ಅ.ನ. ಕೃಷ್ಣರಾಯರು ಅವರ ಕೃತಿ, ಕಾದಂಬರಿಗಳ ಮೂಲಕ ಪಾತ್ರಗಳಲ್ಲಿಯೇ ಬದುಕನ್ನು ಅನ್ವೇಷಿಸುವ ಇವರ ಬರೆಹದ ಶೈಲಿ ಅದ್ಭುತ. ಇದು ಓದುಗರನ್ನು ಹತ್ತಿರವಾಗಿಸುತ್ತದೆ. ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಸಾಲಿಗೆ “ಸಂಧ್ಯಾರಾಗ’ ಎಂಬ ಕಾದಂಬರಿ ಸೇರುತ್ತದೆ. “ಸಂಧ್ಯಾರಾಗ’ ಕಾದಂಬರಿ ಕುರಿತು ಪಾರ್ವತಿ ಜಗದೀಶ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಸಂಧ್ಯಾರಾಗ
ಲೇಖಕರು : ಆ.ನ. ಕೃಷ್ಣರಾಯರು
ಪ್ರಕಾಶನ : ಅಂಕಿತ ಪ್ರಕಾಶನ
ಪ್ರಕಾರ : ಕಾದಂಬರಿ
ಹೀಗೊಂದು ಪುಸ್ತಕ ಓದಿದ ಅನುಭವ ನನಗೆ ಮೊದಲಿಂದಲೂ ಅಶ್ವಿನಿ, ತ್ರಿವೇಣಿ ಅವರ ಕಾದಂಬರಿ ಓದುವ ಹವ್ಯಾಸ. ಬಹಳ ದಿನಗಳ ನಂತರ ಓದಿದ ಒಂದು ಅದ್ಬುತವಾದ ಮನಸಿನಲ್ಲಿ ಆಚ್ಚಳಿಯದೆ ಉಳಿಯುವ ಕಾದಂಬರಿ ಅ. ನ. ಕೃಷ್ಣರಾಯ ಅವರ ಸಂಧ್ಯಾರಾಗ. ಅದರಲ್ಲಿ ಬರುವ ಪಾತ್ರಗಳಂತೂ ಜೀವನಕ್ಕೆ ಎಷ್ಟೊಂದು ಹತ್ತಿರ ಅನಿಸುತ್ತೆ ಅಂದ್ರೆ ಅದರಲ್ಲಿರೊ ಒಂದು ಪಾತ್ರವೇ ನಮ್ದೇನೋ ನಾವೇ ಅದರಲ್ಲಿ ಇದಿವೇನೋ ಅನ್ನುವ ಮಟ್ಟಿಗೆ ಕಣ್ಣಿಗೆ ಕಟ್ಟುವಂತಿದೆ. ಅದರಲ್ಲೂ ಮೀನಾಕ್ಷಮ್ಮನ ಪಾತ್ರವನ್ನು ನಾನೂ ಅನಾರೋಗ್ಯ ಸಮಸ್ಯೆ ಆದಾಗ ಅನುಭವಿಸಿದ ನೋವು ಹಿಂಸೆಗಳೇ ಕಣ್ಣೆದುರಿಗೆ ಬಂದಂತೆ ಆಯ್ತು. ಬಹಳ ಭಾವನಾತ್ಮಕ ಕಾದಂಬರಿ ಓದಿದ ತೃಪ್ತಿ ಭಾವ. ಸಂಧ್ಯಾರಾಗದೊಳಗೆ ತಾಳ್ಮೆಯ ಗೆಲುವು.
ಕನ್ನಡದ ಮೇರು ಕಾದಂಬರಿಕಾರರಲ್ಲಿ ಆ.ನ. ಕೃಷ್ಣರಾಯರು ಓರ್ವರು. ಕನ್ನಡದ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಗ್ರಗಣ್ಯ.

ತಮ್ಮ ಕೃತಿ, ಕಾದಂಬರಿಗಳ ಮೂಲಕ ಪಾತ್ರಗಳಲ್ಲಿಯೇ ಬದುಕನ್ನು ಅನ್ವೇಷಿಸುವ ಇವರ ಬರೆಹದ ಶೈಲಿ ಅದ್ಭುತ. ಇದು ಓದುಗರನ್ನು ಹತ್ತಿರವಾಗಿಸುತ್ತದೆ. ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಸಾಲಿಗೆ “ಸಂಧ್ಯಾರಾಗ’ ಎಂಬ ಕಾದಂಬರಿ ಸೇರುತ್ತದೆ.
ಸಂಧ್ಯಾರಾಗ ಕಾದಂಬರಿಯೂ ದೀರ್ಘವಾದ ಅನುಭವ ಮತ್ತು ಜೀವನದ ಸಂಗತಿಯನ್ನು ಒಳಗೊಂಡಿದ್ದು, ಇದು ಪ್ರಭಾವಶಾಲಿಯಾಗಿ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಕನ್ನಡ ಮೇರು ಲೇಖಕ ವಿ.ಎಂ ಇನಾಂದಾರ್ ಅವರು ಕೂಡ ಈ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಕಾದಂಬರಿಯ ಕಥೆ ಎಳೆಯನ್ನು ನೋಡಿದರೆ, ಇದು ಕೂಡು ಕುಟುಂಬದ ಕಥೆ. ಶ್ರೀನಿವಾಸರಾಯರೆಂಬ ಗೌರವಾನ್ವಿತ ವ್ಯಕ್ತಿ , ಪತ್ನಿ ಮೀನಾಕ್ಷಮ್ಮ. ಮೀನಾಕ್ಷಮ್ಮ ಮನೆಗೆ ಭಾಗ್ಯವಂತಾಗಿದ್ದಳು. ಆದರೆ ಆಕೆಗೆ ಮಕ್ಕಳಾಗದ ಕಾರಣ ನಿರ್ಭಾಗ್ಯಳು ಎಂದು ಕೆಲವರು ಛೇಡಿಸಿದ್ದುಂಟು. ಆಗ ರಾಯರಿಗೆ ಇನ್ನೊಂದು ಮದುವೆ ಮಾಡಲು ಮುಂದಾಗಿ ದೂರದ ಸಂಬಂಧಿ ಸಾವಿತ್ರಿಯನ್ನು ರಾಯರಿಗೆ ತಂದು ಮದುವೆ ಮಾಡಿ ಸುತ್ತಾಳೆ. ಸುಖಿ ದಾಂಪತ್ಯ ಸಾಗಿ ಸಾವಿತ್ರಿಯು ಶುಭ ಸೂಚನೆ ಕೊಡುತ್ತಾಳೆ. ಅದಾದ
ಕೆಲವು ದಿನಗಳಲ್ಲಿ ಮೀನಾಕ್ಷಮ್ಮ ಕೂಡ ಗರ್ಭ ಧರಿಸಿದಳು. ಇಬ್ಬರಿಗೂ ಗಂಡು ಮಕ್ಕಳು ಜನಿಸಿ, ರಾಮ, ಲಕ್ಷ್ಮಣ ಎಂದು ನಾಮಕರಣ ಮಾಡಿದರು.
ಒಂದು ದಿನ ತಮ್ಮ ಮನೆಯಲ್ಲಿದ್ದ ಗುಮಾಸ್ತನ ಕುಟುಂಬದ ಬಡತನವನ್ನು ಕಂಡ ರಾಯರು, ಗುಮಾಸ್ತನ ಸಂಬಂಧಿ ವೆಂಕಟೇಶ ಎಂಬ ಬಾಲಕನಿಗೆ “ನಾನು ವೆಂಕಟೇಶನಿಗೆ ವಿದ್ಯಾದಾನ ಮಾಡುತ್ತೇನೆ’ ಎಂದು ಮಾತುಕೊಟ್ಟರು. ರಾಯರು ಕೊಟ್ಟ ಮಾತಿನಂತೆಯೇ ವೆಂಕಟೇಶನನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು.
ಹಿರಿಯ ಮಗ ರಾಮ ಎಲ್.ಎಲ್. ಬಿ ಪದವಿ ಪಡೆದ ಬಳಿಕ ಎಲ್ಲರೂ ಈತನನ್ನು ರಾಮಚಂದ್ರರಾಯರು ಎಂದು ಈತನನ್ನು ಕರೆಯಲಾರಂಭಿಸದರು. ಇದರಿಂದ ಈತ ಹಿಗ್ಗಿ ಜಂಭಕೊಚ್ಚಿಕೊಳ್ಳುತ್ತಿದ್ದ. ಆದರೆ ಲಕ್ಷ್ಮಣನಿಗೆ ಮಾತ್ರ ವಿದ್ಯೆ ತಲೆಗೆ ಹಚ್ಚಲಿಲ್ಲ. ಬದಲಿಗೆ ಆತನಿಗೆ ಸಂಗೀತವೇ ಉಸಿರಾಗಿತ್ತು. ಈತನಿಗೆ ಸಂಗೀತಾಭ್ಯಾಸ ಮುಂದೆ ಎಲ್ಲವೂ ಗೌಣ.
ಮುಂದೆ ಶ್ರೀನಿವಾಸರಾಯರು ಇಬ್ಬರಿಗೆ ಮದುವೆ ಮಾಡಿದರು. ವೆಂಕಟೇಶನಿಗೂ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿದರು. ರಾಮಚಂದ್ರ ರಾಯನ ಹೆಂಡತಿ ಶ್ರೀಮಂತ ಮನೆಯ ಮೂಲದವಳಾಗಿದ್ದರಿಂದ ಆತನ ಇನ್ನಷ್ಟು ಜಂಭಗೊಂಡಿದ್ದ.

ಮೀನಾಕ್ಷ್ಮಮ್ಮ ಸ್ವರ್ಗಸ್ಥರಾದರು. ಬಳಿಕ ರಾಯರು ಕೂಡ ಹಾಸಿಗೆಯಿಡಿದರು. ಆದರೆ ರಾಯರೂ ಕೂಡ ಬಹಳಷ್ಟು ದಿನ ಬದುಕಲಿಲ್ಲ. ಅವರು ಕೂಡ ಸ್ವರ್ಗಸ್ಥರಾದರು. ಬಳಿಕ ಮನೆಯ ಯಜಮಾನಿಕೆ ಹಿರಿ ಮಗ ರಾಮಚಂದ್ರರಾಯರಿಗೆ ಸೇರಿದ ಮೇಲೆ ಹೆಂಡತಿ ಜತೆಗೆ ಸೇರಿ ವೈಭೋಗದ ಜೀವನಕ್ಕೆ ಮುಂದಾದನು. ತಮ್ಮ ಲಕ್ಷ್ಮಣ, ಆತನ ಹೆಂಡತಿ ಹಾಗೂ ತಂಗಿ ಗಂಡ ವೆಂಕಟೇಶ ಇವರು ಮನೆಯಾಳುಗಳಂತೆ ದುಡಿಯಲಾರಂಭಿಸಿದರು.
ರಾಮಚಂದ್ರ ರಾಯರು ಹೈಕೋರ್ಟ್ ವಕೀಲರಾದ ಬಳಿಕ ಸಂಬಂಧಗಳನ್ನು ದೂರಲಾರಂಭಿಸದರು. ಹಣಕ್ಕೆ ಪ್ರಾಶಸ್ತ್ಯ ನೀಡಿದರು. ಆದರೆ ರಾಯರ ತಮ್ಮ ಲಕ್ಷ್ಮಣನ ಸಂಗೀತ ಅಭ್ಯಾಸಕ್ಕೆ ತೊಂದರೆ ಮಾಡಿ, ನೀನು ಮನೆಯಲ್ಲಿ ಸಂಗೀತಾಭ್ಯಾಸ ಮಾಡದಿರು ಆಜ್ಞೆ ಮಾಡಿ ಅವಮಾನಿಸದ. ಇದರಿಂದ ಒಂದು ದಿನ ಲಕ್ಷ್ಮಣ ಮನೆ ಬಿಟ್ಟು ಹೋದ. ಮುಂದೆ ಲಕ್ಷ್ಮಣ ತನ್ನ ಸಂಗೀತ ಶಿಕ್ಷಣಕ್ಕೆ, ಹಸಿವಿಗೆ ಊರುಗಳ ತಿರುಗಾಡಿದ ಬಳಿಕ ಅವರು ಒಬ್ಬ ಮಹಾನ್ ಸಂಗೀತ ದರ್ಶನವಾಗಿ ಈತನಿಗೆ ಸಂಗೀತ ಅಭ್ಯಾಸ ಹೇಳಿಕೊಟ್ಟರು. ಮುಂದೆ ದೊಡ್ಡ ಸಂಗೀತಗಾರನಾದ. ಆದರೆ ಅವರ ಅಣ್ಣ ಹಣ ಗಳಿಕೆಯ ಹಿಂದೆ ಬಿದ್ದು ಎಲ್ಲವನ್ನೂ ಕಳೆದುಕೊಂಡರು. ಆದರೆ ತಾಳ್ಮೆಯಿಂದ ಲಕ್ಷ್ಮಣ ರಾಯರು ತಮ್ಮ ಸಂಗೀತ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದರು.
ಜೀವನದುದ್ದಕ್ಕೂ ಸುಖ ದುಃಖಗಳು ನಮ್ಮನ್ನು ಹಿಂಬಾಲಿಸುತ್ತವೆ, ನಾವು ನಮ್ಮವರು ನಮ್ಮ ಕುಟುಂಬ, ನಮ್ಮ ಸಮಾಜ ಎಂದು ತಿಳಿದಾಗಲೆ ನಮ್ಮತನ ಗೊತ್ತಾಗುತ್ತದೆ. ಈ ಸಂಧ್ಯಾರಾಗದಲ್ಲಿ ಅ.ನ. ಕೃಷ್ಣರಾಯರು ಸೃಷ್ಟಿಸಿದ ಪಾತ್ರ ಲಕ್ಷ್ಮಣ ಈ ಸಾಲಿನಲ್ಲಿ ಬಂದು ನಿಲ್ಲುತ್ತಾನೆ.
ಸಂಗೀತದ ಬಗ್ಗೆ ನನಗೆ ಹೆಚ್ಚು ಜ್ಞಾನ ಇಲ್ಲ ಹೈಸ್ಕೂಲ್ ಹಂತದಲ್ಲಿ ಸಂಗೀತ ಕ್ಲಾಸ್ ಇತ್ತು ಅದರಲ್ಲಿ ಕೆಲವು ರಾಗ, ತಾಳ ಗಳ ಬಗ್ಗೆ ಮಾಹಿತಿ ಕೊಟ್ಟು ಸ್ವಲ್ಪ ಸಂಗೀತವನ್ನು ಕಲಿಸಿದ್ದರು. ಸಂಗೀತ ಆಸಕ್ತರು ಮಾತ್ರ ತಪ್ಪದೇ ಓದಬೇಕಾದ ಒಂದು ಕೃತಿ ” ಸಂಧ್ಯಾರಾಗ ” ಕೊನೆಯಲ್ಲಿ ಅಂತ್ಯ ಮಾತ್ರ ಎಂತವರಿಗೂ ಕರಳು ಚುರ್ ಅನ್ನುವ ಅದ್ಭುತ ಪರಿಕಲ್ಪನೆ ಪೂರ್ವಿ ರಾಗ ಹಾಡತಾ, ಹಾಡತಾನೇ ಲಕ್ಷಣನ ಆತ್ಮ ಪ್ರಣತಿ ಸಂಧ್ಯಾರಾಗದಲ್ಲೇ ಲೀನವಾಗುತ್ತೆ.
- ಪಾರ್ವತಿ ಜಗದೀಶ್
