ಗೆಲುವು ಎಂದರೇನು?….ಒಮ್ಮೆ ಸೋತ ಮಾತ್ರಕ್ಕೆ ಜೀವನದಲ್ಲಿ ಕುಗ್ಗುವುದು ಸರಿಯಲ್ಲ, ತಪ್ಪು ಎಲ್ಲಿ ಆಯಿತು, ಎಂದು ಅರಿತು ಅದನ್ನ ಸರಿಪಡಿಸಿಕೊಂಡು ಮುನ್ನುಗಿದರೆ ಮುಂದೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾ ಸಂಜಯ ಏತಿಸ್ಟ್ ಅವರ ಜೀವನಕ್ಕೊಂದು ಉತ್ಸಾಹ ನೀಡುವ ಒಂದು ಪುಟ್ಟ ಲೇಖನ, ಮುಂದೆ ಓದಿ…
ನಾಲ್ಕು ಕಾಸು ಸಂಪಾದಿಸಿದ ತಕ್ಷಣ ನಾನು ಬುದ್ದಿವಂತ ಪರಿಶ್ರಮ ಹಾಕಿದ್ದೇನೆ ಉಳಿದವರು ದಡ್ಡರು ಅಂತಲೋ,ಇಲ್ಲ ಸೋಮಾರಿಗಳು ಅಂತಲೋ ಭಾವಿಸುವುದು ತಪ್ಪು. ಎಷ್ಟೋ ಬಾರಿ ನಮಗಿಂತ ಬುದ್ಧಿವಂತರು,ನಮಗಿಂತ ಹೆಚ್ಚು ಶ್ರಮ ಹಾಕೋರು ಸಹ ನಮಗಿಂತ ಬಹಳ ಹಿಂದೆಯೇ ಉಳಿದು ಬಿಡ್ತಾರೆ … ಎಲ್ಲದರ ಜೊತೆಗೆ ಅವಕಾಶ ಕೂಡ ಬಹು ಮುಖ್ಯ ಪಾತ್ರವಹಿಸುತ್ತದೆ. ಇಬ್ಬರಿಗೂ ಓಡುವ ಅವಕಾಶ ಸಿಕ್ಕಿರತ್ತೆ. ಆದ್ರೆ ನನಗೆ ಸಮತಟ್ಟು ರಸ್ತೆ, ಮತ್ತೊಬ್ಬನಿಗೆ ಮರಳಿನ ದಂಡೆ.
ಆತ ಅದೆಷ್ಟೇ ಸದೃಢ ಆಗಲಿ ಪರಿಶ್ರಮ ಹಾಕಲಿ ನನ್ನ ಸಮಕ್ಕೆ ಓಡಲು ಆಗುವುದಿಲ್ಲ. ಅದರ ಅರ್ಥ ನಾನೊಬ್ಬ ಯಶಸ್ವಿ ಮತ್ತು ಆತನೊಬ್ಬ ಅಸಮರ್ಥ ಅಂತಲ್ಲ.ಪ್ರಯತ್ನ ಪಟ್ಟವರೆಲ್ಲರು ಯಶಸ್ವಿ ಹೋರಾಟಗಾರರೆ. ಬದುಕು ನಿರಂತರ ಸೋತೆ ಅಥವಾ ಹಿಂದೆ ಇದ್ದೇನೆ ಎಂದು ಕೊರಗಬೇಡ .ಓಡುವ ಪ್ರಯತ್ನ ಮಾಡಿದ ಮೇಲೆ ಗೆದ್ದಂತೆಯೇ. ಹಾಗೆ ಅದೆಷ್ಟೇ ಪರಿಶ್ರಮ ಹಾಕುವುದೇ ಆದರೂ ಸರಿಯಾದ ಜಾಗದಲ್ಲಿ ಹಾಕಬೇಕು. ಸರಿಯಾದ ಅವಕಾಶಕ್ಕೆ ಹಾಕಬೇಕು.

ಫೋಟೋ ಕೃಪೆ : streamededu
ನನ್ನಲ್ಲಿ ಮೀನು ಹಿಡಿಯುವ ಅದ್ಬುತ ಕಲೆ ಇದೆ. ಅಷ್ಟೇ ಹುಮ್ಮಸ್ಸು ಇದೆ ಹಾಗೂ ಮೀನು ಹಿಡಿಯಲೇ ಬೇಕಾದ ಅನಿವಾರ್ಯತೆ ಸಹ ಇದೆ ಎಂದು ಮರಳಿನ ರಾಶಿಯಲ್ಲಿ ಮೀನು ಹಿಡಿಯಲು ತಡಕಾಡಿದರೆ ಸಾಧ್ಯವೇ? ನೀರೆ ಇಲ್ಲದ ನದಿಗೆ ಬಲೆ ಹಾಕಿದರೆ.?ಮತ್ತೆ ನದಿ ತುಂಬುವವರೆಗೆ ಕಾಯಬೇಕು ಇಲ್ಲವೇ ಮೀನು ಸಿಗುವ ನದಿಯ ಅರಸಿ ಹೊರಡಬೇಕು . ಒಂದೊಮ್ಮೆ ನದಿ ತುಂಬಿದ ಮೇಲೆ ಮೀನುಗಳು ನದಿಗೆ ಬರಲೇ ಇಲ್ಲ ಇನ್ಯಾರೋ ನಿಮ್ಮವರೆಗೆ ಬರುವ ಮೊದಲೇ ಹಿಡಿದು ಬಿಟ್ಟಿದ್ದರೆ ನನಗೆ ಸಿಗಲ್ಲ ಅದರರ್ಥ ನಾನೊಬ್ಬ ಸೋತವನಲ್ಲ .ಅವಕಾಶ ವಂಚಿತ ಅಷ್ಟೇ ಸೋತೆ ನನ್ನಿಂದ ಮೀನು ಹಿಡಿಯಲು ಆಗಲ್ಲ ನನಗೆ ಆ ಕಲೆ ಇಲ್ಲ ಎಂದು ಹಿಂಜರಿದರೆ ಆಗ ಸೋತವ ಅಷ್ಟೇ. ಯಶಸ್ಸು ದಕ್ಕದೆ ಹೋದದ್ದಕ್ಕೆ ಕಾರಣ ಏನು ಎಂದು ಅರಿಯುವ ಪ್ರಯತ್ನ ಮಾಡಬೇಕು ಆಗ ಮುಂದೆ ಮಾಡಬೇಕಾದ ಪೂರ್ವ ತಯಾರಿಯ ಅರಿವು ಬರುತ್ತದೆ.

ಫೋಟೋ ಕೃಪೆ : stock.adobe
ಕೊಡಿ ಒಡೆದು ನೀರು ರಸ್ತೆಗೆ ನುಗ್ಗಿದಾಗ ಪಾದ ಮುಳುಗುವ ನೀರಲ್ಲಿ ಮಣ್ಣಾಡುವ ಹುಡುಗನು ಚೀಲ ತುಂಬುವಷ್ಟು ಮೀನು ಹಿಡಿಯುತ್ತಾನೆ. ಹಾಗೆ ಹಿಡಿದು ಬಂದವನ ನೋಡಿ ನಾ ಅವನಿಗಿಂತ ಕಡೆ ಎಂದು ಕುಗ್ಗುವುದು ಬೇಡ. ಗೆದ್ದವರೆಲ್ಲ ಅಸಾಮಾನ್ಯರು, ಗೆಲ್ಲದವರೆಲ್ಲ ಸಾಮಾನ್ಯರು ಅಂತಲ್ಲ … ಗೆದ್ದವರಲ್ಲೆನೇಕ ಸಾಮಾನ್ಯರು ಗೆಲ್ಲದವರಲ್ಲಿ ಅನೇಕ ಅಸಾಮಾನ್ಯರು ಇರುತ್ತಾರೆ.
- ಸಂಜಯ ಏತಿಸ್ಟ್
