‘ರಾಮ ರಾಜ್ಯ’ ಕವನ –  ರವಿನಾಗ್ ತಾಳ್ಯ

ನೆಲೆಯಾಗಿ ಬಿಡು ರಾಮ… ದುರ್ಬುದ್ಧಿಯ ಕೊಂದುಬಿಡು ರಾಮ…ಬಂಧಿಯಾಗದಿರು ರಾಮ…ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ಅರಳಿದ ಶ್ರೀರಾಮನ ಜಪವನ್ನು ತಪ್ಪದೆ ಮುಂದೆ ಓದಿ…

ಬಂಧಿಯಾಗದಿರು ರಾಮ
ಮಂದಿರದ ಗೋಡೆಗಳಲ್ಲಿ
ನಿಂದುಬಿಡು ರಾಮ
ಭಾರತೀಯರ ಮನೆ ಮನಗಳಲ್ಲಿ

ದೋಚುವ ದೊರೆಗಳಲ್ಲಿ
ಕಾಮಾಸುರರ ಕಂಗಳಲ್ಲಿ
ಸುಳ್ಳಿನ ನಾಲಿಗೆಗಳಲ್ಲಿ
ಬಕಾಸುರ ನುಂಗಣ್ಣಗಳಲ್ಲಿ

ನೆಲೆಯಾಗಿ ಬಿಡು ರಾಮ
ದುರ್ಬುದ್ಧಿಯ ಕೊಂದುಬಿಡು ರಾಮ
ಮನ ಬಿಳಿ ಮಾಡಿಬಿಡು ರಾಮ
ನಿನ್ನಾಳ್ವಿಕೆ ತಂದುಬಿಡು ರಾಮ

ಪತಿವ್ರತೆ ಸೀತೆಯರ ಪಾವಿತ್ರ್ಯದಲ್ಲಿ
ಪತಿ ವಿರಾಗಿನಿ ಊರ್ಮಿಳೆಯರಲ್ಲಿ
ನಿನಗಾಗಿ ಕಾಯ್ವ ಶಬರಿಯರಲ್ಲಿ
ಇಂದ್ರಜಾಲಕೆ ಕಲ್ಲಾದ ಅಹಲ್ಯೆಯರಲ್ಲಿ

ಸಾಯುತಿರುವ ಸತ್ಯದಲ್ಲಿ
ಸಾತ್ವಿಕರ ವನವಾಸದಲ್ಲಿ
ಅಳಿಲು ಸೇವೆಯ ಭಕ್ತರಲ್ಲಿ
ನಿನ್ನನ್ನೇ ಜಪಿಸುವ ಹನುಮರಲ್ಲಿ

ನೆಲೆಯಾಗಿ ನೀನಿರಬೇಕು ರಾಮ
ಭಕುತಿಗೆ ನಿನ್ನ ಸೋಲಾಗಬೇಕು ರಾಮ
ಒಳಿತಿಗೆ ಯಶ ನೀ ತರಬೇಕು ರಾಮ
ಕಡುಕಷ್ಟ ಕರ್ಮ ನೀ ಕರಗಿಸಬೇಕು ರಾಮ

ತಲೆಕೆಡಿಸುವ ಮಂಥರೆಯರಲ್ಲಿ
ಕುಟಿಲತೆಯ ಕೈಕೇಯಿಯರಲ್ಲಿ
ತಂದಿಡುವ ಶೂರ್ಪನಖಿಯರಲ್ಲಿ
ಕಪಟದ ಸುಬಾಹು ಮಾರೀಚರಲ್ಲಿ

ವೃದ್ಧಾಪ್ಯದಿ ಹೆತ್ತವರ ಕಡೆಗಣಿಸಿ
ನಿಂದಿಸಿ ಹೊರ ತಳ್ಳುವ ಸುತರಲ್ಲಿ
ಧನ ಕನಕ ಮತ ಮದಿರೆಯ ಮತ್ತೇರಿಸಿ
ಮತ ಸೆಳೆದು ಸುಲಿಯುವ ನೇತಾರರಲ್ಲಿ
ಬದಲಾವಣೆ ತರಬೇಕು ರಾಮ

ತಪ್ಪುಗಳ ನೀ ತಿಳಿಸಬೇಕು ರಾಮ
ಕೇಡಿಗೆ ಕೇಡಾಗಬೇಕು ರಾಮ
ಒಳಿತಿಗೆ ಒಳಿತಾಗಬೇಕು ರಾಮ
ಅಣ್ಣನ ಅನುಸರಿಸುವ ಲಕ್ಷ್ಮಣರಲ್ಲಿ

ಕೊಟ್ಟ ಪಟ್ಟ ಅಣ್ಣಗೆ ಕಾದಿಟ್ಟ ಭರತರಲ್ಲಿ
ತಮ್ಮನಿಗೆ ಕೇಡೆಸಗುವ ವಾಲಿಯರಲ್ಲಿ
ಧರ್ಮದ ಪರ ನಿಲ್ಲುವ ವಿಭೀಷಣರಲ್ಲಿ

ಧರೆಯುರಿಯುತಿರೆ ನಿದ್ರಿಸುವ ಕುಂಭಕರ್ಣರಲ್ಲಿ
ಅಪ್ಪನ ತಪ್ಪು ಹಾದಿಯ ಮೇಘನಾದರಲ್ಲಿ
ಹೆಣ್ಣಾಸೆಗೆ ಜೀವ ಬಿಟ್ಟ ರಾವಣರಲ್ಲಿ
ಹೆಣ್ಣಿನ ರಕ್ಷಣೆಗೆ ನಿಂತ ಜಟಾಯುವಿನಲ್ಲಿ

ಎಲ್ಲರೊಳು ನೀನೇ ನೆಲೆಯಾಗು ರಾಮ
ಕೊಳೆ ಮನಸುಗಳ ತಿಳಿ ಮಾಡು ರಾಮ
ಜ್ಞಾನಾಮೃತ ಹೊಳೆಯ ನೀ ಹರಿಸು ರಾಮ
ಸನ್ಮಾರ್ಗವೆ ಭಾರತವಾಗಿರಲಿ ರಾಮ

ಸುಳಿದಾಡು ರಾಮ ಕುಣಿದಾಡು ರಾಮ
ಭಾರತದ ಉದ್ದಗಲ ನೀನಾಳು ರಾಮ
ಜಗಕೆಲ್ಲ ಜನಕೆಲ್ಲ ತಿಳಿವಾಗು ರಾಮ
ಜಗವೆ ನೀನಾಗಿ ಜಗವಾಳು ರಾಮ


  •  ರವಿನಾಗ್ ತಾಳ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading