ಮತ್ತೆ ಬಂದಿದೆ ಯುಗಯಗಾದಿ ಕೇಳಲ್ಲಿ…ಮತ್ತೆ ಬಂದಿದೆ ಯುಗಾದಿ ಕಣಕಣದಲ್ಲಿ…ಕವಿ ರಶ್ಮಿಪ್ರಸಾದ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮಾಮರದಿ ತಳಿರು ತೋರಣವಿಟ್ಟು
ಬೇವಿನಮರದಿ ಹೂಗಳ ಕಂಪಿಟ್ಟು
ತರುಲತೆಗಳಲಿ ನವ ಉಲ್ಲಾಸವಿಟ್ಟು
ಸ್ವಾಗತಿಸಿಹಳು ವಸಂತನ ವಸುಂಧರೆ
ಮತ್ತೆ ಬಂದಿದೆ ಯುಗಾದಿ ನೋಡಲ್ಲಿ
ಕೋಗಿಲೆ ಕಂಠಕ್ಕೆ ಮಾಧುರ್ಯ ತುಂಬಿ
ಭೃಂಗಳಿಗೆಲ್ಲ ಝೇಂಕಾರ ಮೈದುಂಬಿ
ಪಕ್ಷಿಸಂಕುಲಕೆ ಹೊಸ ಪುಳಕ ತುಂಬಿ
ಆಮಂತ್ರಿಸಿಹಳು ಋತುರಾಜನ ಧರಣಿ
ಮತ್ತೆ ಬಂದಿದೆ ಯುಗಯಗಾದಿ ಕೇಳಲ್ಲಿ
ಜೀವಜೀವಗಳಿಗೆ ಹೊಸ ಕಾರುಣ್ಯವಿಟ್ಟು
ಭಾವ-ಭಾವಗಳಿಗೆ ನವ ಚೈತನ್ಯವಿಟ್ಟು
ಮನೆ-ಮನಗಳಿಗೆ ನವೋತ್ಸಾಹ ಕೊಟ್ಟು
ಎದುರುಗೊಂಡಿಹಳು ಅವನ ಅವನಿ.
ಮತ್ತೆ ಬಂದಿದೆ ಯುಗಾದಿ ಕಣಕಣದಲ್ಲಿ
ವಸಂತ ವಸುಂಧರೆಯ ಸಂಭ್ರಮ ನೋಡಲ್ಲಿ
ಸುಗ್ಗಿಯ ಹಿಗ್ಗಿನ ಸಡಗರ ನಿನಾದ ಕೇಳಲ್ಲಿ
ಬೇವು-ಬೆಲ್ಲವ ಮೆಲ್ಲುತ ಹಾಡೋಣ ಬಾ ಗೆಳೆಯ
ನೋವು ನಲಿವುಗಳನೆದುರಿಸುತ ಗೆಲ್ಲಲಿ ಬಾಳ ಸಂಪ್ರೀತಿ
ಹೊಸವರ್ಷ ಮೂಡಿಸಲಿ ಕ್ಷಣಕ್ಷಣವೂ ನವಕಾಂತಿ
- ರಶ್ಮಿಪ್ರಸಾದ್ (ರಾಶಿ)
