ಕನ್ಯಾಕುಮಾರಿಯೊಳು ಪಾದ ಸ್ಥಿರತೆ ಸಿಂಧೂ ಗಂಗಾ ಯಮುನೆಯರ ಹಾರ ಭೂಷಿತೆ…ಎಚ್.ಮಂಜುಳಾ, ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸುಪ್ರಭಾತಂ ಸುಪ್ರಭಾತಂ ಸುಪ್ರಭಾತಂ ಸುಪ್ರಭಾತಂ
ಮಾತೆಯೇ ಶ್ರೀವನಿತೆಯೇ ನಿನಗೆ ಸುಪ್ರಭಾತಂ॥
ಋಷಿ ಮುನಿಗಳ ನಿಬಿಡಾದ ವನಶ್ರೀಯೇ
ವೀರ ಕಲಿಗಳ ನಾಡಾದ ಶೂರಮತಿಯೇ
ಮಹಾಕವಿಗಳ ಬೀಡಾದ ಭಾರತಿಯೇ
ಸುಪ್ರಭಾತವು ನಿನಗೆ ಜಯಭಾರತಿ ॥
ಕಾಶ್ಮೀರಿ ನೊಸಲ ಹಿಮಾಲಯ ಕಿರೀಟದೋಳೆ
ನರ್ಮದಾ ತಪತಿ ನದಿಗಳ ಕಟಿ ಪಟ್ಟಿಯೋಳೆ
ಗುಡ್ಡ ಬೆಟ್ಟಗಳ ಹಿಮಚ್ಛಾದಿತ ಮೈಯ್ಯೋಳೆ
ಸುಪ್ರಭಾತವು ನಿನಗೆ ಜಯಭಾರತಿ॥
ಕನ್ಯಾಕುಮಾರಿಯೊಳು ಪಾದ ಸ್ಥಿರತೆ
ಸಿಂಧೂ ಗಂಗಾ ಯಮುನೆಯರ ಹಾರ ಭೂಷಿತೆ
ಸಮುದ್ರ ಸಾಗರದೊಳು ಮೀಯುವ ಶುಭ್ರಶ್ವೇತೆ
ಸುಪ್ರಭಾತವು ನಿನಗೆ ಜಯಭಾರತಿ॥
ಹಸಿರು ಭರಿತ ನವಿಲ ನಾಟ್ಯಮಯೂರಿ
ಧೀರೆ ಧೀಮಂತೆ ಧೈರ್ಯ ಧರ್ಮಿಣಿ
ರಮಣೀಯ ಪ್ರಕೃತಿ ದತ್ತ ದೇವತೆ
ಸುಪ್ರಭಾತವ ನಿನಗೆ ಜಯಭಾರತಿ ॥
ಸತ್ಯ ಶಾಂತಿ ಸಾರುವ ಅಶೋಕ ಚಕ್ರ ಹೊತ್ತ
ಶ್ವೇತ ಪಚ್ಚೆ ಕೇಸರಿ ರಂಗುಗಳ ಧ್ವಜತೆ
ವೀರಾಧಿವೀರ ಆಜಾದ್ ಸುಭಾಷ ಲಜಪತರ
ಓಬವ್ವೆ ಚೆನ್ನಮ್ಮ ಝಾನ್ಸಿಯರ ಮಹಾಮಾತೆ
ಸುಪ್ರಭಾತವ ನಿನಗೆ ಜಯಭಾರತಿ॥
- ಎಚ್.ಮಂಜುಳಾ, ಹರಿಹರ.
