ಜೊತೆಯಾದ ಅಲೆಗಳ ಬಿಂಬ, ಅಲೆ ದೋಣಿ ಬದುಕು ಹಾಗೆ ಸಾಗುವುದು…ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಸಪ್ತ ಸಾಗರದ
ತೆರೆಗಳ ಮೇಲೆ
ಕುಳಿತು ಹೊರಟಿದೆ
ಸಾಲು ದೋಣಿ
ಮೆರವಣಿಗೆಯ
ಮಂಟಪ ಕಟ್ಟಿ
ಪದಗಳ ಜೋಡಿಸಿ
ಭಾವವ ಕುಣಿಸಿ
ತೇಲುತಾ ಸಾಗಿವೆ
ಸುಮ್ಮನೇ
ನೋಡಲೇ ಬೇಕು
ದೋಣಿ ಹೊರಟ
ಗಳಿಗೆಯ
ಚಿನ್ನದ ತೆರಿಗೆ
ಎಳೆಗಳ ಕೂಡಿಸಿ
ಬೆಳ್ಳಿಯ ಮೀನನು
ಮೋಡಕೆ ಚಿಮ್ಮಿಸಿ
ಸಗ್ಗವ ಕಾಣುವ
ಸಂತಸ ತುಂಬಿ
ಸಾಗಿದೆ ಪುಟ್ಟ ದೋಣಿ
ಸಾಗಿದ ಗುರುತು
ಜೊತೆಯಾದ
ಅಲೆಗಳ ಬಿಂಬ
ಯಾವುದೂ ತರವಲ್ಲ
ಒಮ್ಮೆ ಮೇಲಕ್ಕೆ
ಇನ್ನೊಮ್ಮೆ ಕೆಳಕ್ಕೆ
ಕುಣಿವುದು
ಅಲೆ ದೋಣಿ ಬದುಕು
ಹಾಗೆ ಸಾಗುವುದು
ಜೀವದ ಮೆರವಣಿಗೆ
ನೆಲವೇ ಕಾಣುವ ಸಗ್ಗ
ಅದರ ತುಂಬೆಲ್ಲಾ
ಉಸಿರಿನ ಬರವಣಿಗೆ
- ನಾಗರಾಜ ಬಿ. ನಾಯ್ಕ – ಹುಬ್ಬಣಗೇರಿ.
