ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಶೌರ್ಯಮಲೆ – ಅಯ್ಯಪ್ಪನ ಪೂಂಗವನ’ ಕೃತಿಯ ಕುರಿತು ನವೀನ್ ಕುಮಾರ್ ಜಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಶೌರ್ಯಮಲೆ – ಅಯ್ಯಪ್ಪನ ಪೂಂಗವನ
ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಶನ್
ಬೆಲೆ : 280.00
ಈ ಕಾದಂಬರಿಯನ್ನು ಬರೆಯಲು ನಿರ್ಧರಿಸಿದ ಲೇಖಕರು ನನ್ನ ಬಳಿ ಬರೆಯುವ ಬಗ್ಗೆ ಹಂಚಿಕೊಂಡ ದಿನದಿಂದಲೂ ಪುಸ್ತಕ ಬರುವುದನ್ನು ಕಾಯುತ್ತಾ ಕುಳಿತೆ. ಪ್ರತಿ ಶನಿವಾರ ಮತ್ತು ಭಾನುವಾರ ಬಿಡುವಿನ ವೇಳೆಯಲ್ಲಿ ಲೇಖಕರಿಗೆ ಪುಸ್ತಕದ ಬಗ್ಗೆ ಕೇಳುತ್ತಾ ಯಾವಾಗ ಮುಗಿಸುತ್ತೀರಾ ಎಂದು ಬೆನ್ನ ಹಿಂದೆ ಬಿದ್ದು ಯಾವಾಗ ನಮಗೆ ಸಿಗುತ್ತದೆ ಅಂತ ಕಾಡಿ ಬೇಡಿದ ಪರಿಣಾಮ ಅವರ ಮೊದಲ ಕಂತು ಪುಸ್ತಕದಲ್ಲಿ ನನಗೊಂದು ಅಂತ ಕಳ್ಸಿ ಕೊಟ್ಟರು. ಪುಸ್ತಕದ ಬಗ್ಗೆ ಯಾಕೆ ಅಷ್ಟು ಕುತೂಹಲ ತೋರಿಸಿದೆನೆಂದರೆ ಚಿಕ್ಕಂದಿನಿಂದಲೂ ನನ್ನೊಳಗೆ ಕಾಡುತ್ತಿದ್ದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡುವ ಪುಸ್ತಕ ಎಂದು ತಿಳಿದಿತ್ತು.

ಮೊದಲಿಗೆ ವಾವರನಿಗ್ರಹದಿಂದ ಶುರುವಾದ ಕಾದಂಬರಿ ಹೆಜ್ಜೆ ಹೆಜ್ಜೆಗೂ ಮಹತ್ವದ ಮಾಹಿತಿಯನ್ನು ತಿಳಿಸುತ್ತ ಅಯ್ಯಪ್ಪನ ನಿರೂಪಣೆಯಿಂದಲೇ ಕಥೆ ಸಾಗಿ ಬಂದ ಪರಿಯನ್ನು ಮೆಚ್ಚಲೇಬೇಕು. ಹರಿಹರಸುತನು ತಾನು ಭೂತನಾಥ, ಧರ್ಮಶಾಸ್ತ ಮತ್ತು ಅಯ್ಯಪ್ಪಸ್ವಾಮಿಯಾದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗಿದ ಕಥೆಯು ಪ್ರತಿಯೊಂದು ಸನ್ನಿವೇಶದ ಹಿಂದೆ ಇರುವ ವಸ್ತುನಿಷ್ಠೆ, ಪ್ರತಿಯೊಂದು ಸ್ಥಳದ ಐತಿಹಾಸಿಕ ಪುರಾಣದ ಮಹತ್ವವನ್ನು ತಿಳಿಸಿ ಕೊಡುವಲ್ಲಿ ಲೇಖಕರ ಅದಮ್ಯ ಪರಿಶ್ರಮ ಮತ್ತು ಅವರು ಕೃತಿಗೆ ಕೊಟ್ಟ ಸಮಯ ತಿಳಿಯುತ್ತದೆ.
ಪಂದಳಕಂದ, ಹರಿಹರಸುತ, ಶಬರೀಶ, ಅನಾಥರಕ್ಷಕ,ಆಪತ್ಭಾಂಧವ, ಹೀಗೆ ಎಲ್ಲ ಪದಗಳ ಮೂಲ ಮತ್ತು ವಾಖ್ಯಾನವನ್ನು ಲೇಖಕರು ಕಟ್ಟಿ ಕೊಟ್ಟಿದ್ದಾರೆ. 18 ಮಲೆಗಳು, 4 ವೇದಗಳು , 6 ವೇದಾಂಗಗಳು, ಅಗಸ್ತ್ಯದರ್ಶನ, ಪರಶುರಾಮರ ವಿಜಯಯಾತ್ರೆ , ಮಹಿಷಿಯ ಹಿನ್ನಲೆ, ಸಮುದ್ರಮಥನ ಮತ್ತು ಶ್ರೀದೇವಿ ಮಹಾತ್ಮೆ ಅಧ್ಯಯನ ಮತ್ತು ವಿಶ್ಲೇಷಣೆಯನ್ನು ಮೆಚ್ಚಲೇಬೇಕು ಎಲ್ಲೂ ಸಿಗದ ಬಲು ಅಪರೂಪದ ಮಾಹಿತಿಯನ್ನು ಕಲೆಹಾಕುವಲ್ಲಿ ಲೇಖಕರು ಮತ್ತೊಮ್ಮೆ ಗೆದ್ದಿದ್ದಾರೆ.
ಕಳರಿಪಯಟ್ನ ಬಗ್ಗೆ ಓದುವಾಗಲಂತೂ ಮೈ ರೋಮಾಂಚನವಾಗುತ್ತದೆ. ಇತಿಹಾಸ, ಪೌರಾಣಿಕ, ಸಾಮಾಜಿಕ, ಮತ್ತು ರೋಚಕ ಅನುಭವಗಳೇನೆಲ್ಲ ಯಾವುದೇ ಕ್ಲಿಷ್ಟಕರವಿಲ್ಲದೆ ತುಂಬ ಸರಳವಾದ ಕಾದಂಬರಿಯನ್ನು ತಂದಿದ್ದಾರೆ, ಅದರ ಜೊತೆ ಜೊತೆ ಕಣ್ಣುಮುಂದೆ ಕಾಣುವಂತೆ ಮಾಡಿದ್ದಾರೆ.
ಭೂಮಿಗೆ ಬಂದ ಕರ್ತವ್ಯದ ಜೊತೆಗೆ ಶಾಸ್ತ ಸಂಪ್ರದಾಯ ಬಗ್ಗೆ ಬಿಡಿಬಿಡಿಯಾಗಿ, ಸ್ಥಳಪುರಾಣದ ಮಹತ್ವ ಕಟ್ಟಿಕೊಟ್ಟು, ಭೂತನಾಥ, ಧರ್ಮಶಾಸ್ತ್ರ, ಮಾಳಿಗಾಪುರತ್ತಮ್ಮ, ಶಬರೀಶ, ವಿಲ್ಲಾಳಿವೀರನಾದ ಕಥೆ ಅದ್ಭುತವಾಗಿದೆ.

ರಾಜಶೇಖರ ವರ್ಮ ತಂಬುರನ್ ಮತ್ತು ಪೆರುಮಾದೇವಿ ಮಗನಾಗಿ, ಕೇತಕಿವರ್ಮನ ಪ್ರೀತಿಯ ಮಣಿಯೇಟನಾಗಿ, ಪಂದಳಪ್ರಜೆಗಳ ರಕ್ಷಕನಾಗಿ, ಶ್ರೀಗುರುನಾಥ ಶಿವಚೈತನ್ಯ ಮತ್ತು ಮಾಲತಿಯರ ಪ್ರಿಯಶಿಷ್ಯನಾಗಿ, ಓಂಕಾರನಾಥನ ಬಾಳು ಬೆಳಗಿದ ಕರುಣಾ ಸಾಗರನಾಗಿ, ಬಲು ಕಠಿಣವಾದ ಕಳರಿಪಯಟ್ಟು ವಿದ್ಯೆಯನ್ನು ಅಲ್ಪ ಸಮಯದಲ್ಲಿ ಕಲಿತ ಮಹಾ ಮೇಧಾವಿಯಾಗಿ, ಸ್ವತಃ ಭಾರ್ಗವರಾಮರ ಕೈಯಿಂದ ಪ್ರತಿಷ್ಠಾಪನೆಗೊಂಡ ಅಯ್ಯಪ್ಪ. ಈ ಎಲ್ಲ ಸನ್ನಿವೇಶಗಳನ್ನು ಸಂದರ್ಭ ಸಮೇತ ವಿವರಿಸಿದ ಲೇಖಕರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತಾ ಇನ್ನೂ ಮುಂದೆ ಇನ್ನೂ ಮತ್ತಷ್ಟು ಇಂತಹ ಕಾದಂಬರಿಗಳು ನಿಮ್ಮಂದ ಬರಲಿ ಅಂತ ಆಶಿಸುತ್ತಾ. ಇದು ನನ್ನ ಸ್ವತಃ ಅಭಿಪ್ರಾಯ ತಪ್ಪಿದ್ದರೆ ಕ್ಷಮಿಸಿ.
- ನವೀನ್ ಕುಮಾರ್ ಜಿ – ಬಳ್ಳಾರಿ, ಬೆಂಗಳೂರು.
