ನಿನ್ನ ಧ್ಯಾನದಲಿ ನನ್ನ ಮನದ ಕತ್ತಲೆಯ ಕಳೆಯುವೆ…ನಿವೃತ್ತ ಶಿಕ್ಷಕಿ, ಕವಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಜಗದ ಮಂಗಳಕೆಲ್ಲ
ನೀನೆ ಕಾರಣ ಅಮ್ಮಾ
ಅರಿಶಿನ ಕುಂಕುಮ
ವಿಭೂಷಿತೆ ಅಮ್ಮಾ
ಜಗದ ಚೆಲುವಿಕೆಗೆಲ್ಲ
ನೀನೇ ಕಾರಣ
ಶುಭದಾಯಿನಿ ದೇವಿ
ಸೌಂದರ್ಯವೆಲ್ಲ
ನಿನ್ನಿಂದಲೇ ತಾಯೆ
ನೋಡಿ ದಣಿಯೆನು ನಿನ್ನ
ಹಾಡಿ ತಣಿಯೆನು ನಿನ್ನ
ಪೂಜಿಸುತ ನನ್ನನ್ನೆ
ನಾ ಮರೆಯುವೆ
ನಿನ್ನ ಧ್ಯಾನದಲಿ ನನ್ನ
ಮನದ
ಕತ್ತಲೆಯ ಕಳೆಯುವೆ
ಅರಿಶಿನದ ಹೂಗಳ
ಶ್ರೀಮುಡಿಯಲಿ
ಕುಂಕುಮದ ಕೆಂಪಿನ
ಹೂವ ಸೀರೆಯಲಿ
ಶೋಭಿಸುವ ನಿನ್ನನ್ನು
ಕಣ್ತುಂಬಿಕೊಂಡೆ
ಮನದಪೀಠದಲಿ
ನಿನ್ನ ಮೂರ್ತಿಯ
ಆವಾಹಿಸಿಕೊಂಡೆ
ಹರಕೆಯ ರಕ್ಷೆಯಲಿ
ನನ್ನನಿರಿಸು
ಮನದ ತಿಮಿರವ ಸರಿಸಿ
ಅರಿವಿನ ಜ್ಯೋತಿ ಉರಿಸು..
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕವಯತ್ರಿ, ಕೊಡಗು.
