ಈ ಸಾವು ನ್ಯಾಯವೇ?

ಆತ್ಮಹತ್ಯೆಗೆ ನಿಜವಾಗಿಯೂ ಸಮಸ್ಯೆಗಳೇ ಕಾರಣವೋ? ಅಥವಾ ಸುಖ ಜಾಸ್ತಿಯಾಗಿ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆಯೋ ? ಎನ್ನುವುದೇ ಒಂದು ಪ್ರಶ್ನಾರ್ಥವಾಗಿವೆ. ಅದು ಯುವ ಜನರಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಚಿಂತನೆಯ ವಿಷಯವಾಗಿದೆ.

ಆತ್ಮಹತ್ಯೆ ಇಂದಿನ ದಿನಗಳಲ್ಲಿ ದೊಡ್ಡ ಹೆಮ್ಮಾರಿಯಾಗಿ ಬೆಳೆದು ನಿಂತಿದೆ. ದೃಶ್ಯಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಆತ್ಮಹತ್ಯೆ ಸುದ್ದಿಗಳು ಹರಿದಾಡುತ್ತವೆ. ದೊಡ್ಡ ದೊಡ್ಡ ಸೆಲೆಬ್ರೆಟಿಗಳಿಂದ ಹಿಡಿದು ಬಡವರವರೆಗೂ ಆತ್ಮಹತ್ಯೆ ಎನ್ನುವ ಪಿಡುಗು ಬಿಟ್ಟಿಲ್ಲ. ಇದೊಂದು ಜೀವನದ ಕಷ್ಟಗಳಿಗೆ ಸುಲಭವಾದ ಮಾರ್ಗಸೂಚಿ ಎಂದು ಬಹಳಷ್ಟು ಜನರು ಅಂದುಕೊಂಡಿದ್ದಾರೆ. ಅದೇ ಮಾರ್ಗವನ್ನು ಅನುಸರಿಸಿ ತಮ್ಮ ಜೀವ ಬಿಟ್ಟಿದ್ದಾರೆ.

ಎಲ್ಲ ಕಷ್ಟಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವೇ?.ಇದೊಂದೇ ಪರಿಹಾರವಾಗಿದ್ದರೆ ಈ ಭೂಮಿಯಲ್ಲಿ ಯಾವ ಮನುಷ್ಯರು ಬದುಕಲು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಕಷ್ಟ ಎದುರಾದಾಗ ಫ್ಯಾನಿಗೆ  ನೇತು ಬಿಳೋದೋ, ವಿಷ ಕುಡಿದೋ ಸಾಯುತ್ತಿದ್ದರು. ಸುಖ ದುಃಖಗಳು ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನು ಸಮವಾಗಿ ಸ್ವೀಕರಿಸಬೇಕು. ಸುಖವನ್ನು ಮನಸ್ಫೂರ್ತಿಯಾಗಿ ಅನುಭವಿಸುವಾಗ, ಕಷ್ಟವನ್ನು ಎದುರಿಸುವ ಧೈರ್ಯವನ್ನು ಏಕೆ ಬೆಳೆಸಿಕೊಳ್ಳುತ್ತಿಲ್ಲ

ಆತ್ಮಹತ್ಯೆಯಿಂದ ಕೇವಲ ಒಂದು ಜೀವ ಹೋಗುವುದಷ್ಟೇ ಅಲ್ಲ, ಸುತ್ತಲಿನ ಜನರಲ್ಲಿ ಖಿನ್ನತೆಯನ್ನು ಹುಟ್ಟು ಹಾಕುತ್ತದೆ. ಉದಾಹರಣೆ ಒಬ್ಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡರೆ, ಆ ವ್ಯಕ್ತಿಗೆ ಸಂಬಂಧಿಸಿದಂತೆ ಅವನ ಸುತ್ತಲಿರುವ ೧೪೫ ಜನಕ್ಕಾದರೂ ಅವನ ಅಗಲಿಕೆಯ ನೋವು ಕೊಡುತ್ತದೆ ಮತ್ತು ಅವರಲ್ಲೂ ಜೀವನದ ಮೇಲಿನ ಜಿಗುಪ್ಸೆ ಪ್ರಚೋಧನೆ ಕೊಡುತ್ತದೆ. ಎಷ್ಟೋ ಭಾರಿ ಬಾಡಿಗೆ ಕೊಟ್ಟ ಮನೆಯ ಮಾಲೀಕನ ಮೇಲೆ ಅನುಕಂಪ ಮೂಡುತ್ತದೆ. ಯಾರದೋ ಮನೆ, ಯಾರದೋ ಫ್ಯಾನ್ ನಡಿ ಅಂತಿಮಯಾತ್ರೆ. ಮನೆ ಕೊಟ್ಟ ತಪ್ಪಿಗೆ ಮಾಲೀಕನು ಕೂಡ ಖಿನ್ನತೆಗೆ ಒಳಗಾಗಬೇಕು.ಅವನ ಖಿನ್ನತೆಯನ್ನು ಕೇಳುವರು ಯಾರೋ?.

ಡಬ್ಲ್ಯುಎಚ್‌ಒ ವರದಿಯೊಂದರ ಪ್ರಕಾರ, ಪ್ರತಿ ವರ್ಷ ೮,೦೦,೦೦ ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. ಪ್ರತಿ ೪೦  ಸೆಕೆಂಡಿಗೆ ೧ ಸಾವು ಸಂಭವಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಬಹುತೇಕರು ಯುವ ಪೀಳಿಗೆಗಳು ಎನ್ನಲಾಗುತ್ತದೆ. ಪ್ರೇಮ ವೈಫಲ್ಯದ ಖಿನ್ನತೆ, ಬಡತನದ ಖಿನ್ನತೆ, ಮಾದಕ ವ್ಯಸನಿಗಳ ಖಿನ್ನತೆ, ಪರೀಕ್ಷೆಗಳಲ್ಲಿ ಅನುತೀರ್ಣವಾದರೆನ್ನುವ ಖಿನ್ನತೆ ಹೀಗೆ ಆತ್ಮಹತ್ಯೆಗೆ ಹಲವಾರು ಖಿನ್ನತೆಗಳು ಮುಖ್ಯ ಕಾರಣವಾಗಿರುತ್ತವೆ. ಆತ್ಮಹತ್ಯೆ ಮಹಾ ಪಾಪ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವನ ಬಗ್ಗೆ ಚರ್ಚಿಸುವುದಿದೆಯಲ್ಲಅದರಷ್ಟು ಕ್ರೂರತನ ಇನ್ನೊಂದಿಲ್ಲ. ಇದರಿಂದಲೂ ಆತ್ಮಹತ್ಯೆಗೆ ಇನ್ನಷ್ಟು ಕುಮ್ಮಕು ಸಿಗುತ್ತದೆ.

ಯಾವುದೇ ವ್ಯಕ್ತಿ ಒಮ್ಮಿಂದೊಮ್ಮಲೆ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಅವರಲ್ಲಿನ ಖಿನ್ನತೆ ಹಂತ ಹಂತವಾಗಿ ಕೊಲ್ಲುತ್ತಾ ಹೋಗುತ್ತದೆ . ಖಿನ್ನತೆಗೆ ಒಳಗಾದ ವ್ಯಕ್ತಿಯ ಆಪ್ತರು ಅವರ ನಡವಳಿಕೆಗಳನ್ನೂ ಗಮನಿಸಬೇಕು.ಮತ್ತು ಖಿನ್ನತೆಯಿಂದ ಹೊರಬರಲು ವೈದ್ಯರಲ್ಲಿ ಆಪ್ತ ಸಮಾಲೋಚನೆ ನಡೆಸಲು  ಸಹಾಯವಾಗಬೇಕು. ದುರಂತವೆಂದರೆ ಇಂದು ಒಟ್ಟು ಕುಟುಂಬಗಳಿಲ್ಲ. ಒಂಟಿ ಬದುಕು ಖಿನ್ನತೆಯನ್ನು ಹೆಚ್ಚಿಸುತ್ತಿದೆ.ಯಾರಿಗೂ ಯಾರಿಲ್ಲ,ಒಬ್ಬರ ಸಮಸ್ಯೆಯನ್ನು ಆಲಿಸುವ ಮನಸ್ಸುಗಳು ಬತ್ತಿಹೋಗುತ್ತಿವೆ. ಇದರ ಪರಿಣಾಮವೇ ಒಂಟಿತನ ಖಿನ್ನತೆಯರೂಪ ಪಡೆದುಕೊಳ್ಳುತ್ತಿದೆ.

ಆತ್ಮಹತ್ಯೆಯನ್ನು ತಡೆಯಲು ಪ್ರತಿವರ್ಷ ಸೆಪ್ಟೆಂಬರ್ ೧೦ ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಅಸೋಸಿಯೇಶನ್ ಫಾರ್ ಸುಸೈಡ್ ಪ್ರಿವೆನ್ಷನ್ಸಂ (ಐಎಎಸ್ಪಿ), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (ಡಬ್ಲ್ಯುಎಫ್‌ಎಂಹೆಚ್) ಸಂಸ್ಥೆಗಳು ಜೊತೆಗೂಡಿ ೨೦೦೩ ರಲ್ಲಿ ಮೊದಲ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಯೋಜಿಸಿತು.ಅಂದಿನಿಂದ ವಿಶ್ವದಾದ್ಯಂತ ಅನೇಕ ದೇಶಗಳು ಜಾಗೃತಿ ಕೆಲಸಕ್ಕೆ ಕೈಜೋಡಿಸಿವೆ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಮೊದಲಿಗೆ ಬೇಕಿರುವುದು ತಾಳ್ಮೆಯೇ ಹೊರತು ಆತುರತೆಯ ನಿರ್ಧಾರವಲ್ಲ. ಕೇವಲ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವಾಗಬಾರದು. ಪ್ರತಿ ದಿನವೂ ಆತ್ಮಹತ್ಯೆ ತಡೆ ಪ್ರತಿಯೊಬ್ಬರಲ್ಲೂ ಜಾಗೃತಿಯಾಗಬೇಕು. ಪ್ರತಿಯೊಬ್ಬರಲ್ಲೂ ಸಮಸ್ಯೆಗಳನ್ನುಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಸುತ್ತಲಿನ ಸ್ವಾಸ್ಥ್ಯವನ್ನುಕಾಪಾಡಲು ಮುಂದಾಗಬೇಕು.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading