ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬಧ್ಧತೆಯಿಂದ ಜಗತ್ಪ್ರಸಿದ್ದಿ ಹೊಂದಿದ್ದು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯನ್ನು ಹೊಂದಿರುವ ತ್ರಿಪದಿ ಗಳಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಸರ್ವಮಂಗಳ ಜಯರಾಂ ಅವರ ವಚನ ಕುರಿತಾದ ಲೇಖನವನ್ನು ತಪ್ಪದೆ ಮುಂದೆ ಓದಿ…ಎಲ್ಲರಿಗೂ ಸರ್ವಜ್ಞ ಜಯಂತಿಯ ಶುಭಾಶಯಗಳು…
” ಸರ್ವಜ್ಞನೆಂಬುವನು ಗರ್ವದಿಂದಾದವನು
ಸರ್ವರೊಳಗೊಂದೊಂದು ನುಡಿ ಕಲಿತು
ವಿದ್ಯೆಯ ಪರ್ವತವೇ ಆಗಿಹನು ಸರ್ವಜ್ಞ “.
ಹೀಗೆಂದು ಕರುನಾಡಿನ ತ್ರಿಪದಿ ಬ್ರಹ್ಮ ಮಹಾಕವಿ ಸರ್ವಜ್ಞ ತನ್ನ ಬಗ್ಗೆ ತಾನೇ ಗರ್ವದಿಂದ ಹೇಳಿ ಕೊಂಡಿದ್ದಾನೆ. ಸರ್ವಜ್ಞನ ನಿಜ ನಾಮಧೇಯ ಪುಷ್ಪ ದತ್ತ.
ತಂದೆ – ಆರಾಧ್ಯ ಬ್ರಾಹ್ಮಣ ಬಸವರಸ .
ತಾಯಿ – ಕುಂಬಾರ ಮಾಲಿ.
ಹುಟ್ಟೂರು – ಹಾವೇರಿ ಜಿಲ್ಲೆಯ
ಹಿರೇಕೆರೂರು ತಾಲ್ಲೂಕಿನ ಮಾಸೂರು.
ಕಾಲ – ಕ್ರಿ.ಶ. 16 ನೇ ಶತಮಾನ.
ಸರಿ ಸುಮಾರು 1000 ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ತ್ರಿಪದಿಗಳ ಮೂಲಕ ಇಡೀ ಜಗತ್ತಿಗೆ ಅರಿವಿನ ಬೆಳಕು ಮೂಡಿಸಿದ ತ್ರಿಪದಿಗಳ ಸೃಷ್ಟಿ ಕರ್ತನಾದ
ಸರ್ವಜ್ಞನು ಶಾಲೆಗೆ ಹೋಗಿ ಕಲಿತವನಲ್ಲ. ಕೇವಲ ಲೋಕಾನುಭವಗಳ ಮೂಲಕ ತ್ರಿಪದಿಗಳನ್ನು ರಚಿಸಿ ಸಮಾಜ ಕ್ಕೆ ದಾರಿ ದೀಪವಾದವನು.
ಈತನ ತ್ರಿಪದಿಗಳು ಚಾಟಿ ಏಟಿನಂತೆ ಚುರುಕಾಗಿಯೂ ಕ್ರಾಂತಿ ಕಾರಕ ವಿಚಾರಗಳನ್ನೂ ಒಳಗೊಂಡಿರುತ್ತಿದ್ದವು. ಮಹಾಜ್ಞಾನಿಯಾದ ಸರ್ವಜ್ಞನು ತ್ರಿಪದಿಗಳ ಸರದಾರ ನೆಂದೇ ಪ್ರಸಿದ್ಧಿಯನ್ನು ಹೊಂದಿದ್ದನು.
ಈತನು ತಮಿಳಿನ ಮಹಾಕವಿ ತಿರುವಳ್ಳುವರ್ ಮತ್ತು ನೆರೆಯ ಆಂಧ್ರಪ್ರದೇಶದ ಕವಿ ಮಹಾಶಯ ವೇಮನನ ಸಮಕಾಲೀನನಾಗಿದ್ದನೆಂದು ತಿಳಿದು ಬಂದಿದೆ. ಈತನ ತ್ರಿಪದಿಗಳು ಸರಳವಾಗಿಯೂ, ಅರ್ಥ ಗರ್ಭಿತವಾಗಿಯೂ , ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುವಂತೆಯೂ ಇರುತ್ತಿದ್ದವು. ಹೆಣ್ಣು, ಹೊನ್ನು, ಮಣ್ಣು, ಹಣ್ಣನ್ನು ಕಂಡವ ವಿಚಲಿತ ನಾಗದೇ ಇರಲಾರ ಎಂಬ ವಿಡಂಬನಾತ್ಮಕ ತ್ರಿಪದಿಯನ್ನು ರಚಿಸಿರುವ ಈತ ಗಂಡ ಹೆಂಡಿರ ಸಂಬಂಧದ ಬಗ್ಗೆಯೂ ರಸವತ್ತಾದ ತ್ರಿಪದಿಯನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾನೆ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ. ಜಾತಿ ವಿಜಾತಿ ಎನಬೇಡ ಎಂದು ಹೇಳುವುದರ ಮೂಲಕ ಸಾಮರಸ್ಯದ ಭಾವೈಕ್ಯತೆಯನ್ನು ಅಂದೇ ಮೂಡಿಸಿದ್ದಾನೆ.
ನಡೆವುದೊಂದೇ ನೆಲ ಕುಡಿವುದೊಂದೇ ಜಲ
ಸುಡುವಗ್ನಿಯೊಂದೇ ಇರುತಿರಲು , ಕುಲ ಗೋತ್ರ
ನಡುವೆ ಎತ್ತಣದು ಸರ್ವಜ್ಞ !
ಎಂದು ಜಗತ್ತಿಗೆ ಸಾರುವುದರ ಮೂಲಕ ವಿಶ್ವ ಮಾನವ ಧರ್ಮಕ್ಕೆ ಇಂಬು ನೀಡಿದ್ದಾನೆ.
ಹೀಗೆ ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬಧ್ಧತೆಯಿಂದ ಜಗತ್ಪ್ರಸಿದ್ದಿ ಹೊಂದಿದ್ದು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯನ್ನು ಹೊಂದಿರುವ ತ್ರಿಪದಿ ಗಳಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.
ಮಹಾಕವಿ ಸರ್ವಜ್ಞನ 504 ನೇ ಜನ್ಮದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ದೊರೆತ ಸದಾವಕಾಶಕ್ಕಾಗಿ ಹರ್ಷಿಸುತ್ತೇನೆ.ಎಲ್ಲರಿಗೂ ಸರ್ವಜ್ಞ ಜಯಂತಿಯ ಶುಭಾಶಯಗಳು.
- ಸರ್ವಮಂಗಳ ಜಯರಾಂ – ಶಿಕ್ಷಕಿ, SSEA ಪ್ರೌಢಶಾಲೆ. ಗೌರಿಬಿದನೂರು.
