‘ನಾನೇ ಶಾಶ್ವತ’ ಎನುವ ಅಹಂನ ಒಲ್ಲದ ಹೊರೆ ಹೊತ್ತು ತೊಳಲಾಡುವೇಕೆ ನರಮಾನವ?… ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಇಹ-ಪರಗಳೆರಡು ಲೋಕದಳುಂಟು
ಜನನವಂತು ಕೇಳಿ ಪಡೆದುದಲ್ಲ
ಬಿಡದ ಮರಣವೂ…ಕೂಡ
ಆದಿ ಅಂತ್ಯಗಳ ನಡುವಿನ
ಬದುಕಿನ ಪಯಣ ಸಾಗಿಸಲು
ಹೊರಬಾರದ ಹೊರೆ ಹೊತ್ತು
ಪಡಬಾರದ ವ್ಯಥೆಪಟ್ಟು
ಚಿಂತೆಯೆಂಬ ನರಕದೊಳು
ನರಳಾಡುವೇಕೆ ನರಮಾನವ?
ಸೃಷ್ಠಿಯೊಳಗಿನ ಜೀವ
ನೀರ ಮೇಲಿನ ಗುಳ್ಳೆಯಂತೆ!
ಶುಭರಾತ್ರಿ ಹೇಳಿ ಮಲಗಿದವ
ನಸುಕು ಮುಂಜಾನೆಯೊಳಗೆ
ಚಿರ ನಿದ್ರೆಗೆ ಜಾರಿರುವುದನು
ಕಣ್ಣೆದುರು ಕಂಡಿರುವ ನೀನು
‘ನಾನೇ ಶಾಶ್ವತ’ ಎನುವ ಅಹಂನ
ಒಲ್ಲದ ಹೊರೆ ಹೊತ್ತು
ತೊಳಲಾಡುವೇಕೆ ನರಮಾನವ?
ಅವಲೋಕಿಸಿ ನೋಡು
ಬಿಸಿಲಲಿ ನಿನ ನೆರಳು ನಿನ ಹಿಂದೆ
ತಂಪಾದರೆ ಅದು ಕೂಡ ಬಾರದು!
ಇದನರಿಯದ ನೀನು
ಜಗವೆ ನನ ಹಿಂದೆ ಎನುವ
ಭ್ರಮೆಯಲಿ ತೇಲಿ ಮೆರೆವೆ
ಸಮಯ ವಾಸ್ತವಕೆ ಸರಿದಾಗ
ಕಗ್ಗಂಟಿನ ಹೊರೆ ಹೊತ್ತು
ಗೋಳಾಡುವೇಕೆ ನರಮಾನವ?
ಪೊಡವಿಯ ಮೇಲಿನ
ಮೂರೇ ದಿನದ ಜಾತ್ರೆಯನು
ಮಗುವಂತೆ ಸಂಭ್ರಮಿಸಬೇಕೆ?
ಸುಟ್ಟುಬಿಡು ‘ನಾನೇ’ ಎಂಬ ಅಹಂನು
ಕಟ್ಟಿಬಿಡು ಬಯಕೆಗಳ ಮೂಟೆಯನು
ಜಟ್ಟಿಯಾಗಿ ನಿಂತು ಮೆರೆಸಿಬಿಡು
ಮಾನವೀಯತೆಯನು
ನರಳಾಡುವುದನು ಮರೆತು
ನಲಿದಾಡು ನರಮಾನವ ನಲಿದಾಡು
- ಡಿ.ಶಬ್ರಿನಾ ಮಹಮದ್ ಅಲಿ – ಶಿಕ್ಷಕಿ, ಚಳ್ಳಕೆರೆ.
