ಡಿಸೆಂಬರ್ ೫ ವಿಶ್ವ ಮಣ್ಣಿನ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ಡಿಸೆಂಬರ್ 5 ರಂದು ಮೊದಲ ಬಾರಿಗೆ ವಿಶ್ವ ಮಣ್ಣಿನ ದಿನಾಚರಣೆ ಅಧಿಕೃತವಾಗಿ ಆಚರಣೆಯಾಯಿತು. ಲೇಖಕಿ ಗೀತಾಂಜಲಿ ಎನ್ ಎಮ್ ಅವರು ಈ ದಿನದ ವಿಶೇಷತೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
- ಈ ದಿನವನ್ನು ವಿಶ್ವ ಮಣ್ಣಿನ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ,ಇದರ ಉದ್ದೇಶ ಮಣ್ಣಿನ ಮಹತ್ವವನ್ನು ತಿಳಿಸುವದು ಮತ್ತು ಮಣ್ಣಿನ ಪೋಷಕಾಂಶಗಳ ಅಗತ್ಯಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
ಮಣ್ಣಿನ ವಿಜ್ಞಾನಗಳ ಅಂತರಾಷ್ಟ್ರೀಯ ಒಕ್ಕೂಟ ಐಯುಎಸ್ಎಸ್ 2002 ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್ನಲ್ಲಿ ಎಫ್ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿತು.ನಂತರ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ವಿಶ್ವಮಣ್ಣಿನ ದಿನವನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಲಾಯಿತು ಈ ಮನವಿಯನ್ನು ಪರಿಗಣಿಸಿದ ವಿಶ್ವಸಂಸ್ಥೆ, 2013 ರಲ್ಲಿ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನ ಆಚರಣೆಗೆ ಸಮ್ಮತಿ ಸೂಚಿಸಿತು. ನಂತರ 2014 ಡಿಸೆಂಬರ್ 5 ರಂದು ಮೊದಲ ಬಾರಿಗೆ ವಿಶ್ವ ಮಣ್ಣಿನ ದಿನಾಚರಣೆ ಅಧಿಕೃತವಾಗಿ ಆಚರಣೆಯಾಯಿತು.
- ಜೀವಸಂಕುಲದ ಅಸ್ತಿತ್ವವನ್ನೇ ಉಳಿಸುವ ನಿಸರ್ಗದ ಅಮೂಲ್ಯ ಕೊಡುಗೆ ಮಣ್ಣು ಭೂಮಿಯ ಮೇಲ್ಮೈಯಲ್ಲಿ ಇರುವ ಅತ್ಯಂತ ಅಮೂಲ್ಯವಾದ ನೈಸರ್ಗಿಕ ಸಂಪತ್ತು. ಮಣ್ಣಿಲ್ಲದೆ ಜೀವಸಂಕುಲನ ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಮಾನವ ಸೇರಿ ಜೀವಜಂತು, ಸಸ್ಯ, ಪರಿಸರ ಇವೆಲ್ಲದರ ಬದುಕಿನ ಆಧಾರದ ಮೂಲವೇ ಮಣ್ಣು.! ಮಣ್ಣಿನ ಸಾಮರ್ಥ್ಯವೇ ಜೀವ ಸೃಷ್ಟಿಗೆ ಕಾರಣವಾಗಿದ್ದರೂ ಇಂದು ಮಣ್ಣಿನ ಕಳಪೆ ಸ್ಥಿತಿಯಿಂದಾಗಿ ಮಣ್ಣಿನ ಸವೆತ ತೀವ್ರವಾಗಿ ಆಗುತ್ತಿದ್ದು ಜಗತ್ತಿನಾದ್ಯಂತ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ, ನಮ್ಮ ಬದುಕಿನ ಎಲ್ಲಾ ಸ್ತರಗಳಿಗೂ ಪೂರಕವಾಗಿರುವ ಮಣ್ಣು ಇಂದು ಹಲವು ರೀತಿಯ ಮಾಲಿನ್ಯಗಳಿಗೆ ಸಿಲುಕಿ ಕಲುಷಿತಗೊಳ್ಳುತ್ತಿದೆ ಮತ್ತು ಅದರ ಪೋಷಕಾಂಶ ಮಟ್ಟ ದಿನ ದಿನವೂ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಮನುಷ್ಯನ ದುರಾಸೆ ಎನ್ನಬಹುದು.
- ಮನುಷ್ಯನ ಜೀವನಕ್ಕೆ ಮಣ್ಣು ಅನಿವಾರ್ಯ ನಮ್ಮ ಆಹಾರದ ಮುಖ್ಯ ಮೂಲವೇ ಮಣ್ಣು ಹಾಗಾಗಿ “ಮಣ್ಣಿನ ಪೋಷಣೆ ಪ್ರತಿಯೊಬ್ಬರ ಹೊಣೆ” ಮಣ್ಣು ರೈತನ ಜೀವನಾಡಿ ಆಗಿರುವುದರಿಂದ ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವ ರೈತನಿಗೆ ಚನ್ನಾಗಿ ತಿಳಿದಿರುತ್ತದೆ. ಪೋಷಕಾಂಶದಿಂದ ಕೂಡಿದ ಮಣ್ಣು ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕು. ಮನುಷ್ಯನಿಗೆ ಹೇಗೆ ಪೋಷಕಾಂಶದ ಅಗತ್ಯ ಇರುತ್ತದೆಯೋ ಹಾಗೆಯೇ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ.ಆದರೆ ಇದನ್ನು ಮೂರ್ಖ ಮನುಕುಲ ಅರ್ಥಮಾಡಿ ಕೊಳ್ಳುತ್ತಿದೆಯೇ ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗುತ್ತದೆ. ಮಾನವನ ದೇಹಕ್ಕೆ ಕಣ್ಣು ಹೇಗೆ ಮುಖ್ಯವೂ ಹಾಗೆಯೇ ಮಾನವನ ಬದುಕಿಗೆ ಮಣ್ಣು ಕೂಡ ಮುಖ್ಯ.ನಾವು ಮಣ್ಣನ್ನು ಎಷ್ಟು ಸಂರಕ್ಷಿಸುತ್ತಿದ್ದೇವೆ ಎಷ್ಟು ಆರೋಗ್ಯವಾಗಿ ಇಡುತ್ತಿದ್ದೇವೆಂಬುದನ್ನು ನೋಡಿದಾಗ ಖಂಡಿತ ಆತಂಕವಾಗುತ್ತದೆ. ಭೂಮಿಯ ಮೇಲ್ಮೈ ಪದರವಾಗಿರುವ ಮಣ್ಣು ಸಾವಯವ ಮತ್ತು ಅಜೈವಿಕ ವಸ್ತುಗಳನ್ನು ಒಳಗೊಂಡಿದೆ. ಭೂಮಿಯ ಮೇಲೆ ಪ್ರತೀ ಸಸ್ಯಗಳ ಬೆಳವಣಿಗೆಯ ಜೊತೆ ನಾವು ತಿನ್ನುವ ಆಹಾರ ಬೆಳೆಯಲು ಅಗತ್ಯವಾಗಿ ಫಲಭರಿತ ಮಣ್ಣು ಬೇಕೇ ಬೇಕು ಅಂದಮೇಲೆ ನಾವು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಮುಖ್ಯವಲ್ಲವೇ?ಆದರೆ ಇಂದು ಆಗುತ್ತಿರುವುದೇನು?
- ಪ್ರಸ್ತುತ ಬೆಳವಣಿಗೆಯನ್ನು ನೋಡಿದಾಗ ನಿಜಕ್ಕೂ ಆತಂಕವಾಗುತ್ತದೆ, ಸ್ವಾರ್ಥಿ ಮನುಷ್ಯ ತನ್ನ ದುರಾಸೆಗಾಗಿ ಬೆಳೆಯುವ ಬೆಳೆಯ ಹೆಚ್ಚಿನ ಇಳುವರಿಗಾಗಿ ಅತಿಯಾದ ರಾಸಾಯನಿಕಯುಕ್ತ ಗೊಬ್ಬರವನ್ನು ಬಳಸುತ್ತಿರುವುದರ ಫಲ ಮಣ್ಣು ತನ್ನ ಮೂಲ ರೂಪವನ್ನು ಕಳೆದುಕೊಳ್ಳುತ್ತಿದೆ ಇದು ಸಾಲದು ಎಂಬಂತೆ ಕರಗಲು ಸಾವಿರಾರು ವರುಷ ತೆಗೆದುಕೊಳ್ಳುವ ಪ್ಲ್ಯಾಸ್ಟಿಕ್ ಎಂಬ ನಂಜನ್ನು ನಿತ್ಯವೂ ಭೂಮಿಗೆ ಉಣ್ಣಿಸುತ್ತಿರುವ ಪ್ರತಿಫಲ ಮಣ್ಣು ತನ್ನ ಫಲವತ್ತತೆಯನ್ನೇ ಕಳೆದು ಕೊಳ್ಳುತ್ತಿದೆ,ಈ ಪ್ಲಾಸ್ಟಿಕ್ ಎಂಬ ಕಾರ್ಕೋಟಕ ವಿಷವನ್ನು ಮನುಷ್ಯ ತನ್ನ ಅವನತಿಗಾಗಿಯೇ ಕಂಡುಹಿಡದಂತಿದೆ. ಇದರಿಂದಾಗಿಯೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಪ್ರತಿನಿತ್ಯವೂ ಹೆಚ್ಚುತ್ತಿರುವುದು ಹೀಗೆಯೇ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯವರ ಆರೋಗ್ಯದ ಸ್ಥಿತಿ ಏನಾಗಬಹುದು ಅಲ್ಲವೇ?.
- ಈ ನಿಟ್ಟಿನಲ್ಲಿ ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರು ಪಣತೊಡಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು ತಡೆಗಟ್ಟಬೇಕು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲುಸಬೇಕು ನಮ್ಮ ಭವಿಷ್ಯಕ್ಕೆ ಅಪಾಯವಾದ ಅತಿಯಾದ ರಾಸಾಯನಿಕ ಬಳಕೆ, ಅರಣ್ಯ ನಾಶ, ಮಳೆನೀರು ಹರಿತ ಮತ್ತು ಮಾಲಿನ್ಯದಿಂದ ಮಣ್ಣು ದಿನೇ ದಿನೇ ಬಲಹೀನವಾಗುತ್ತಿದೆ. ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದು ಕೃಷಿ ಉತ್ಪಾದನೆಗೆ ದೊಡ್ಡ ಸವಾಲಾಗಿದೆ.
- ಜನರೂ ಸಹ ಅವಶ್ಯಕವಾಗಿ ಜಾಗೃತರಾಗಬೇಕು ಇಂದಿನ ಯಾಂತ್ರಿಕ ಹಾಗೂ ಮಾಲಿನ್ಯದ ಯುಗದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಉಳಿಸಿಕೊಳ್ಳುವುದು ಒಂದು ಸವಾಲೇ ಸರಿ. ಆದರೆ ಮುಂದೆ ಮನುಕುಲದ ಭವಿಷ್ಯದ ಉಳಿವಿನ ದೃಷ್ಟಿಯಿಂದ ನೋಡಿದಾಗ ಸರ್ಕಾರ ಮಣ್ಣಿನ ಫಲವತ್ತತೆಗೆ ಒತ್ತು ಕೊಟ್ಟು ಹೆಚ್ಚಿನ ಕಾಳಜಿ ಹಾಗೂ ಅರಿವನ್ನು ಪ್ರತಿಯೊಬ್ಬರಲ್ಲಿ ಮೂಡಿಸುವಂತ ಕಾರ್ಯಗಳನ್ನು ಮಾಡಬೇಕು ಮಾನವ ತನ್ನ ದುರಾಸೆಗಾಗಿ ಪ್ರಕೃತಿಯ ಮೇಲೆ ನಿತ್ಯವೂ ನೆಡೆಸುತ್ತಿರುವ ಅತ್ಯಾಚಾರವನ್ನು ನಿಲ್ಲಿಸಿ ಮಣ್ಣಿನ ಮಹತ್ವವನ್ನು ತಿಳಿದುಕೊಂಡು ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ತಾನೇ ಅರಿತು ಪಣತೊಟ್ಟರೆ ಮಾತ್ರವೇ ನಮ್ಮ ಮುಂದಿನ ಪೀಳಿಗೆ ಆರೋಗ್ಯಕರವಾಗಿರಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗೋಣ.
- ಗೀತಾಂಜಲಿ ಎನ್ ಎಮ್ – ಕೊಡಗು.
