‘ಹಲವೊಂದು ಸಲ ಮೌನ ಕೆಲವೊಂದು ಸಲ ಮಾತು, ಬರೆಯೆಳೆದ ಗಾಯಗಳೆ ಮನಸಿನೊಳಗೆಲ್ಲ’…ದಿವಾಕರ ಡೋಂಗ್ರೆ ಎಂ ಅವರ ಲೇಖನಿಯಲ್ಲಿ ಅರಳಿದ ಭಾವನಾತ್ಮಕ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬರುವವರು ಬರಲೆಂದು ತೆರೆದಿಟ್ಟೆ ಬಾಗಿಲನು
ಇದ್ದರೊಂದಷ್ಟು ದಿನ ಸಂಭ್ರಮದಿ ಜತೆಗೆ
ಹೊರಟು ಹೋಗುವ ಮುನ್ನ ಮಾತೊಂದ ತಿಳಿಸದೆಯೆ
ಹೊರಟು ನಿಂತಿಹ ಪರಿಗೆ ಬೆರಗುಗೊಂಡಿರುವೆ.
ನಾನು ನಿನಗೆಂದೆನುವ ನೀನು ನನಗೆಂದೆನುವ
ಒಪ್ಪಂದವಿರಲಿಲ್ಲ ಲಿಖಿತ ರೂಪದೊಳು
ಎಂತೊ ಹೇಗೋ ಏನೊ ಬಾಳ್ವೆ ಸಾಗುತಲಿತ್ತು
ಬೇಕೊ ಬೇಡವೊ ಅನುವ ಮಾತೊಂದು ಇರದೆ.
ಹಲವೊಂದು ಸಲ ಮೌನ ಕೆಲವೊಂದು ಸಲ ಮಾತು
ಬರೆಯೆಳೆದ ಗಾಯಗಳೆ ಮನಸಿನೊಳಗೆಲ್ಲ
ಹರಿದ ಕಂಬನಿಯೆಲ್ಲ ಒಡೆದ ಮುತ್ತುಗಳಾಗಿ
ಕಟ್ಟಲಾಗಲೆ ಇಲ್ಲ ಚೆಲುವ ಹಾರವನು.
ಒಂದಷ್ಟು ದಿನ ಜತೆಗೆ ಇದ್ದ ಪರಿಗಾದರೂ
ತಿಳಿಸಿ ಕಾರಣವೊಮ್ಮೆ ತೆರಳ ಬಹುದಿತ್ತು
ಸದ್ದಿಲ್ಲದೆಯೆ ಹೀಗೆ ಕಳ್ಳ ಬೆಕ್ಕಿನ ತೆರದಿ
ಮಾಯವಾಗಿಹ ಪರಿಯು ಎಣಿಸಲಸದಳವು.
- ದಿವಾಕರ ಡೋಂಗ್ರೆ ಎಂ
