ಇಂದು ದೇಶವೇ ಸಂಭ್ರಮದಿಂದ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತಿದೆ. ಇದೇ ದಿನ ಕನ್ನಡದ ಕವಿ ಮನಗಳು ಸಾಹಿತ್ಯ ಪ್ರೇಮಿಗಳು ಸ್ಮರಿಸಬೇಕಾದ ಇನ್ನೊಂದು ಹೆಸರು ವಿ. ಸೀ. (ವಿ ಸೀತಾರಾಮಯ್ಯ). – ಪದ್ಮನಾಭ. ಡಿ, ಮುಂದೆ ಓದಿ…
ಇವರು 02-101899ರಲ್ಲಿ ಜನಿಸಿದರು. ಮೈಸೂರಿನ ಶಾರದಾವಿಲಾಸ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಅಧ್ಯಾಪಕರಾಗಿದ್ದರು ಹೊನ್ನಾವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು. ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.ದೀಪಗಳು, ಗೀತಗಳು, ನೆಳಲು ಬೆಳಕು, ಅರಲು ಬರಲು, ದ್ರಾಕ್ಷಿ-ದಾಳಿಂಬೆಮತ್ತು ಹೆಜ್ಜೆ ಪಾಡು ಇವರ ಕವನಸಂಕಲನಗಳು. ಅರಲುಬರಲು ಕೃತಿಗೆ ಕೇಂದ್ರ ಅಕಾಡಮಿ ಪ್ರಶಸ್ತಿ ದೊರೆತಿದೆ.

ಇವರು ಬರೆದ ಅತಿ ಜನಪ್ರಿಯವಾದ ಗಿತೆಯೆಂದರೆ “ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮನೆಯೊಳಗಿಡಲು ತಂದಿರುವೆವು”
ಈ ಹಾಡನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಮದುವೆಯಾದ ಹೆಣ್ಣನ್ನು ಮನೆತುಂಬಿಸಿಕೊಳ್ಳುವ ಸಮಯದಲ್ಲಿ ಹೆಣ್ಣಿನ ತಂದೆ ತಾಯಿಗಳ ಮನದ ಭಾವನೆಗಳನ್ನು ಅವರ ತೊಳಲಾಟ ಮಗಳಿಗೆ ಹೇಳುವ ಕಿವಿಮಾತು, ಗಂಡನಿಗೂ ಬೀಗರಿಗೂ ತಮ್ಮ ಮಗಳನ್ನು ನಿಮ್ಮ ಮಗಳೆಂದು ಭಾವಿಸಿ ಎಂದು ಹೇಳುವ ಮಾತುಗಳನು ಇಷ್ಟು ಕಾವ್ಯಾತ್ಮಕವಾಗಿ, ಭಾವಸ್ಪರ್ಶಿಯಾಗಿ ಹೇಳುವ.ಕವಿತೆ ಇನ್ನೊಂದಿಲ್ಲ. ಇದು ಹಿಂದೆ ಮದುವೆಮನೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಇದನ್ನು ಕುಲವಧು ಎಂಬ ಚಿತ್ರದಲ್ಲೂ ಅಳವಡಿಸಿಕೊಂಡಿದ್ದಾರೆ. ಜಿ. ಕೆ. ವೆಂಕಟೇಶ್ ರಾಗಸಂಯೋಜನೆಯಲ್ಲಿ ಎಸ್. ಜಾನಕಿಯವರು ಬಹಳ ಮನೋಜ್ಞವಾಗಿ ಹಾಡಿದ್ದಾರೆ. ಸರಳಪದಗಳ ಬಳಕೆ, ಭಾವಗಳ ಮೆರವಣಿಗೆ ಉತ್ತಮ ಗೇಯತೆ, ಲಯಗಾರಿಕೆ ಇವರ ಕವನಗಳ ವೈಶಿಷ್ಟ್ಯ. ಇದಕ್ಕೆ ಉದಾಹರಣೆ ಯಾಗಿ ಶರಣು ಎಂಬ ಕವನದ ಸಾಲುಗಳನ್ನು ನೋಡಿ.
ನೇರ ನೇರ ನೇರ ನೇರ ನಿನ್ನನರಸಿಬಂದೆ ಹೇ ವಿಭೋ
ಬೇಗಬೇಗ ನಿನ್ನ ಬಳಿಗೆ ಬರುವ ತವಕದಿಂದಲಿ
ದೂರದೂರ ದೂರದೂದಿಂದ ಸಾರಿ ಬಂದೆ ಹೇ ವಿಭೋ
ದಾರಿಯೆರಡ ದಾಟಿ ಬಂದೆ ನಿನ್ಞ ಸೇರಲು
ತೀರತೀರ ತೀರ ಬಳಲಿ ಕಡೆಗೆ ಬಂದನೈ ವಿಭೋ
ದಾರಿ ಕೊನೆಯು ಕಂಡಿತಿಲ್ಲಿ ನಿನ್ನ ಪಾದದಿ
ಪೂರಪೂರಪೂರ ನಿನ್ನ ನಂಬಿ ಬಂದೆನೈ ವಿಭೋ
ಕಾವ ತಂದೆ ನಿನ್ನ ಪಾದವೊಂದೆ ಆಸರೆ
ಇವರ ಇನ್ನೊಂದು ಜನಪ್ರಿಯ ಕವನ ” ಶಬರಿ”
ಕಾದಿರುವಳು ಶಬರಿ
ರಾಮ ಬರುವನೆಂದು
ತನ್ನ ಪೂಜೆಗೊಳುವನೆಂದು
ಎಳೆಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು
ಬಾ ರಾಮ ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಶಬರಿವೊಲು ಜನವು ದಿನವು
ಯುಗಯುಗವು ಕರೆಯುತಿಹವು
ಕರೆ ಇಳೆಗಳೇಹಲರಸಿ
ತವಕದಲಿ ತಪಿಸುತಿಹವು
ಬಂದಾನೋ ಬಾರನೋ
ಕಂಡಾನೋ ಕಾಣನೋ
ಬಾ ರಾಮ ಬಾರ ರಾಮ
ಬಡವರನು ಕಾಯ ಬಾರ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ
ಇನ್ನೊಂದು ಕವನ ವರುಷ ಹೋಯಿತು ಮನಸಿಗೆ ಏಕೆ ಹರ್ಷ ಇರುವುದಿಲ್ಲ ಎಂದು ತಿಳಿಸುತ್ತದೆ.
ಇದರ ಕೆಲವು ಸಾಲುಗಳನ್ನು ನೋಡಿ
“ವರುಷ ಹೋಯಿತು ವರುಷ ಬಂದಿತು
ಹರುಷ ಬಾರದು ಬಾರದು
ಇರುಳು ಬಂದಿತು ಇರುಳೀ ಹೋಯಿತು
ಮನದ ಇರುಳು ಕಳೆಯದು
ಹೊರಗಿನೆಲ್ಲಕು ಹೊಸತನ ಬಂದರೂ
ಎಮ್ಮ ಹಳೆತನ ಹೋಗದು
ಮನದ ಕೊಳಚೆಯ ಕದಡು ಮುರಿಯದು
ತಿಳಿಯ ಹೂಗಳು.ಬಾರದು”
ಹೊಸತನಕ್ಕೆ ಮನ ಹೊಂದಿಕೊಳ್ಳಬೇಕು. ಹೊಸ ಬೆಳಕು ಹೊಸ ಗಾಳಿಯಂತೆ ಹೊಸ ಚಿಂತನೆಗಳೂ ಬಂದಾಗ ಜೀವನದಲ್ಲಿ ಹೊಸ ಉಲ್ಲಾಸ ಬರುವುದು ಎಂಬ ಕವಿವಾಣಿಯ ಸ್ಮರಣವೇ ಕವಿಗೆ ನಿಜ ನಮನ.
- ಪದ್ಮನಾಭ. ಡಿ ( ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು) ಮೈಸೂರು.
