ಲೇಖಕರು ಪರಮೇಶ್ವರ ಗುರುಸ್ವಾಮಿ ಅವರ ‘ಸಿಡ್ನಿ ಸುತ್ತಾಟ’ ಕೃತಿ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸಿಡ್ನಿ ಸುತ್ತಾಟ
ಲೇಖಕರು : ಪರಮೇಶ್ವರ ಗುರುಸ್ವಾಮಿ
ಬೆಲೆ : 600.00
ಕಾಂಗರೂವಿನ ಅಂತರಂಗ ಬಹಿರಂಗ: ಸಾಮಾನ್ಯವಾಗಿ ಆಸ್ಟ್ರೇಲಿಯಾವನ್ನು ಅದರ ರಾಷ್ಟ್ರೀಯ ಪ್ರಾಣಿ ಕಾಂಗರೂ ಜತೆಗೆ ತಳಕು ಹಾಕಲಾಗುತ್ತದೆ. ಅದರ ವೈವಿಧ್ಯಗಳ ಅರಿವು ಇಲ್ಲದ ನಮಗೆ ಅದರಲ್ಲಿ ಕೆಂಪು ಕಾಂಗರೂ ಕೂಡ ಇದೆ ಎಂದು ಗೊತ್ತಾದಾಗ ಆಶ್ಚರ್ಯವಾಗದಿರದು. ಇಂತಹ ಹಲವಾರು ಆಶ್ಚರ್ಯಗಳ ಆಗರ ಈ ಲೇಖಕರ ಈ ಕೃತಿ. ಅದನ್ನು ಮನಗಾಣಲು ಇದನ್ನು ಓದಬೇಕು. ಅಂತಹ ಕೆಲವು ಆಶ್ಚರ್ಯಗಳನ್ನು ಮುಂದೆ ಕೊಡಲಾಗಿದೆ.
ಅವು; ಲೇಖಕರು ಭೂತ ವರ್ತಮಾನಗಳ ನಡುವೆ ಕಟ್ಟುವ ಸೇತುವೆ: ಸಿಡ್ನಿಯಲ್ಲಿ ಇರುವ ಹಲವಾರು ಕಟ್ಟೋಣಗಳನ್ನು ಅದಕ್ಕೆ ಸಾಕ್ಷಿಯಾಗಿ ನೀಡಿದ್ದಾರೆ. ಅವುಗಳ ಜತೆಗೇ ಅವರು ನೀಡುವ ವಿವರಣೆಗಳು ನಮ್ಮನ್ನು ಏಕಕಾಲಕ್ಕೆ ಭೂತ ವರ್ತಮಾನಗಳ ನಡುವೆ ಸಂಚರಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಬ್ರಿಟಿಷ್ ರು ಆಸ್ಟ್ರೇಲಿಯಾವನ್ನು( ಅಲ್ಲಿನ ಮೂಲ ನಿವಾಸಿಗಳನ್ನು ಸೆರೆಹಿಡಿದು) ಕೈವಶ ಮಾಡಿಕೊಂಡ ಕಾಲ ಮತ್ತು ಅವರ ವಿರುದ್ಧ ಹೋರಾಟ ನಡೆಸಿ ಸ್ವತಂತ್ರವಾಗಿ ಸಿಡ್ನಿ ಸ್ಥಾಪನೆಗೆ ಅಸ್ತಿಭಾರ ಹಾಕಿದ ಫಿಲಿಪ್ ರಿಂದ ತೊಡಗಿ ಅದನ್ನು ಈಗಿನ ಸ್ಥಿತಿಗೆ ತಂದ ಜೇಮ್ಸ್ ಕುಕ್ ರ ವರೆಗಿನ ಇನ್ನೂರು ವರ್ಷಗಳ ಬೆಳವಣಿಗೆಯ ದಾಖಲೆ ಇದೆ -ಅವರ ಚಿತ್ರಗಳ ಸಮೇತ.

ಸಿಡ್ನಿಯ ಪ್ರಸಿದ್ಧ ಆಸ್ಪತ್ರೆಗಳ ಕಟ್ಟಡಗಳು ಸಾರ್ವಜನಿಕರಿಗೆ ಇರುವ ಸವಲತ್ತುಗಳು. ಕಟುಂಬ ಪಟ್ಟಣ ನಗರದ ವಿಶೇಷಗಳನ್ನು ನಮೂದಿಸಿರುವ ಬಗೆ ಆಕರ್ಷಕವಾಗಿದೆ. ಅಲ್ಲಿನ ಸಾಮಾನ್ಯ ನಾಗರಿಕರ ಶಿಷ್ಟಾಚಾರವನ್ನು , ದಾರಿಯಲ್ಲಿ ಅವರ ಚದುರಂಗದಾಟವನ್ನು ದಾಖಲಿಸಲು ಮರೆತಿಲ್ಲ.ಅಮೆರಿಕಾದಲ್ಲಿ ನಾನು ನೋಡಿದ ಮಕ್ಕಳ ಕುಂಟೋಬಿಲ್ಲೆ ಆಟವನ್ನು ನೆನಪು ಮರುಕಳಿಸಿತು.
ಅಲ್ಲಿನ ಕಲಾ ಸಂಗ್ರಹಾಲಯಗಳು: ಅದರಲ್ಲಿ ಮೂಲ ನಿವಾಸಿಗಳಿಂದ ತೊಡಗಿ ವರ್ತಮಾನದವರೆಗಿನ ಇತಿಹಾಸ ಅಲ್ಲಿ ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಲಾಗಿದೆ.
ರಾಯಲ್ ಬಟಾನಿಕಲ್ ಗಾರ್ಡನ್ ನಲ್ಲಿ ವೈವಿಧ್ಯಮಯ ಲೋಕದ ಅನಾವರಣ.
ಅಲ್ಲಿನ ಜೂಗಳಲ್ಲಿ ಕಾಂಗರೂ ಮೊದಲು ಗೊಂಡು ಆಸ್ಟ್ರೇಲಿಯಾದ ವಿವಿಧ ಪ್ರಾಣಿ ಪಕ್ಷಿಗಳ ಲೋಕ. ಕಾಂಗರೂ ಅಂತೂ ಅಲ್ಲಿನ ಮೂಲನಿವಾಸಿಗಳ ದೈವಿಕ ಪ್ರಾಣಿ. ಇದರ ಜೊತೆಗ ಕೊಅಲ ಕೂಡ ರಾಷ್ಟ್ರೀಯ ಪ್ರಾಣಿ ಎಂಬ ಖ್ಯಾತಿಯನ್ನು ಪಡೆದಿದೆ. ಅಲ್ಲಿನ ಪಕ್ಷಿಗಳು ಇವರಿಗೆ ನಮ್ಮ ಮಡಿವಾಳ, ಗಿಣಿ, ಗುಬ್ಬಚ್ಚಿಗಳಂತಹ ಹಕ್ಕಿಗಳ ನೆನಪಿಗೆ ತರುತ್ತವೆ.
ಸಿಡ್ನಿಯನ್ನು ಒಂದು ಗೂಡಿಸುವ ಅಚ್ಚು ಕಟ್ಟಾದ ನಾಲ್ಕು ಬಗೆಯ ಸುಗಮ ಸಂಚಾರ ವ್ಯವಸ್ಥೆ. ಅಲ್ಲಿ ವಿಸ್ತಾರವಾದ ಸೆಂಟ್ರಲ್ ರೈಲು ನಿಲ್ದಾಣದ ಚಿತ್ರ ಮುಂಬಯಿನ ವಿಕ್ಟೋರಿಯಾ ಟರ್ಮಿನಸ್ ನ್ನು ನೆನಪಿಗೆ ತಂದಿತು. ಸಿಡ್ನಿಯಲ್ಲಿ ಇರುವ ಮಂಗಳೂರುಗಳ ಚಿತ್ರ. ಅಲ್ಲಿನ ಭಾರತೀಯ ಆಹಾರವನ್ನು ಒದಗಿಸುವ ರಾಧಾ ಪ್ಯಾರಡೈಸ್. ಸಿಯಾಟಲ್ ನಲ್ಲಿ ಮಯೂರ, ನಿರ್ಮಲ್ ಇದ್ದಂತೆ.
ಇಂತಹ ಬಹು ಸಂಸ್ಕೃತಿಯು ರೂಪುಗೊಳ್ಳಲು ಕಾರಣ ವಾದುದು, ಅಲ್ಲಿಯ ಮುಕ್ತ ರಾಜಕೀಯ ಸಾಂಸ್ಕೃತಿಕ ನಿಲುವು. ಅದು ಅಲ್ಲಿನ ಜೀವಾಳವಾಗಿದೆ. ಈ ಎಲ್ಲವನ್ನೂ ವೀಕ್ಷಿಸಲು ಅವಕಾಶವಾದುದು ಲೇಖಕರ ಮಗಳು ಅನಲಾ, ತನ್ನ ಸ್ವಂತ ಪ್ರತಿಭಾ ಶಕ್ತಿಯಿಂದ ಅಲ್ಲಿಗೆ ಹೋಗಿ ನೆಲಸಿ ಇವರನ್ನು ಕರೆಸಿಕೊಂಡ ಪರಿಣಾಮ.
ಕಾಣುವ ಕಣ್ಣು, ಅದನ್ನು ಸೆರೆ ಹಿಡಿವ ಸಚಿತ್ರ ಭಾಷೆ ಈ ಅಪೂರ್ವ ಪುಸ್ತಕದಲ್ಲಿ ಮೈದಾಳಿದೆ. ಅದನ್ನು ನೋಡಿ ಓದಿಯೇ ಸವಿಯಬೇಕು.

ಈ ಪುಸ್ತಕದ ವೈಶಿಷ್ಟ್ಯಗಳು :
೧. ಪ್ರತಿಯೊಂದನ್ನೂ ವರ್ಣಚಿತ್ರಗಳ ಸಮೇತ ದಾಖಲಿಸಿರುವುದು. ಅವುಗಳ ಮೂಲದ ಉಲ್ಲೇಖ ದೊಂದಿಗೆ.
೨. ಭೂತ ವರ್ತಮಾನಗಳ ಅಪೂರ್ವ ಬೆಸುಗೆ.
೩. ಕನ್ನಡದ ಬೇರುಗಳನ್ನು ಮರೆಯದಿರುವುದು. ಅದು ಪ್ರಕಟವಾಗುವುದು ಅವರು ಬಳಸುವ ಭಾಷೆಯಿಂದ: ವತಾರೆ, ಶರಂಪರ, ಮಡಿವಾಳ, ಗುಬ್ಬಚ್ಚಿ ಇತ್ಯಾದಿ.
೪. ಕುರಿ ಮಾಂಸದ ಜೊತೆಗೆ ಪಾನಿಪುರಿಯನ್ನು ಸವಿವ ಚಿತ್ರಗಳು.
ಮಿತಿಗಳು:
೧. ಸಂದಿಗ್ಧತೆ: ಕಟುಂಬ, ಕಟೂಂಬ ಎರಡು ಶಬ್ದಗಳ ಬಳಕೆ .ಅವುಗಳಲ್ಲಿ ಯಾವುದು ಸರಿ ಎಂದು ಓದುಗರಲ್ಲಿ ಗೊಂದಲ ಉಂಟಾಗಬಹುದು.
೨. ಆಡು ಭಾಷೆಯ ಬಳಕೆ: ಶರಂಪರ ಇದಕ್ಕೆ ಶಬ್ದ ಕೋಶದಲ್ಲಿ ಆಧಾರವಿಲ್ಲ.
೩. ಕಲಾಮೀಮಾಂಸೆಯ ಪಾರಿಭಾಷಿಕ ಪದಗಳ ಬಳಕೆ. ನ್ಯುಯೋಕ್ಲಾಸಿಕ್, ಇಂಪ್ರೆಷನಿಸಂ ಇತ್ಯಾದಿ ಸಾಮಾನ್ಯರಿಗೆ ಸಂವಹನಕ್ಕೆ ತೊಂದರೆ ಉಂಟುಮಾಡುತ್ತದೆ. ಅವುಗಳ ಕುರಿತು ಪುಸ್ತಕದ ಕೊನೆಯಲ್ಲಿ ಟಿಪ್ಪಣಿ ಒದಗಿಸಿದರೆ ಒಳ್ಳೆಯದು.
ಇಂತಹ ಅಪೂರ್ವ ಪುಸ್ತಕ ರಚಿಸಿದ, ನನಗೆ ಕಳಿಸಿ ಸಿಡ್ನಿ ಕುರಿತು ನನ್ನ ಅರಿವನ್ನು ವಿಸ್ತರಿಸಿದ, ಲೇಖಕರಿಗೆ ವಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
