ಯಶಸ್ವಿ ಬದುಕಿಗೆ ಸಮಯಪ್ರಜ್ಞೆ ಮುಖ್ಯವಾಗುತ್ತದೆ. “ನಾಳೆ ಮಾಡುವುದನ್ನು ಇಂದು ಮಾಡು ಇಂದು ಮಾಡುವುದನ್ನು ಈಗಲೇ ಮಾಡು” ಎಂಬ ದಾಸವಾಣಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರಮಯವಾಗುತ್ತದೆ. ಲೇಖಕಿ ಶಾರದಾ ಶ್ರಾವಣಸಿಂಗ್ ರಜಪೂತ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಸರಿಯಾದ ಸಮಯದಲ್ಲಿ ಕ್ರಮಬದ್ಧತೆಯನ್ನು ವ್ಯವಸ್ಥಿತವಾಗಿ ಜವಾಬ್ದಾರಿಯುತವಾಗಿ ವ್ಯವಹರಿಸಿ ಕೊಂಡು ಹೋಗುವಂತದ್ದಕ್ಕೆ ನಾವು ‘ಸಮಯಪ್ರಜ್ಞೆ’ ಎಂದು ಹೇಳಬಹುದು. ವಾಸ್ತವದ ದೃಷ್ಟಿಕೋನವನ್ನು ಇರಿಸಿಕೊಂಡು ಯೋಚನೆ ಮಾಡಿ ಯಾವುದೇ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿಗೆ ‘ಸಮಯ’ ಅದೃಷ್ಟ ಅಥವಾ ಅವಕಾಶವಾಗಿ ಬದಲಾಗುತ್ತದೆ. ತಮ್ಮ ಯಾವುದೇ ಆಲೋಚನೆಗಳನ್ನು ಕ್ರಿಯೆಗೆ ಇಳಿಸುವಾಗ ‘ವಸ್ತುನಿಷ್ಠತೆ’ಯಲ್ಲಿ ಮುಂದುವರೆದಾಗ ಅದಕ್ಕೆ ಪೂರ್ವಸಿದ್ಧತೆ, ಪ್ರಾಮಾಣಿಕ ಪ್ರಯತ್ನ ಮತ್ತು ಸಮಯ ಪಾಲನೆ ತುಂಬಾ ಮಹತ್ತರವಾಗಿದೆ. ಇದರಿಂದ ಸಾಕಷ್ಟು ಯಶಸ್ವಿ ಜೀವನವನ್ನು ವ್ಯಕ್ತಿ ಕಟ್ಟಿಕೊಳ್ಳಬಹುದು.
“ನಾಳೆ ಮಾಡುವುದನ್ನು ಇಂದು ಮಾಡು ಇಂದು ಮಾಡುವುದನ್ನು ಈಗಲೇ ಮಾಡು” ಎಂಬ ದಾಸವಾಣಿ ದೈನಂದಿನ ಜೀವನದಲ್ಲಿ ಅವರ ಕೆಲಸಕ್ಕೆ ಅವರ ಸಮರ್ಪಣ ಭಾವವನ್ನು ತೋರಿಸುತ್ತದೆ. ನಾವಿಟ್ಟುಕೊಂಡ ಗುರಿಗಳು ತ್ವರಿತಗತಿಯತ್ತ ಸಾಗಬೇಕಾದರೆ ಸಮಯ ಪ್ರಜ್ಞೆ ತುಂಬಾ ಅಗತ್ಯವಾಗಿದೆ. ಇದಕ್ಕಾಗಿ ಯಾವುದೇ ಬೆಲೆ ತೆತ್ತಾದರೂ ಅದನ್ನು ಆ ನಿಗದಿತ ಸಮಯದಲ್ಲಿ ಸಾಧಿಸುವುದು ನಾವು ನಮ್ಮ ಸಮಯಕ್ಕೆ ತೋರಿಸುವ ದಕ್ಷತೆಯ ನಿದರ್ಶನವಾಗಿದೆ. ಆ ‘ದಕ್ಷತೆ’ ನಮ್ಮಲ್ಲಿ ಬೇಕೇ ಬೇಕು. ಏಕೆಂದರೆ ಸಮಯ ಎನ್ನುವುದು ತುಂಬಾ ಅಮೂಲ್ಯ ಮತ್ತು ವಿರಳ.ಅದನ್ನು ಒಮ್ಮೆ ಕಳೆದುಕೊಂಡರೆ ಹಿಂತಿರುಗಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಮಯ ಕುರಿತು ನಾವು ಬದ್ಧತೆ ಹೊಂದಿರುವುದು ತುಂಬಾ ಅಗತ್ಯ.
ಪ್ರಸ್ತುತವಾಗಿ ನಾವು ಎಷ್ಟೋ ಉದಾಹರಣೆಗಳನ್ನು ನೋಡುತ್ತೇವೆ, ಕೇಳುತ್ತೇವೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ, ಬಾಲಕಿಯರ ಸಮಯಪ್ರಜ್ಞೆಯಿಂದ ಶಾಲಾ ಮಕ್ಕಳ ರಕ್ಷಣೆ, ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ವಿಮಾನ ದುರಂತ…. ಹೀಗೆ ಸಾಕಷ್ಟು ಅನಾಹುತಗಳಿಗೆ ಸಮಯಪ್ರಜ್ಞೆ ಔಷಧಿಯಾಗಿ ಕೆಲಸ ಮಾಡುತ್ತದೆ!ಅದು ಸಾಮಾನ್ಯ ವ್ಯಕ್ತಿಯಲ್ಲಾಗಿರಬಹುದು ಅಥವಾ ವೈದ್ಯರು, ಚಾಲಕರು, ಶಿಕ್ಷಕರು, ಪೈಲೆಟ್ ಗಳು ವರ್ಗ ಯಾವುದಾದರೇನು ? ಸಮಯಪ್ರಜ್ಞೆ ಎನ್ನುವುದು ಇಲ್ಲಿ ‘ಸಿಕ್ಸ್ತ್ ಸೆನ್ಸ್ ‘ ಆಗಿ ಕೆಲಸ ಮಾಡುತ್ತದೆ. ಅಂದರೆ ಆ ವ್ಯಕ್ತಿಯಲ್ಲಿ ಸಮಯ ಪ್ರಜ್ಞೆ ‘ಕ್ವಾಲಿಟಿ’ ಹೆಚ್ಚಿದೆ ಎಂದೇ ಅರ್ಥ. ವಿದ್ಯಾರ್ಥಿಗಳ ಜೀವನದಲ್ಲಿ ಅಥವಾ ಒಟ್ಟಾರೆ ಸಾಧಕನ ಬಾಳಲ್ಲಿ ಶಿಸ್ತು, ಸಂಯಮ, ಪರಿಶ್ರಮ ಮುಂತಾದ ಮೌಲ್ಯಗಳ ಜೊತೆ ಜೊತೆಯಾಗಿ ಸಮಯ ಪ್ರಜ್ಞೆ ಎನ್ನುವುದು ಇದ್ದರೆ ಆ ವ್ಯಕ್ತಿ ಸಾಧಕನಾಗಿ ಗುರ್ತಿಸಿಕೊಳ್ಳುತ್ತಾನೆ ಎಂದರೆ ಅತಿಶಯವಲ್ಲ!!
- ಶಾರದಾ ಶ್ರಾವಣಸಿಂಗ್ ರಜಪೂತ – ಕೊಪ್ಪಳ.
