸಂಕೋಲೆ ತೊಡಿಸುವುದು
ನನ್ನ ಕಾಲುಗಳಿಗಲ್ಲ,
ನಮ್ಮ ಮನಸಿಗೆ.
*
ನೀನು ನನ್ನ ಹೊರೆ ಮತ್ತು ಮುಕ್ತಿ
ಬೇಸಿಗೆಯ ಇರುಳ ಧಗೆಯಂತೆ
ಮೈಯೆಲ್ಲ ಸುಡುತಿದೆ,
ನೀನೆಲ್ಲ ದೇಶ!
ಕೆಂಗಂದು ಕಣ್ಣು,
ನೀಲಿ ಬಣ್ಣದ ಚೆಲುವು
ನೀನು ಮೋಹಕ, ಬಲು #ಸೊಗಸು,
ಕೆಚ್ಚೆದೆಯ ಸೆಳೆತ.
ನೀನು ಎಂದಿಗೂ
ಕೈಗೂಡದ
ನನ್ನ #ಬಯಕೆ!
ಕನ್ನಡಕ್ಕೆ ಅನುವಾದ : ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು), ಬೆಂಗಳೂರು
